ಧಾರವಾಡ : ಸಸ್ಯಸಂತೆಗೆ ಜನಸಾಗರ, ಮಾವಿನ ಗಿಡಕ್ಕೆ ಹೆಚ್ಚು ಬೇಡಿಕೆ
ಧಾರವಾಡ, ಜುಲೈ 04 : ಕರ್ನಾಟಕ ತೋಟಗಾರಿಕಾ ಇಲಾಖೆಯ 'ಸಸ್ಯಸಂತೆ' ಕಾರ್ಯಕ್ರಮಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಸ್ಯ ಸಂತೆ ಎಂಬ ಕಾರ್ಯಕ್ರಮವನ್ನು ಇಲಾಖೆಯು ಕಳೆದ ಎರಡು ವರ್ಷಗಳಿಂದ ನಡೆಸುತ್ತಿದೆ.
ಬದಲಾಗುತ್ತಿರುವ ಹವಾಮಾನ, ಜಾಗತಿಕ ತಾಪಮಾನ ಏರಿಕೆ ಪ್ರಪಂಚದಾದ್ಯಂತ ಎಲ್ಲ ರಾಷ್ಟ್ರಗಳು ಎದುರಿಸುತ್ತಿರುವ ಸವಾಲಾಗಿದೆ. ಈ ಜಾಗತಿಕ ಗಂಡಾಂತರ ತಡೆಗಟ್ಟಲು ಎಲ್ಲ ದೇಶಗಳು ಪರಿಸರ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿವೆ.
ಕರ್ನಾಟಕದ ಜನರಲ್ಲಿನ ಹಸಿರು ಪ್ರೀತಿಯನ್ನು ಜಾಗೃತಗೊಳಿಸಿ, ಪ್ರತಿ ವರ್ಷ ಮಳೆಗಾಲದಲ್ಲಿ ಜನರ ಬೇಡಿಕೆಗನುಸಾರವಾಗಿ ಸಸಿಗಳನ್ನು ಪೂರೈಸುವ 'ಸಸ್ಯ ಸಂತೆ' ಕಾರ್ಯಕ್ರಮವನ್ನು ತೋಟಗಾರಿಕೆ ಇಲಾಖೆಯು ಕಳೆದ ಎರಡು ವರ್ಷಗಳಿಂದ ನಿರ್ವಹಿಸಿಕೊಂಡು ಬರುತ್ತಿದೆ.

ಧಾರವಾಡದ ತೋಟಗಾರಿಕೆ ಉಪನಿರ್ದೇಶಕರ ಕಚೇರಿ ಆವರಣದಲ್ಲಿ ಕಳೆದ ಜೂನ್ 25 ರಂದು ಸಸ್ಯ ಸಂತೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿದೆ. ಪ್ರತಿದಿನ ಸಸ್ಯಪ್ರೇಮಿಗಳನ್ನು ಸಂತೆ ಸೆಳೆಯುತ್ತ ಸಾಗಿದೆ. ಸಸಿ ನೆಡಲು ಸೂಕ್ತವಾಗಿರುವ ಮಳೆಗಾಲದಲ್ಲಿ ಉತ್ತಮ ಗುಣಮಟ್ಟದ ಸಸಿಗಳು ದೊರೆಯುತ್ತಿರುವುದರಿಂದ ನಗರ ಪ್ರದೇಶಗಳ ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗದ ರೈತರು ಮತ್ತು ಸಾರ್ವಜನಿಕರಿಗಾಗಿ ಕುಂದಗೋಳ ತಾಲೂಕಿನ ಜಿಗಳೂರು ತೋಟಗಾರಿಕೆ ಕ್ಷೇತ್ರ, ಕಲಘಟಗಿ ತಾಲೂಕಿನ ದಾಸ್ತಿಕೊಪ್ಪ ತೋಟಗಾರಿಕೆ ಕ್ಷೇತ್ರ ಹಾಗೂ ನವಲಗುಂದದ ತೋಟಗಾರಿಕೆ ಕಾರ್ಯಾಲಗಳಲ್ಲಿಯೂ ಸಸ್ಯ ಸಂತೆಗಳು ನಡೆಯುತ್ತಿವೆ.
ಯಾವ-ಯಾವ ಸಸ್ಯಗಳು : ಮಾವು, ಕರಿಬೇವು, ನುಗ್ಗೆ, ಪಪ್ಪಾಯ, ತೆಂಗು, ನಿಂಬೆ ಹಾಗೂ ವಿವಿಧ ಅಲಂಕಾರಿಕ ಸಸ್ಯಗಳು ರಿಯಾಯಿತಿ ದರದಲ್ಲಿ ಮಾರಾಟವಾಗುತ್ತಿವೆ. ಆಪೂಸ್ ತಳಿಯ ಮಾವಿನ ಸಸಿಗಳನ್ನು ಎರಡು ಊಟೆ ಕಸಿ ವಿಧಾನದಲ್ಲಿ ಅಭಿವೃದ್ಧಿಪಡಿಸಿ ಮಾರಾಟ ಮಾಡಲಾಗುತ್ತಿದೆ.
ಜೂನ್ ತಿಂಗಳಿನಲ್ಲಿಯೇ 6 ಸಾವಿರ ಮಾವಿನ ಸಸಿಗಳು ಮಾರಾಟವಾಗಿವೆ. ನೆರೆಯ ಜಿಲ್ಲೆಗಳಿಂದಲೂ ಇಲ್ಲಿನ ಮಾವಿನ ಸಸಿಗಳಿಗೆ ಬೇಡಿಕೆ ಬರುತ್ತಿದೆ. ದೂರದ ಚಾಮರಾಜನಗರ ಜಿಲ್ಲೆಗೂ ಧಾರವಾಡದಿಂದ ಮಾವಿನ ಸಸಿಗಳನ್ನು ಕಳಿಸಲಾಗಿದೆ.

ತೋಟಗಾರಿಕೆ ಇಲಾಖೆಯು ರಾಜ್ಯದ ಬಹುತೇಕ ಎಲ್ಲಾ ಜಿಲ್ಲೆ ಮತ್ತು ತಾಲೂಕುಗಳಲ್ಲಿ ನರ್ಸರಿ ಹೊಂದಿದೆ. ಇಲ್ಲಿ ಬೆಳೆಯಲಾಗುವ ಸಸಿಗಳಿಗೆ ಸಕಾಲಕ್ಕೆ ಮಾರುಕಟ್ಟೆ ಒದಗಿಸುವ ಉದ್ದೇಶದಿಂದ ಕಳೆದ ಎರಡು ವರ್ಷಗಳಿಂದ ಸಸ್ಯ ಸಂತೆ ಕಾರ್ಯಕ್ರಮ ನಡೆಸಲಾಗುತ್ತಿದೆ.
ಖಾಸಗಿಯಾಗಿ ಸಾಕಷ್ಟು ನರ್ಸರಿಗಳಲ್ಲಿ ಬಗೆ ಬಗೆಯ ಸಸಿಗಳ ತಳಿಗಳು ಸಿಗುತ್ತವೆ. ಆದರೆ, ಅವುಗಳ ತಳಿ ಮತ್ತು ಗುಣಮಟ್ಟಕ್ಕಿಂತಲೂ ತೋಟಗಾರಿಕೆ ಇಲಾಖೆಯ ನರ್ಸರಿಗಳಲ್ಲಿ ಅಭಿವೃದ್ಧಿಪಡಿಸಲಾದ ತಳಿಗಳ ಬಗೆಗೆ ಜನರಿಗೆ ಹೆಚ್ಚು ನಂಬಿಕೆ, ವಿಶ್ವಾಸ ಇರುತ್ತದೆ. ಆದ್ದರಿಂದ ಸಸ್ಯಸಂತೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.












Click it and Unblock the Notifications