ಮಳೆರಾಯನ ಆಗಮನಕ್ಕಾಗಿ ಹೋಮ ಮಾಡಿಸಿದ ಬಾದಾಮಿ ಜನತೆ
ಬಾಗಲಕೋಟೆ, ಜೂನ್.19: ರಾಜ್ಯದ ದಕ್ಷಿಣ ಕನ್ನಡ, ಕೊಡಗು, ಕರಾವಳಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಭಾರೀ ವರ್ಷಧಾರೆಗೆ ನದಿ, ಹಳ್ಳ ಕೊಳ್ಳಗಳು ತುಂಬಿ ಹರಿಯುತ್ತಿದ್ದರೆ ಬಾದಾಮಿಯಲ್ಲಿ ಮಳೆರಾಯನ ಆಗಮನಕ್ಕಾಗಿ ಇಂದು ಮಂಗಳವಾರ ಹೋಮ ಮಾಡಿಸಲಾಯಿತು.
ಗ್ರಾಮದ ಚೌಡಿ ಆವರಣದಲ್ಲಿ ಬೆಳಗ್ಗೆಯಿಂದ ಹೋಮ ಹಾಗೂ ವಿವಿಧ ಪೂಜಾ ಕೈಂಕರ್ಯಗಳನ್ನು ಕೈಗೊಳ್ಳಲಾಯಿತು.
ಸುಮಾರು ಹದಿನೈದಕ್ಕೂ ಹೆಚ್ಚು ಪುರೋಹಿತರು ಬೃಹತ್ ಅಗ್ನಿ ಕುಂಡದಲ್ಲಿ ಹೋಮ ಮಾಡಿದರು. ಜಾತಿಬೇಧ ಮರೆತು ನಗರದ ಹಿರಿಯರು, ಮಹಿಳೆಯರು, ಪ್ರತಿಯೊಬ್ಬರು ಹೋಮ ಹವನದಲ್ಲಿ ಭಾಗವಹಿಸಿದ್ದರು.

ಈ ಬಾರಿ ನಿರೀಕ್ಷೆಯಂತೆ ಮಳೆರಾಯ ಬರುತ್ತಿಲ್ಲ. ಇನ್ನು ಹೆಚ್ಚು ಮಳೆಯಾಗಬೇಕು ಎಂದು ಪೂಜೆ ನೆರವೇರಿಸಿ, ಮಳೆರಾಯನನ್ನು ಪ್ರಾರ್ಥಿಸಿದರು.
ಹೋಮ ಹವನದಲ್ಲಿ ಭಾಗವಹಿಸಿದ್ದ ಜನತೆಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು. ಉತ್ತಮ ಮಳೆಯಾಗುವ ಜತೆಗೆ ನಾಡಿನ ಜನ ಸಮೃದ್ಧವಾಗಿರಬೇಕು. ಕಾಲಕಾಲಕ್ಕೆ ಬೆಳೆ, ರೈತರ ಬದುಕು ಹಸನಾಗಬೇಕು ಎಂದು ಹೋಮ ನಡೆಸಲಾಯಿತು.
ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಬಾಗಲಕೋಟೆ ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗಿಲ್ಲ. ಆದರೆ ಈ ಭಾರಿ ಮುಂಗಾರು ಹಂಗಾಮಿನಲ್ಲಿ ವಾಡಿಕೆಗಿಂತ ಹೆಚ್ಚು ರೋಹಿಣಿ ಮಳೆ ಸುರಿದಿದ್ದು, ರೈತರ ಬಿತ್ತನೆ ಕಾರ್ಯ ಚುರುಕುಗೊಂಡಿರುವುದು ಅಷ್ಟೇ ಸತ್ಯ.

ಕಾಲಕ್ಕೆ ತಕ್ಕಂತೆ ಮಳೆಯಾಗಿದೆ. ಆದರೆ ನಿರೀಕ್ಷೆಗೆ ತಕ್ಕಷ್ಟು ಮಳೆಯಾಗಿಲ್ಲ ಎಂಬುದು ರೈತರ ಬೇಸರ. ಮುಂಗಾರು ಹಂಗಾಮಿನಲ್ಲಿ ರೈತರಿಗೆ ಬೇಕಾಗುವ ಅಗತ್ಯ ರಸಗೊಬ್ಬರ, ಬೀಜಗಳನ್ನು ಪೂರೈಸಲು ಜಿಲ್ಲಾಡಳಿತ ಸನ್ನದ್ಧವಾಗಿದೆ.
ಜಿಲ್ಲೆಯಲ್ಲಿ 18 ಕಡೆ ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ರೈತರ ಸಂಖ್ಯೆಗೆ ಅನುಗುಣವಾಗಿ ಮುಧೋಳ, ಜಮಖಂಡಿ, ಮುಧೋಳ ಕಡೆ ಬೀಜ ಹಾಗೂ ಗೊಬ್ಬರ ವಿತರಿಸುವ ರೈತ ಸಂಪರ್ಕ ಕೇಂದ್ರ ಹೆಚ್ಚುವರಿಯಾಗಿ ಆರಂಭಿಸಲಾಗಿದೆ.












Click it and Unblock the Notifications