Garlic Price Hike: ಬೆಳ್ಳುಳ್ಳಿ ಕಳ್ಳತನ ತಪ್ಪಿಸಲು ಹೊಲಕ್ಕೆ ಸಿಸಿಟಿವಿ ಅಳವಡಿಸಿದ ರೈತ!
ಭೋಪಾಲ್, ಫೆಬ್ರವರಿ.23: ಒಂದೆಡೆ ಸಿಲಿಂಡರ್ ಬೆಲೆ ಏರಿಕೆಯಿಂದ ಬೇಸತ್ತಿರುವ ಜನರು ಇದೀಗ ತರಕಾರಿ ಬೆಲೆ ಏರಿಕೆಯಿಂದ ಜೇಬು ಖಾಲಿ ಮಾಡಿಕೊಳ್ಳಲು ಆರಂಭಿಸಿದ್ದಾರೆ. ಈರುಳ್ಳಿ, ಆಲೂಗೆಡ್ಡೆ ಹೊರತುಪಡಿಸಿ ಉಳಿದ ತರಕಾರಿಗಳ ಬೆಲೆ ನಿಧಾನಕ್ಕೆ ಏರಿಕೆಯಾಗುತ್ತಿದೆ. ಅದರಲ್ಲಿ ಬೆಳ್ಳುಳ್ಳಿ ಬೆಲೆ ಗಗನಕ್ಕೆ ಏರಿದೆ.
ಬೆಲೆ ಏರಿಕೆಯಾಗುತ್ತಿರುವಂತೆಯೇ ಬೆಳ್ಳುಳ್ಳು ಬೆಳೆದ ರೈತರು ಒಂದೆಡೆ ಖುಷಿ ಪಟ್ಟರೇ ಮತ್ತೊಂದೆಡೆ ಆತಂಕ ಪಡುತ್ತಿದ್ದಾರೆ. ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿಯ ಬೆಲೆ ಕೆಜಿಗೆ 300, 400 ರೂಪಾಯಿಯಿಂದ 500 ರೂಪಾಯಿಗೆ ತಲುಪಿದ್ದು ರೈತರು ಉತ್ತಮ ಆದಾಯ ಪಡೆಯುತ್ತಿದ್ದಾರೆ. ಇದರ ಬೆನ್ನಲ್ಲೆ ಬೆಳೆ ಕಳ್ಳತನವಾಗುವ ಭಯ ಕೂಡ ಅನೇಕ ರೈತರಲ್ಲಿ ಕಾಣುತ್ತಿದೆ. ಇದಕ್ಕಾಗಿ ವಿನೂತನ ಪರಿಹಾರಗಳನ್ನು ಕಂಡುಕೊಳ್ಳುತ್ತಿದ್ದಾರೆ.

ಇದೇ ಕಾರಣಕ್ಕೆ ಮಧ್ಯಪ್ರದೇಶದ ರೈತರೊಬ್ಬರು ತಮ್ಮ ಹೊಲಕ್ಕೆ ಸಂಪೂರ್ಣವಾಗಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ಹೌದು.. ಮಧ್ಯಪ್ರದೇಶದ ರೈತ ರಾಹುಲ್ ದೇಶಮುಖ್ ತಮ್ಮ 13 ಎಕರೆ ಹೊಲದಲ್ಲಿ ಬೆಳ್ಳುಳ್ಳಿ ಬೆಳೆಯಲು 25 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದಾರೆ. ಮಾರುಕಟ್ಟೆಯಲ್ಲಿ ಈಗಾಗಲೇ ಬೆಳ್ಳುಳ್ಳಿ ಮಾರಾಟದಿಂದ ಸುಮಾರು 1 ಕೋಟಿ ರೂಪಾಯಿಗಳ ಗಮನಾರ್ಹ ಲಾಭವನ್ನು ಪಡೆದಿದ್ದಾರೆ.
ಹೀಗಾಗಿಯೇ ತಮ್ಮ ತಮ್ಮ ಬೆಳೆಯನ್ನು ರಕ್ಷಿಸಲು ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದ್ದಾರೆ. ತಮ್ಮ ಹೊಲದಲ್ಲಿ ರಾಹುಲ್ ದೇಶಮುಖ್ ಅವರು ಸೌರಶಕ್ತಿಯನ್ನು ಬಳಸಿಕೊಳ್ಳುವುದು ಮತ್ತು ಮೊಬೈಲ್ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವುದರ ಮೂಲಕ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುತ್ತಿದ್ದಾರೆ.
"ನಾಲ್ಕು ಎಕರೆ ಬೆಳ್ಳುಳ್ಳಿ ಬೆಳೆದ ಹೊಲದ ಮೇಲೆ ಮೂರು ಕ್ಯಾಮೆರಾಗಳನ್ನು ಅಳವಡಿಸಲಾಗಿದೆ" ಎಂದು ರಾಹುಲ್ ದೇಶಮುಖ್ ಹೇಳಿದ್ದಾರೆ. ಇನ್ನು, ಇವರಂತೆ ಬದ್ನೂರಿನ ಪವನ್ ಚೌಧರಿ ಎಂಬ ರೈತ ಕೂಡ 4 ಎಕರೆ ಬೆಳ್ಳುಳ್ಳಿ ಬೆಳೆಗೆ 4 ಲಕ್ಷ ಬಂಡವಾಳ ಹಾಕಿ 6 ಲಕ್ಷ ಲಾಭ ಗಳಿಸಿದ್ದು, ಭದ್ರತೆಗಾಗಿ ಮೂರು ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದಾರೆ.

"ನನ್ನ ಹೊಲದ ಮೇಲೆ ಕಣ್ಣಿಡಲು ನಾನು ಮೂರು ಸಿಸಿಟಿವಿ ಕ್ಯಾಮೆರಾಗಳನ್ನು ಹಾಕಿದ್ದೇನೆ. ಅವುಗಳಲ್ಲಿ ಎರಡು ನನಗೆ ಸೇರಿದ್ದು, ಒಂದು ಬಾಡಿಗೆಗೆ ಇದೆ. ನನ್ನ ಹೊಲಗಳಲ್ಲಿ ಬೆಳ್ಳುಳ್ಳಿ ಕಳ್ಳತನವಾಗುತ್ತಿದ್ದರಿಂದ ನಾನು ಈ ಕೆಲಸ ಮಾಡಬೇಕಾಯಿತು" ಎಂದು ತಿಳಿಸಿದ್ದಾರೆ.
ಸಾಮಾನ್ಯವಾಗಿ ಪ್ರತಿ ವರ್ಷ ಕೆ.ಜಿ.ಗೆ 80 ರೂ.ಗೆ ಮಾರಾಟವಾಗುತ್ತಿದ್ದ ಬೆಳ್ಳುಳ್ಳಿ ಈ ಋತುವಿನಲ್ಲಿ ಕೆಜಿಗೆ 300 ರೂಪಾಯಿಗಿಂತ ಹೆಚ್ಚು ಬೆಲೆ ಏರಿಕೆ ಕಂಡಿದೆ. ಬೆಲೆ ಏರಿಕೆಗೆ ಪ್ರಾಥಮಿಕ ಕಾರಣವೆಂದರೆ ಉತ್ಪಾದನೆ ಕಡಿಮೆಯಾಗಿರುವುದು. ಅಕ್ಟೋಬರ್ ಮತ್ತು ನವೆಂಬರ್ನಲ್ಲಿ ಹಲವಾರು ರಾಜ್ಯಗಳಲ್ಲಿ ಅಕಾಲಿಕ ಮಳೆಯಾಗಿದ್ದು ಕೂಡ ಬೆಲೆ ಏರಿಕೆಗೆ ಕಾರಣವಾಗಿದೆ.












Click it and Unblock the Notifications