ಬೇಸಿಗೆ ಜೊತೆಗೆ ದ್ರಾಕ್ಷಿ, ಕಲ್ಲಂಗಡಿ ಮೇಳ ಆರಂಭ
ಬೆಂಗಳೂರು, ಫೆ.20 : ಬೇಸಿಗೆ ಆರಂಭವಾಗುತ್ತಿದ್ದಂತೆ ಬೆಂಗಳೂರಿನಲ್ಲಿ ಹಾಪ್ಕಾಮ್ಸ್ ದ್ರಾಕ್ಷಿ ಮತ್ತು ಕಲ್ಲಂಗಡಿ ಮೇಳ ಆರಂಭಿಸಿದೆ. ಬುಧವಾರ ಮೇಳಕ್ಕೆ ಚಾಲನೆ ದೊರಕಿದ್ದು, ಮುಂದಿನ ಎರಡೂವರೆ ತಿಂಗಳ ಕಾಲ ಈ ಮೇಳ ನಡೆಯಲಿದೆ. ನಗರದ 20 ಸ್ಥಳಗಳಲ್ಲಿ ನೀವು ವಿವಿಧ ಬಗೆಯ ದ್ರಾಕ್ಷಿ ಮತ್ತು ಕಲ್ಲಂಗಡಿಯನ್ನು ಖರೀದಿಸಲು ವ್ಯವಸ್ಥೆ ಮಾಡಲಾಗಿದೆ.
ಬುಧವಾರ ಹಡ್ಸನ್ ವೃತ್ತದ ಬಳಿ ಇರುವ ಹಾಪ್ ಕಾಮ್ಸ್ ನಲ್ಲಿ ಸಾರಿಗೆ ಮತ್ತು ಬೆಂಗಳೂರು ನಗರ ಉಸ್ತುವಾರಿ ಸಚಿವ ರಾಮಲಿಂಗಾ ರೆಡ್ಡಿ ದ್ರಾಕ್ಷಿ ಮತ್ತು ಕ್ಲಲಂಗಡಿ ಮೇಳಕ್ಕೆ ಚಾಲನೆ ನೀಡಿದ್ದಾರೆ. ಮುಂದಿನ ಎರಡೂವರೆ ತಿಂಗಳ ಕಾಲ ಮೇಳ ನಡೆಯಲಿದ್ದು, ಪ್ರತಿ ಕೆಜಿ ದ್ರಾಕ್ಷಿ ದರ 25 ರೂ.ನಿಂದ ಆರಂಭವಾಗುತ್ತದೆ.

ಥಾಮ್ಸನ್ ಸೀಟ್ ಲೆಸ್, ಸೊನಾಕಾ ಶರದ್, ಕೃಷ್ಣ ಶರದ್, ತಾಜ್ ಎ ಗಣೇಶ್, ಇಂಡಿಯನ್ ಬ್ಲಾಕ್ ಗ್ಲೋಬ್, ರೆಡ್ ಗ್ಲೋನ್, ಫ್ಲೇಮ್ ಸೀಡ್ ಲೆಸ್ ಸೇರಿದಂತೆ 9 ಬಗೆಯ ದ್ರಾಕ್ಷಿಗಳು ಮತ್ತು ಅರ್ಕಾಮಾಣಿಕ್ ಮತ್ತು ಕಿರಣ್ ಕಲ್ಲಂಗಡಿ ಹಣ್ಣುಗಳನ್ನು ಮೇಳದಲ್ಲಿ ನೋಡಬಹುದಾಗಿದೆ. ಫೆ.19ರಂದು ಮೇಳ ಆರಂಭವಾಗಿದ್ದು, ಮುಂದಿನ ಎರಡೂವರೆ ತಿಂಗಳ ಕಾಲ ಮೇಳ ನಡೆಯಲಿದೆ. [ಹಾಪ್ಕಾಮ್ಸ್ನಲ್ಲಿ ಇನ್ನು ವೈನ್ ಲಭ್ಯ]
ಹಾಪ್ಕಾಮ್ಸ್ ಮಾರಾಟ ಮಳಿಗೆಗಳು, ಸರ್ಕಾರಿ/ಅರೆ ಸರ್ಕಾರಿ, ಖಾಸಗಿ ಸಂಘ ಸಂಸ್ಥೆಗಳ ಆವರಣ ಸೇರಿದಂತೆ ಒಟ್ಟು 20 ಸ್ಥಳಗಳಲ್ಲಿ ಮೇಳ ನಡೆಯುತ್ತಿದೆ. ಬಿಜಾಪುರ, ಬಾಗಲಕೋಟೆ, ಕೊಪ್ಪಳ, ಕೋಲಾರ, ಬೆಂಗಳೂರು ಗ್ರಾಮಾಂತರ ಮುಂತಾದ ಜಿಲ್ಲೆಗಳಿಂದ ನೇರವಾಗಿ ರೈತರಿಂದ ಖರೀದಿಸಿದ ದ್ರಾಕ್ಷಿ ಮತ್ತು ಕಲ್ಲಂಗಡಿ ಹಣ್ಣುಗಳನ್ನು ಮೇಳದಲ್ಲಿ ಪ್ರದರ್ಶಿಸಲಾಗುತ್ತಿದೆ. [ಹಾಪ್ಕಾಮ್ಸ್ನಲ್ಲಿ ಆರ್ಗಾನಿಕ್ ಕಾರ್ನರ್]
ಈ ಬಾರಿಯ ಮೇಳದಲ್ಲಿ 800 ಮೆಟ್ರಿಕ್ ಟನ್ ದ್ರಾಕ್ಷಿ ಹಾಗೂ 2500 ಮೆಟ್ರಿಕ್ ಟನ್ ಕಲ್ಲಂಗಡಿಯನ್ನು ಮಾರಾಟ ಮಾಡುವ ಗುರಿಯನ್ನು ಹೊಂದಿದ್ದೇವೆ ಎಂದು ಹಾಪ್ಕಾಮ್ಸ್ ಅಧ್ಯಕ್ಷೆ ನಾಗವೇಣಿ ಚಂದ್ರಶೇಖರ ರೆಡ್ಡಿ ಹೇಳಿದ್ದಾರೆ. ನಗರದ 25 ಕಡೆಗಳಲ್ಲಿ ಹೊಸದಾಗಿ ಹಾಪ್ ಕಾಮ್ಸ್ ಮಳಿಗೆ ತೆರೆಯಲು ತೋಟಗಾರಿಕಾ ಇಲಾಖೆ ಚಿಂತನೆ ನಡೆಸಿದೆ ಎಂದು ಅವರು ತಿಳಿಸಿದ್ದಾರೆ.












Click it and Unblock the Notifications