ರೈತರಿಗೆ ನೆಮ್ಮದಿ ನೀಡಿದ ಬಿಎಸ್ವೈ: ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
ಬೆಂಗಳೂರು, ಜುಲೈ 29: ಒಂದೆಡೆ ಬರಗಾಲ, ಇನ್ನು ಕೆಲವೆಡೆ ವಿಪರೀತ ಮಳೆಯಿಂದ ಬೆಳೆದ ಬೆಳೆ ಕೈಗೆ ಬಾರದೆ ಸಂಕಷ್ಟಕ್ಕೆ ಒಳಗಾಗಿರುವ ರೈತರಿಗೆ ನೂತನ ಸರ್ಕಾರ ತುಸು ನೆಮ್ಮದಿ ನೀಡಿದೆ.
ಬೆಳೆ ಹಾನಿಯಿಂದ ವಿಮೆ ರೂಪದಲ್ಲಿ ಪರಿಹಾರ ಪಡೆಯಲು ರೈತರಿಗೆ ಇರುವ ಸೌಲಭ್ಯವನ್ನು ಪಡೆದುಕೊಳ್ಳಲು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತೊಂದು ಅವಕಾಶ ನೀಡಿದ್ದಾರೆ.
ಪ್ರಸ್ತುತ ಬೆಳೆ ವಿಮೆ ಸೌಲಭ್ಯಕ್ಕೆ ಅರ್ಜಿ ಸಲ್ಲಿಸಲು ಜುಲೈ 29 ಕೊನೆಯ ದಿನವಾಗಿತ್ತು. ಆದರೆ, ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಿದ ದಿನವೇ ಯಡಿಯೂರಪ್ಪ ಅವರು ಬೆಳೆ ವಿಮೆಯ ನೋಂದಣಿ ಅವಧಿಯನ್ನು ಆಗಸ್ಟ್ 14ರವರೆಗೆ ವಿಸ್ತರಿಸಿದ್ದಾರೆ. ಈ ಬಗ್ಗೆ ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಅಗತ್ಯವಿದ್ದರೆ ಕೇಂದ್ರಕ್ಕೆ ಸೂಕ್ತ ಪ್ರಸ್ತಾವನೆ ಸಲ್ಲಿಸುವಂತೆಯೂ ಅವರು ಹೇಳಿದ್ದಾರೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಅನೇಕ ಕಾರಣಗಳಿಂದ ಬೆಳೆ ವಿಮೆ ನೋಂದಣಿ ಪ್ರಮಾಣ ತೀರಾ ಕಡಿಮೆ ಮಟ್ಟದಲ್ಲಿದೆ. ಹೀಗಾಗಿ ವಿಮೆ ನೋಂದಣಿ ಅವಧಿಯನ್ನು ವಿಸ್ತರಿಸಬೇಕು. ಅಗತ್ಯಬಿದ್ದರೆ ಕೇಂದ್ರಕ್ಕೆ ಈ ಕುರಿತು ಪ್ರಸ್ತಾವನೆ ಸಲ್ಲಿಸಬೇಕು ಎಂದು ಆರ್ಥಿಕ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬೆಳೆ ವಿಮೆ ನೋಂದಣಿಗೆ ಜುಲೈ 29ರ ಗಡುವು ನೀಡಲಾಗಿತ್ತು. ಅಂತಿಮ ದಿನಾಂಕದೊಳಗೆ ಹೆಚ್ಚಿನ ಸಂಖ್ಯೆಯಲ್ಲಿ ನೋಂದಣಿ ಮಾಡಿಕೊಳ್ಳುವಂತೆ ಕೃಷಿ ಇಲಾಖೆ ಸೂಚನೆ ನೀಡಿತ್ತು. ಮಳೆ ಅನಿಶ್ಚಿತೆಯಿಂದ ಈ ಬಾರಿ ಅಧಿಕ ಪ್ರಮಾಣದಲ್ಲಿ ಬೆಳೆ ನಷ್ಟ ಉಂಟಾಗಿತ್ತು. ಆದರೆ, ವಿಮೆ ನೋಂದಣಿಗೆ ಹೆಸರು ನೀಡಿದ ರೈತರ ಸಂಖ್ಯೆ ತೀರಾ ಕಡಿಮೆ ಪ್ರಮಾಣದಲ್ಲಿದೆ.












Click it and Unblock the Notifications