ಕೋಟೆ ನಾಡಿನ ಮೇಲೆ ಕರುಣೆ ತೋರಿದ ವರುಣ, ರೈತರಲ್ಲಿ ಸಂತಸ
ಚಿತ್ರದುರ್ಗ, ಅಕ್ಟೋಬರ್ 05 : ಸತತ ಬರದಿಂದ ಕಂಗೆಟ್ಟಿದ್ದ ಕೋಟೆನಾಡು ಚಿತ್ರದುರ್ಗದ ಮೇಲೆ ವರುಣ ಕರುಣೆ ತೋರಿದ್ದಾನೆ. ಚಿತ್ರದುರ್ಗ ಜಿಲ್ಲೆಯಲ್ಲಿ ಈ ಬಾರಿ ಉತ್ತಮವಾಗಿ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕಳೆದ ಕೆಲವು ದಿನಗಳಿಂದ ಚಿತ್ರದುರ್ಗ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಸೆಪ್ಟೆಂಬರ್ ಅಂತ್ಯದ ವರೆಗೆ ಜಿಲ್ಲೆಯಲ್ಲಿ 265 ಮಿ.ಮೀ.ಮಳೆಯಾಗಿದೆ. ವಾಡಿಕೆಯ ಮಳೆಗೆ ಹೋಲಿಕೆ ಮಾಡಿದರೆ ಈ ಬಾರಿ ಶೇ 29ರಷ್ಟು ಮಳೆಯ ಕೊರತೆ ಉಂಟಾಗಿದೆ.

ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆ ರೈತರಿಗೆ ನಮ್ಮದಿ ಉಂಟು ಮಾಡಿದೆ. ಅಲ್ಪಾವಧಿ ಬೆಳೆ ಬೆಳೆಯುವ ರೈತರಿಗೆ ಈ ಮಳೆ ಸಹಾಯಕವಾಗಲಿದೆ ಎನ್ನುವುದು ಕೃಷಿಕರ ಲೆಕ್ಕಾಚಾರ. ಹಿಂಗಾರು ಮಳೆಯೂ ಜಿಲ್ಲೆಯ ಮೇಲೆ ಕರುಣೆ ತೋರಿದರೆ ಅನುಕೂಲವಾಗಲಿದೆ.
ಶೇಂಗಾ ಬಿತ್ತಿದ್ದ ರೈತರು ಬೆಳೆ ವಿಫಲವಾಯಿತು ಎಂದು ತಲೆ ಮೇಲೆ ಕೈಹೊತ್ತು ಕುಳಿತಿದ್ದರು. ಈ ಸಂದರ್ಭದಲ್ಲಿ ಮಳೆ ಬಂದಿದ್ದು, ರೈತರಿಗೆ ಸಲ್ಪ ಮಟ್ಟಿನ ನೆಮ್ಮದಿ ತಂದಿದೆ. ಮಳೆಯಿಂದಾಗಿ ಕೆರೆಗಳು ತುಂಬಿದ್ದು, ಅಂತರ್ಜಲ ಮಟ್ಟವೂ ಹೆಚ್ಚಾಗಿದೆ. ಇದರಿಂದ ಕೊಳವೆ ಬಾವಿಗಳಲ್ಲಿ ನೀರು ಬಂದಿದೆ.
ಹಿರಿಯೂರು ತಾಲೂಕಿನ ಹಿರಿಯೂರು 22, ಬಬ್ಬೂರು 36, ಈಶ್ವರಗೆರೆ 99, ಇಕ್ಕನೂರು 70 ಸೂಗೂರು 16 ಮಿ.ಮೀ ಮಳೆಯಾಗಿದೆ. ಹೊಳಲ್ಕೆರೆ ತಾಲೂಕಿನ ಹೊಳಲ್ಕೆರೆಯಲ್ಲಿ 8.6 ಮಿ.ಮೀ. ಬಿ.ದುರ್ಗದಲ್ಲಿ 16, ಹೆಚ್.ಡಿ.ಪುರದಲ್ಲಿ 5 ಮಿ.ಮೀ.ಮಳೆಯಾಗಿದೆ.

ಮಂಗಳವಾರ ಹಿರಿಯೂರು ತಾಲೂಕಿನ ಈಶ್ವರಗೆರೆಯಲ್ಲಿ ಅತಿಹೆಚ್ಚು ಅಂದರೆ 99 ಮಿ.ಮೀ. ಮಳೆಯಾಗಿದೆ. ಚಳ್ಳಕೆರೆ ತಾಲೂಕಿನ ಚಳ್ಳಕೆರೆಯಲ್ಲಿ 65, ನಾಯಕನಹಟ್ಟಿಯಲ್ಲಿ 25.4, ಡಿ.ಮರಿಕುಂಟೆಯಲ್ಲಿ 26.6, ತಳಕು 26.2 ಮಿ.ಮೀ.ಮಳೆ ಸುರಿದಿದೆ.
ಚಿತ್ರದುರ್ಗ ತಾಲೂಕಿನ ಹಿರೇಗುಂಟನೂರುರಿನಲ್ಲಿ 2, ಐನಹಳ್ಳಿ 3.6, ಭರಮಸಾಗರದಲ್ಲಿ 6, ಸಿರಿಗೆರೆಯಲ್ಲಿ 30.8 ಮಿ.ಮೀ.ಮಳೆಯಾಗಿದೆ. ಹೊಸದುರ್ಗ ತಾಲೂಕಿನ ಬಾಗೂರಿನಲ್ಲಿ 6.5, ಮತ್ತೋಡುವಿನಲ್ಲಿ 25.6 ಮಳೆಯಾಗಿದೆ.












Click it and Unblock the Notifications