ರೈತರ ಹೋರಾಟಕ್ಕೆ ಸಿದ್ಧವಾಗುತ್ತಿದೆ ಜಾಗತಿಕ ವೇದಿಕೆ
ನವದೆಹಲಿ, ಡಿಸೆಂಬರ್ 23: ದೆಹಲಿಯಲ್ಲಿ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ರೈತರು ಕೈಗೊಂಡಿರುವ ಪ್ರತಿಭಟನೆ ಸತತ 28ನೇ ದಿನಕ್ಕೆ ಕಾಲಿಟ್ಟಿದೆ. ಇಡೀ ರಾಷ್ಟ್ರದಲ್ಲಿ ರೈತರ ಈ ನಿರಂತರ ಹೋರಾಟ ಸದ್ದು ಮಾಡುತ್ತಿದೆ. ಇದೀಗ ತಮ್ಮ ಹೋರಾಟವನ್ನು ಜಾಗತಿಕ ಮಟ್ಟಕ್ಕೂ ಕೊಂಡೊಯ್ಯಲು ರೈತ ಸಂಘಗಳು ನಿರ್ಧರಿಸಿವೆ.
ವಿಶ್ವದ ಕೆಲವು ಪ್ರಮುಖ ನಗರಗಳಲ್ಲಿ ಪ್ರಾತಿನಿಧಿಕವಾಗಿ ಪ್ರತಿಭಟನೆ ನಡೆಸುವುದಾಗಿ ಘೋಷಿಸಿವೆ. ಈಗಾಗಲೇ ನ್ಯೂಯಾರ್ಕ್, ಸಿಡ್ನಿ ಹಾಗೂ ಲಂಡನ್ ನಲ್ಲಿ ಪ್ರತಿಭಟನೆ ನಡೆಸುವುದನ್ನು ದೃಢೀಕರಿಸಿದ್ದು, ಲಂಡನ್ ನ ಲೀಸೆಸ್ಟರ್, ಕಾಲಿವ್, ಹೋಸ್ಟನ್, ಮೆಲ್ಬರ್ನ್ ಹಾಗೂ ಓಂಟಾರಿಯೋದಲ್ಲಿಯೂ ಹೋರಾಟ ನಡೆಸುವ ಯೋಜನೆ ರೂಪಿಸಿರುವುದಾಗಿ ಮಾಹಿತಿ ನೀಡಿವೆ.
ರೈತರ ಹೋರಾಟವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುವ ಐದು ಪ್ರಮುಖ ಹೆಜ್ಜೆಗಳಲ್ಲಿ, ಜಾಗತಿಕ ಮಟ್ಟದಲ್ಲಿ ಹೋರಾಟ ಪ್ರತಿನಿಧಿಸುವುದೂ ಒಂದಾಗಿದೆ ಎಂದು ಸ್ವರಾಜ್ ರೈತ ಸಂಘಟನೆಯ ಯೋಗೇಂದ್ರ ಯಾದವ್ ತಿಳಿಸಿದ್ದಾರೆ.

ಈ ಹೋರಾಟದ ಮುಂದಿನ ಹೆಜ್ಜೆಯ ಕುರಿತು ಎರಡು ಮೂರು ದಿನಗಳಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುವುದು. ಸುಪ್ರೀಂ ಕೋರ್ಟ್ ಬಿಕ್ಕಟ್ಟು ಶಮನಕ್ಕೆ ಸ್ವತಂತ್ರ ಹಾಗೂ ನಿಷ್ಪಕ್ಷಪಾತ ಸಮಿತಿ ರಚನೆ ಮಾಡುವುದಾಗಿ ತಿಳಿಸಿದೆ. ಆ ಸಮಿತಿಯಲ್ಲಿ ನಮ್ಮ ಉಪಸ್ಥಿತಿ ಇರಲಿದೆಯೇ ಇಲ್ಲವೇ ಎಂಬುದರ ಸ್ಪಷ್ಟತೆ ದೊರೆತ ನಂತರ ಮುಂದಿನ ನಡೆ ಕುರಿತು ನಿರ್ಧರಿಸಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ಕಾನೂನು ಸಲಹೆ ಪಡೆಯಲಾಗುತ್ತಿದೆ ಎಂದು ರೈತ ಮುಖಂಡ ಶಿವಕುಮಾರ್ ಕಕ್ಕಾ ತಿಳಿಸಿದ್ದಾರೆ.












Click it and Unblock the Notifications