ಅಡಿಕೆ ಬೆಳೆಯುವ ರೈತರು ಕೈಗೊಳ್ಳಬೇಕಾದ ಚಟುವಟಿಕೆಗಳು
ಶಿವಮೊಗ್ಗ, ಮೇ 07 : ಮಲೆಗಾಲ ಎದುರಾಗುತ್ತಿದ್ದು ಶಿವಮೊಗ್ಗ ಜಿಲ್ಲಾ ತೋಟಗಾರಿಕೆ ಇಲಾಖೆಯು ರೈತರಿಗೆ ಅಡಿಕೆ ಬೆಳೆಯಲ್ಲಿ ಕೈಗೊಳ್ಳಬೇಕಾಗುವ ಮುನ್ನೆಚ್ಚರಿಕೆ ಹಾಗೂ ಚಟುವಟಿಕೆಗಳ ಮಾಹಿತಿಯನ್ನು ನೀಡಿದೆ. ತೋಟಗಳಲ್ಲಿ ಬಸಿಗಾಲುವೆಗಳನ್ನು ಸ್ವಚ್ಛಗೊಳಿಸಬೇಕು. ಬಸಿಗಾಲುವೆಗಳು ಇಲ್ಲದೆ ಇರುವ ತೋಟಗಳಲ್ಲಿ ರೈತರು ಅಗತ್ಯವಾಗಿ ಬಸಿಗಾಲುವೆಗಳನ್ನು ನಿರ್ಮಿಸುವುದು ಸೂಕ್ತ.
ಫಸಲು ಕೊಡುವ ಪ್ರತಿ ಅಡಿಕೆ ಮರಕ್ಕೆ ಪ್ರತಿ ವರ್ಷ 100 ಗ್ರಾಂ ಸಾರಜನಕ, 40 ಗ್ರಾಂ ರಂಜಕ, 140 ಗ್ರಾಂ ಪೊಟ್ಯಾಶ್ ನೀಡಬೇಕಾಗುತ್ತದೆ, ಕಾಂಪ್ಲೆಕ್ಸ್ ಗೊಬ್ಬರ ಆಗಿದ್ದಲ್ಲಿ 266 ಗ್ರಾಂ 15:15:15 ಗೊಬ್ಬರ ನೀಡಬೇಕು, 126 ಗ್ರಾಂ ಯೂರಿಯಾ ಮತ್ತು 166 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ಬೇಕಾಗುತ್ತದೆ.
ವರ್ಷದಲ್ಲಿ ಸಮ ಪ್ರಮಾಣದಲ್ಲಿ ಎರಡು ಸಲ ಗೊಬ್ಬರ ನೀಡಬೇಕಾಗುತ್ತದೆ. ಮೇ-ಜೂನ್ ತಿಂಗಳನಲ್ಲಿ ಪ್ರತಿ ಗಿಡಕ್ಕೆ 133 ಗ್ರಾಂ 15:15:15 ಗೊಬ್ಬರ ನೀಡಬೇಕು ಅಂದರೆ 62 ಗ್ರಾಂ ಯೂರಿಯಾ ಮತ್ತು 83 ಗ್ರಾಂ ಮ್ಯುರೇಟ್ ಆಫ್ ಪೊಟ್ಯಾಶ್ ನೀಡಬೇಕಾಗುತ್ತದೆ. ಮುಂದುವರೆದು ಇದೇ ಪ್ರಮಾಣದ ಗೂಬ್ಬರವನ್ನು ಸೆಪ್ಟೆಂಬರ್ ಮತ್ತು ಅಕ್ಟೋಬರ್ ತಿಂಗಳಲ್ಲಿ ನೀಡಬೇಕು.
ಪ್ರತಿ ಮರಕ್ಕೆ ಕನಿಷ್ಠ 12 ಕೆ.ಜಿ ಕೊಟ್ಟಿಗೆ/ ಸಾವಯವ ಗೊಬ್ಬರವನ್ನು ಕೊಡಬೇಕು. ಮಣ್ಣು ಪರೀಕ್ಷೆಯ ಆಧಾರದ ಮೇಲೆ ರಾಸಾಯನಿಕ ಗೊಬ್ಬರ ನೀಡುವುದು ಸೂಕ್ತ. ಕೋಕೋ ಹಾಗೂ ಕಾಳುಮೆಣಸು ಬೆಳೆಗೂ ಕೂಡ ಇದೇ ಪ್ರಮಾಣದ ರಸಗೊಬ್ಬರವನ್ನು ನೀಡಬಹುದಾಗಿರುತ್ತದೆ.

ಔಷಧ ಸಿಂಪಡಣೆ
ಅಡಿಕೆಯಲ್ಲಿ ಕೊಳೆರೋಗ ಹಾಗೂ ಸುಳಿ ಕೊಳೆ ರೋಗದ ನಿಯಂತ್ರಣಕ್ಕೆ ಮುಂಜಾಗ್ರತಾ ಕ್ರಮವಾಗಿ ಶೇ.1 ರ ಬೋರ್ಡೋ ದ್ರಾವಣದ ಮೊದಲನೇ ಸಿಂಪರಣೆಯನ್ನು ಮುಂಗಾರು ಪ್ರಾರಂಭದಲ್ಲಿ. (ಮೇ-ಜೂನ್ ತಿಂಗಳುಗಳು) ಒಂದೆರೆಡು ಮಳೆ ಬಿದ್ದ ಕೂಡಲೇ ಸಿಂಪಡಿಸಬೇಕು.

ಬೋರ್ಡೋ ದ್ರಾವಣ
ಅಡಿಕೆ ಕೊಳೆ ರೋಗ ಹಾಗೂ ಸುಳಿಕೊಳೆ ರೋಗಗಳ ಹತೋಟಿಗೆ ಬೇಕಾಗುವ ಶೇ. 1 ರ ಬೋರ್ಡೋದ್ರಾವಣ ವನ್ನು ತಯಾರು ಮಾಡಲು ಒಂದು ಕಿ.ಗ್ರಾಂ. ಮೈಲುತುತ್ತನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಒಂದು ಕಿ.ಗ್ರಾಂ. ಸುಣ್ಣದ ಹರಳನ್ನು 10 ಲೀಟರ್ ನೀರಿನಲ್ಲಿ ಕರಗಿಸಬೇಕು. ಮೈಲುತುತ್ತ ಹಾಗೂ ಸುಣ್ಣದ ತಿಳಿ ನೀರನ್ನು 80 ಲೀಟರ್ ನೀರು ಇರುವ ಪಾತ್ರೆಗೆ ಜೊತೆಯಾಗಿ ಸುರಿದು ಮಿಶ್ರಣ ಮಾಡಬೇಕು.

ಸಮರ್ಪಕವಾದ ಸಿಂಪಡಣೆ
ತಯಾರಿಸಿದ ದ್ರಾವಣ ಸಮತೋಲನವಾಗಿರುವುದನ್ನು (Neutral pH) ನೀಲಿ ಲಿಟ್ಮಸ್ (Blue litmus) ಕಾಗದ (pH paper ) ಬಳಸಿ ಖಾತ್ರಿ ಮಾಡಬೇಕು. ಈ ಮಿಶ್ರಣವು ಆಕಾಶ ತಿಳಿ ನೀಲಿ ಬಣ್ಣಕ್ಕೆ ತಿರುಗುತ್ತಿದ್ದಂತೆ ದ್ರಾವಣದಲ್ಲಿ ಹೆಚ್ಚುವರಿ ತಾಮ್ರದ ಅಂಶ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಚ್ಚುವರಿ ತಾಮ್ರದ ಅಂಶವಿದ್ದಲ್ಲಿ ಇನ್ನು ಸ್ವಲ್ಪ ಸುಣ್ಣದ ತಿಳಿನೀರನ್ನು ತಯಾರಿಸಿ ಈ ದ್ರಾವಣಕ್ಕೆ ಸುರಿಯಬೇಕು. ದ್ರಾವಣವನ್ನು ಅಡಿಕೆ ಸುಳಿ ಹಾಗೂ ಕಾಯಿಗಳ ಗೊಂಚಲಿನ ಎಲ್ಲಾ ಭಾಗಗಳಿಗೆ ಸಮರ್ಪಕವಾಗಿ ಸಿಂಪರಣೆ ಮಾಡಬೇಕು.

ಯಾವಾಗ ಔಷಧ ಸಿಂಪಡಣೆ
ಬೋರ್ಡೋ ದ್ರಾವಣದ ಮೊದಲನೇ ಸಿಂಪರಣೆಯನ್ನು ಮುಂಗಾರು ಪ್ರಾರಂಭದಲ್ಲಿ ಒಂದೆರೆಡು ಮಳೆ ಬಿದ್ದ ಕೂಡಲೇ ಸಿಂಪಡಿಸಬೇಕು. ಮೊದಲ ಸಿಂಪರಣೆಯ ನಂತರ 35 ರಿಂದ 40 ದಿನಗಳ ಅಂತರದಲ್ಲಿ ವಾತಾವರಣವನ್ನು ಅನುಸರಿಸಿಕೊಂಡು ಇನ್ನೊಂದು ಸುತ್ತಿನ ಸಿಂಪರಣೆ ಕೈಗೊಳ್ಳಬೇಕು. ಮುಂದೆ ಅಗತ್ಯವಿದ್ದಲ್ಲಿ ಮೂರನೇ ಸಿಂಪರಣೆಯನ್ನು ಎರಡನೇ ಸಿಂಪರಣೆಯಾದ 35 ರಿಂದ 40 ದಿನಗಳಲ್ಲಿ ಕೈಗೊಳ್ಳಬೇಕು.












Click it and Unblock the Notifications