ಅತಿವೃಷ್ಟಿ; ಕೃಷಿ ಇಲಾಖೆಯಿಂದ ರೈತರಿಗೆ ಬೆಳೆಗಳ ನಿರ್ವಹಣೆ ಸಲಹೆಗಳು
ಕೊಪ್ಪಳ, ಜುಲೈ 30; ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಕೆಲವು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಬಿತ್ತಿದಂತಹ ಮುಂಗಾರಿನ ಬೆಳೆಗಳ ಬೆಳೆವಣಿಗೆ ಕುಂಠಿತಗೊಂಡಿದ್ದು, ಅವುಗಳ ನಿರ್ವಹಣೆಗಾಗಿ ರೈತರು ಕ್ರಮವನ್ನು ಅನುಸರಿಸಲು ಕೃಷಿ ಇಲಾಖೆಯಿಂದ ಕೆಲವು ಸಲಹೆಗಳನ್ನು ನೀಡಲಾಗಿದೆ.
ಪ್ರಸ್ತುತ ಅತಿವೃಷ್ಟಿಯಲ್ಲಿ ಹೊಲದಲ್ಲಿ ನಿಂತಿರುವ ನೀರನ್ನು ಹೊರಹಾಕಲು ಏರ್ಪಾಡು ಮಾಡಬೇಕು. ಹೊಲದಲ್ಲಿ ಅಲ್ಲಲ್ಲಿ ಬಸಿಗಾಲುವೆಗಳನ್ನು ಮಾಡಿ ಮಣ್ಣಿನಲ್ಲಿ ಇರುವ ಹೆಚ್ಚಾದ ನೀರನ್ನು ಬಸಿದು ಹೋಗುವಂತೆ ನೋಡಿಕೊಳ್ಳಬೇಕು. ಬೆಳೆಗಳ ಚೈತನ್ಯಕ್ಕೆ ಆಯಾ ಬೆಳೆಗಳಿಗೆ ಶಿಫಾರಸ್ಸಿನಂತೆ ಸಾರಜನಕವನ್ನು ಮೇಲು ಗೊಬ್ಬರವಾಗಿ ಕೊಡಬೇಕು.

ಸತತ ಮಳೆಯಿಂದ ಬೆಳೆಗಳಲ್ಲಿ ಕಳೆಯ ಪ್ರಮಾಣ ಹೆಚ್ಚಾಗಿರುವ ಕಾರಣ ಆಯಾ ಬೆಳೆಗಳಿಗೆ ಶಿಫಾರಸ್ಸು ಮಾಡಿರುವ ಕಳೆನಾಶಕಗಳನ್ನು ಸಿಂಪರಣೆ ಮಾಡಿ ಕಳೆಗಳನ್ನು ನಿರ್ವಹಣೆ ಮಾಡಬೇಕು ಎಂದು ಸಲಹೆ ನೀಡಲಾಗಿದೆ.
ಶೇಂಗಾ ಬೆಳೆ; ಸತತ ಮಳೆಯಿಂದ ಶೇಂಗಾ ಬೆಳೆಯ ಎಲೆಗಳು ಹಳದಿ ಬಣ್ಣಕ್ಕೆ ತಿರುಗಿರುವುದರಿಂದ ಶೇ. 0.8 ಕಬ್ಬಿಣದ ಸಲ್ವೇಟ್ ಮತ್ತು ಶೇ. 0.5 ರ ಸತುವಿನ ಸಲ್ವೇಟ್ ದ್ರಾವಣವನ್ನು 15 ದಿವಸದ ಅಂತರದಲ್ಲಿ ಎರಡು ಸಲ ಸಿಂಪಡಿಸಬೇಕು.
ಪ್ರತಿ ಲೀಟರ್ ನೀರಿಗೆ 5 ಗ್ರಾಂ 15:0:45 ಲಘು ಪೋಷಕಾಂಶ ಸಿಂಪರಣೆ ಕೈಗೊಳ್ಳಬೇಕು. ಹೆಚ್ಚಿನ ಮಳೆಯಿಂದ ಗೋವಿನ ಜೋಳದಲ್ಲಿ ಅಲ್ಲಲ್ಲಿ ಕಾಂಡ ಕೊಳೆರೋಗ ಕಂಡು ಬಂದಿದ್ದು ಇದರ ನಿರ್ವಹಣೆಗಾಗಿ 3 ಗ್ರಾಂ ತಾಮ್ರದ ಆಕ್ಸಿಕ್ಲೋರೈಡ್ ಮತ್ತು 0.5 ಗ್ರಾಂ ಸ್ಪ್ರೆಷ್ಟೋಮೈಸಿನ್ ಸಲ್ಫೇಟ್ ಬೆರೆಸಿದ ದ್ರಾವಣ ಬೇರು ತೊಯ್ಯುವಂತೆ ಮಣ್ಣಿಗೆ ಹಾಕಬೇಕು.
ಗೋವಿನ ಜೋಳ; ಗೋವಿನ ಜೋಳದಲ್ಲಿ ಶೇ. 20-25 ರಷ್ಟು ಫಾಲ್ ಸೈನಿಕ ಹುಳುವಿನ ಬಾಧೆ ಕಂಡು ಬಂದಿದ್ದು, ಕೂಡಲೇ ನಿರ್ವಹಣೆಗೆ 0.2 ಗ್ರಾಂ ಇಮಾಮಕ್ಟಿನ್ ಬೆಂಝೊಯೇಟ್ ಅಥವಾ 0.2 ಮಿಲಿ ಸ್ಪೈನೋಸ್ಯಾಡ್ ಅಥವಾ 0.4 ಮಿಲಿ ಕ್ಲೋರಾಂಟ್ರಿನಿಲಿಪೋಲ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸುಳಿಯಲ್ಲಿ ಬೀಳುವ ಹಾಗೆ ಸಿಂಪಡಿಸಬೇಕು.
ಸಿಂಪರಣೆಯನ್ನು ಸಾಯಂಕಾಲದ ಸಮಯದಲ್ಲಿ ಕೈಗೊಳ್ಳುವುದು ಉತ್ತಮ. ಪ್ರತಿ ಲೀಟರ್ ನೀರಿಗೆ 19:19:19 ನೀರಿನಲ್ಲಿ ಕರಗುವ ಗೊಬ್ಬರವನ್ನು 5 ಗ್ರಾಂ ನಂತೆ ಬೆರೆಸಿ ಸಿಂಪಡಿಸಬೇಕು. ರಸ ಹೀರುವ ಕೀಟಗಳ ನಿರ್ವಹಣೆಗಾಗಿ 0.25 ಗ್ರಾಂ ಅಸಿಟಾಮಾಪ್ರೀಡ್ ಅಥವಾ 0.25 ಗ್ರಾಂ ಥೈಯೋಮಿಥೋಗ್ರಾಮ್ ಅಥವಾ 0.2 ಮಿಲೀ ಪ್ಲೋನಿಕಮೈನಡ್ ಕೀಟನಾಶಕವನ್ನು ಸಿಂಪಡಿಸಬೇಕು.
ಸೂರ್ಯಕಾಂತಿ; ಸೂರ್ಯಕಾಂತಿ ಬೆಳೆ ಬೆಳೆಯುವ ರೈತರು ಆಗಸ್ಟ್ 15ನೇ ತಾರೀಖಿನ ನಂತರ ಬಿತ್ತನೆ ಕೈಗೊಳ್ಳಬಹುದು ಹೊಲದ ಸುತ್ತಲು ಕನಿಷ್ಠ 4 ರಿಂದ 5 ಸಾಲು ಎತ್ತರವಾಗಿ ಬೆಳೆಯುವ ಜೋಳ, ಸಜ್ಜೆ, ಗೋವಿನ ಜೋಳವನ್ನು ದಟ್ಟವಾಗಿ ಬಿತ್ತಬೇಕು. ಹೊಲದ ಸುತ್ತಮುತ್ತಲು ಪಾರ್ಥೆನಿಯಂ ಮತ್ತು ಇತರೆ ಕಳೆಗಳಿಂದ ಮುಕ್ತವಾಗಿರಿಸಬೇಕು.
ರೈತರು ಹೆಚ್ಚಿನ ಮಾಹಿತಿಗಾಗಿ ಸಮೀಪದ ಸಹಾಯಕ ಕೃಷಿ ನಿರ್ದೇಶಕರ ಕಚೇರಿ, ಕೃಷಿ ವಿಜ್ಞಾನ ಕೇಂದ್ರ, ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.












Click it and Unblock the Notifications