ಗಿಡಮೂಲಿಕೆ ಪ್ರಯೋಜನ ಗೊತ್ತು, ಆದರೆ ಗಿಡವೇ ಗೊತ್ತಿಲ್ಲ!

ಕೊರೊನಾ ಬಂದದ್ದೇ ಬಂದದ್ದು, ಜನರು ಆ ಗಿಡ ಇದಕ್ಕೆ ಒಳ್ಳೇದು, ಈ ಗಿಡ ಅದಕ್ಕೆ ಒಳ್ಳೇದು ಎಂದು ಚರ್ಚೆ ಶುರು ಮಾಡಿದ್ರು. ಎಲ್ಲರ ಮನೇಲೂ ಕಷಾಯಗಳು ಶುರುವಾದವು. ವಾಟ್ಸ್ ಆಪ್, ಫೇಸ್ ಬುಕ್, ಯುಟ್ಯೂಬ್ ಎಲ್ಲಿ ನೋಡಿದ್ರೂ ಗಿಡಮೂಲಿಕೆಗಳ ಪ್ರಯೋಜನಗಳ ಬಗ್ಗೆ ಉದ್ದದ್ದ ಲೇಖನಗಳು. ಅದನ್ನು ಓದಿದವರು
ನೆಲನೆಲ್ಲಿ ಲಿವರ್ ಗೆ ಒಳ್ಳೇದು, ಸಾಂಬಾರ್ ಬಳ್ಳಿ ಅಜೀರ್ಣಕ್ಕೆ ಒಳ್ಳೇದು, ಅರಿಶಿನದಲ್ಲಿ ಕರ್ಕ್ಯುಮಿನ್ ಇರುತ್ತದೆ, ನಿಂಬೆಯಲ್ಲಿ ಸಿಟ್ರಸ್ ಇರುತ್ತದೆ ಎಂದು ಓದಿದ್ರು ಮತ್ತು ತಾವು ನೋಡಿದ್ದನ್ನು ತಮ್ಮವರಿಗೆ ಫಾರ್ವರ್ಡ್ ಮಾಡಿದ್ರು. ಎಲ್ಲರಿಗೂ ಅನ್ನಿಸುತ್ತಿರಬಹುದು ಜನರಿಗೆ ತಿಳಿವಳಿಕೆ ಬಂತು ಎಂದು.

ಆದರೆ ನಿಜ ಸಂಗತಿ ಏನೆಂದು ಅರಿಯಬೇಕಾದರೆ ಈ ಎರಡು ಘಟನೆಗಳನ್ನು ಮೊದಲು ಗಮನಿಸಿ...

 ಮನೆಯಲ್ಲೇ ಬೆಳೆದಿದ್ದರೂ ಗೊತ್ತಾಗಲಿಲ್ಲ

ಮನೆಯಲ್ಲೇ ಬೆಳೆದಿದ್ದರೂ ಗೊತ್ತಾಗಲಿಲ್ಲ

ಘಟನೆ 1- ಬೆಂಗಳೂರಿನ ಒಂದು ಮನೆಯವರು ಅವರ ಮನೆಯ ಎದುರೇ ಇದ್ದ ಸಾವಯವ ಅಂಗಡಿಯಲ್ಲಿ ಅಮೃತಬಳ್ಳಿಯನ್ನು ಖರೀದಿಸಿ ಕೊಂಡೊಯ್ಯುತ್ತಿದ್ದರು. ಅಂಗಡಿಯವನೂ ಅವರು ಕೇಳಿದಾಗೆಲ್ಲ ಮಾರಾಟ ಮಾಡುತ್ತಿದ್ದ. ಅಂಗಡಿಯಲ್ಲಿ ಸಿಗುವ ಇಂತಹ ಸಾವಯವ ವಸ್ತುಗಳು ಸಾಮಾನ್ಯವಾಗಿ ಒಣಗಿದ ರೂಪದಲ್ಲಿ ಇರುತ್ತದೆ. ಜಾಯಿಕಾಯಿ, ಜಾಪತ್ರೆ, ಬೇರು-ನಾರು ಇವೆಲ್ಲವೂ ಒಣಗಿಸಿ ಸಂಗ್ರಹಿಸುವುದು ವಾಡಿಕೆ.

ಒಮ್ಮೆ ಶ್ಯಾಮಯ್ಯ ಭಟ್ರು ತಮ್ಮ ತೋಟದಲ್ಲಿ ಬೆಳೆದಿದ್ದ ಕೆಲವು ಸಾವಯವ ವಸ್ತುವನ್ನು ಅಂಗಡಿಗೆ ಕೊಡಲು ಅಲ್ಲಿಗೆ ತೆರಳಿದ್ದರು. ಅದೇ ಸಂದರ್ಭದಲ್ಲಿ ಅಮೃತಬಳ್ಳಿ ಕೊಂಡೊಯ್ಯಲು ಎದುರು ಮನೆಯ ವ್ಯಕ್ತಿ ಆ ಅಂಗಡಿಗೆ ಬಂದಿದ್ದ. ಶ್ಯಾಮಯ್ಯ ಭಟ್ರಿಗೆ ಸಾವಯವ ವಸ್ತುಗಳಿಗೆ ಬೆಲೆ ನೀಡುವವರ ಬಗ್ಗೆ ಗೌರವ. ಹಾಗಾಗಿ ಏನ್ ಮಾಡ್ತೀರಿ ಅಮೃತ ಬಳ್ಳಿಯಿಂದ ಎಂದು ಆ ವ್ಯಕ್ತಿಯನ್ನು ಪ್ರಶ್ನಿಸಿದರು. " ನಾವು ಕಷಾಯ ಮಾಡ್ತೀವಿ. ಶುಗರ್ ಗೆಲ್ಲಾ ಒಳ್ಳೆದಲ್ವಾ ಅದಿಕ್ಕೆ ದಿನಾ ಕುಡಿತಿವಿ. ಇದೀಗ ಕೊರೊನಾ ಬೇರೆ. ಕೊರೊನಾಗೂ ಒಳ್ಳೆದಂತಲ್ಲ ಅಮೃತಬಳ್ಳಿ. ಅದಿಕ್ಕೆ ದಿನಾ ನೀರಿಗೆ ಹಾಕಿ ಕುದಿಸಿ ಮನೆಮಂದಿಯೆಲ್ಲಾ ಕುಡಿತಾ ಇದ್ದೀವಿ" ಎಂದರು. ಈ ಅಂಗಡಿಯಲ್ಲೇ ಯಾವಾಗ್ಲೂ ತಗೊಳೋದು ಎಂಬುದಾಗಿಯೂ ತಿಳಿಸಿದ್ರು.

ಹಾಗೆಯೇ ಆತ್ಮೀಯ ಮಾತುಕತೆ ಸ್ವಲ್ಪ ಮುಂದುವರಿಯಿತು...

 ಅದು ಅಮೃತಬಳ್ಳಿ ಎಂದು ತಿಳಿದಿರಲೇ ಇಲ್ಲ

ಅದು ಅಮೃತಬಳ್ಳಿ ಎಂದು ತಿಳಿದಿರಲೇ ಇಲ್ಲ

ಸಿಟಿ ಮಂದಿಯೂ ಅಮೃತಬಳ್ಳಿಯನ್ನು ಸುಲಭವಾಗಿ ಬೆಳೆದುಕೊಳ್ಳಬಹುದು. ಅಮೃತಬಳ್ಳಿ ಬಹಳ ಸುಲಭವಾಗಿ ಬೆಳೆಯುತ್ತದೆ ಮತ್ತು ಸರಾಗವಾಗಿ ಹಬ್ಬುತ್ತದೆ. ಅದಕ್ಕೆ ಪಾಟ್ ಆದರೂ ಸಾಕು ಎಂದು ಅಮೃತಬಳ್ಳಿಯನ್ನು ಬೆಳೆಸುವ ಬಗ್ಗೆ ಹೇಳುವಾಗಲೇ ಎದುರಿನ ಮನೆಯೊಂದರಲ್ಲಿ ಬೃಹದಾಕಾರದಲ್ಲಿ ಹಬ್ಬಿದ್ದ ಅಮೃತಬಳ್ಳಿಯ ಗಿಡ ಶ್ಯಾಮಯ್ಯ ಭಟ್ಟರ ಕಣ್ಣಿಗೆ ಬಿತ್ತು. "ಅಲ್ಲಿ ನೋಡಿ ಆ ಮನೆಯವರು ಎಷ್ಟು ಒಳ್ಳೆ ರೀತಿಯಲ್ಲಿ ಬೆಳೆಸಿಕೊಂಡಿದ್ದಾರೆ" ಎಂದು ತೋರಿಸಿದರು. ಆಗ ಅಮೃತಬಳ್ಳಿ ಕೊಂಡೊಯ್ಯಲು ಬಂದ ವ್ಯಕ್ತಿ ಅದು ನಮ್ಮದೇ ಮನೆ ಅಂದು ಬಿಡಬೇಕೆ!!!

ಮನೆಯಲ್ಲೇ ಅಮೃತಬಳ್ಳಿಯ ಗಿಡ ಉತ್ತಮವಾಗಿ ಹಬ್ಬಿದ್ದರೂ ಅವರಿಗೆ ಅದುವೇ ಅಮೃತಬಳ್ಳಿ ಎಂದು ತಿಳಿದಿಲ್ಲವೇ? ತಿಳಿದಿದ್ದರೂ ಅದನ್ನು ಬಳಸದೆ ಅಂಗಡಿಯಲ್ಲಿ ಸಿಗುವ ಪ್ಯಾಕೆಟ್ ಆಗಿರುವ ಅಮೃತಬಳ್ಳಿಯನ್ನು ಯಾಕೆ ಕೊಂಡೊಯ್ಯುತ್ತಿದ್ದಾರೆ? ಮೊದಲಿನಿಂದಲೂ ಒಣಗಿದ ರೂಪದಲ್ಲೇ ಅಮೃತಬಳ್ಳಿಯನ್ನು ನೋಡಿರುವುದರಿಂದಾಗಿ ಹಸಿ ಗಿಡದಿಂದ ಕಷಾಯ ತಯಾರಿಸುವ ಬಗ್ಗೆ ತಿಳಿವಳಿಕೆ ಇಲ್ಲವೇ? ಯಾವುದೋ ಪ್ರೊಸೆಸ್ ಗೆ ಒಳಪಡಿಸಿ ಅಮೃತಬಳ್ಳಿಯಿಂದ ಕಷಾಯ ತಯಾರಿಸಬೇಕು ಎಂದುಕೊಂಡಿರಬಹುದೇ? ಪ್ರಕೃತಿದತ್ತವಾಗಿ ಮನೆಯಲ್ಲೇ ಬೆಳೆಸಿಕೊಂಡಿದ್ದರೂ ಆ ಗಿಡದ ಪ್ರಾಮುಖ್ಯ ಮತ್ತು ಅದರ ಉಪಯೋಗದ ಬಗೆಗಿನ ಅರಿವಿನ ಕೊರತೆಯೇ ಅಲ್ಲವೇ ಇದಕ್ಕೆಲ್ಲಾ ಕಾರಣ.

 ಪ್ರತಿ ಗಿಡಕ್ಕೂ ಅದರದ್ದೇ ವೈಶಿಷ್ಟ್ಯ ಇದೆ

ಪ್ರತಿ ಗಿಡಕ್ಕೂ ಅದರದ್ದೇ ವೈಶಿಷ್ಟ್ಯ ಇದೆ

ಹೌದು, ನಮ್ಮ ಪರಿಸ್ಥಿತಿ ಹೀಗೆಯೇ ಆಗುತ್ತಿದೆ. ಹಾಪ್ ಕಾಮ್ಸ್ ನಲ್ಲಿ ಸಿಗುವ ಸೀಮೆಬದನೆ ಗೊತ್ತು. ಆದರೆ ಅದರ ಬಳ್ಳಿಯನ್ನು ಗುರುತಿಸುವ ಸಾಮರ್ಥ್ಯವಿಲ್ಲ. ಕೆಲವರಿಗೆ ಅದು ಬಳ್ಳಿಯಲ್ಲಿ ಆಗುತ್ತದೆ ಎಂಬುದೇ ತಿಳಿದಿರಲಿಕ್ಕಿಲ್ಲ. ನಿಂಬೆಯಲ್ಲಿ ಸಿಟ್ರಸ್ ಇರುತ್ತೆ ಎಂಬುದು ಗೊತ್ತು. ನಿಂಬೆ ಗಿಡ ಗುರುತಿಸುವ ಸಾಮರ್ಥ್ಯವಿಲ್ಲ. ಯಾಕೆಂದರೆ ನಾವು ನೋಡಿರುವುದು ಹಳದಿ ಬಣ್ಣದ ನಿಂಬೆಹಣ್ಣನ್ನು ಮಾತ್ರವೇ ಅಲ್ಲವೇ? ಗಣಕೆ ಸೊಪ್ಪನ್ನು ಸೊಪ್ಪಿನವರು ಮಾರ್ಕೊಂಡು ಬರ್ತಿದ್ದರೆ ಖರೀದಿಸ್ತೀವಿ. ಮನೆ ಹತ್ತಿರ ತನ್ನಿಂದ ತಾನೆ ಯಾವುದಾದರೂ ಖಾಲಿ ಸೈಟ್ ನಲ್ಲಿ ಬೆಳೆದಿದ್ದರೆ ಗುರುತಿಸುವ ಸಾಮರ್ಥ್ಯವಿಲ್ಲ. ಸೀಮೆಬದನೆ, ಸೌತೆಬಳ್ಳಿ ಎರಡೂ ಒಂದೇ ತರಹ ಅನ್ನಿಸುತ್ತೆ. ನಿಂಬೆಗಿಡ, ಮೂಸುಂಬಿ ಗಿಡ ಒಂದೇ ತರಹ ಅನ್ನಿಸುತ್ತೆ. ಮೆಣಸಿನ ಗಿಡ, ಗಣಕೆಸೊಪ್ಪು ಒಂದೇ ತರಹ ಇದೆಯಲ್ಲಾ ಅನ್ನಿಸುತ್ತೆ. ಹೀಗೆಲ್ಲಾ ಅನ್ನಿಸುವುದಕ್ಕೆ ಕಾರಣ ಕೇವಲ ತಿಳಿವಳಿಕೆಯ ಕೊರತೆ ಅಷ್ಟೇ! ಪ್ರತಿ ಗಿಡಕ್ಕೂ ಅದರದ್ದೇ ವೈಶಿಷ್ಟ್ಯ ಇರುತ್ತದೆ. ನಮಗೆ ಅದನ್ನು ಗುರುತಿಸುವ ಸಾಮರ್ಥ್ಯವಿರಬೇಕಷ್ಟೆ.

 ಬ್ಯೂಟಿ ಪ್ರಾಡಕ್ಟ್ ವಿವರಿಸುವವನಿಗೆ ಅರಿಶಿಣ ಗಿಡವೇ ಗೊತ್ತಿಲ್ಲ

ಬ್ಯೂಟಿ ಪ್ರಾಡಕ್ಟ್ ವಿವರಿಸುವವನಿಗೆ ಅರಿಶಿಣ ಗಿಡವೇ ಗೊತ್ತಿಲ್ಲ

ಘಟನೆ 2: ಅಂದು ತಮ್ಮ ಮನೆಯಲ್ಲೇ ಏರಿ ಮಾಡಿ ಬೆಳೆಸಿದ 10 ಅರಿಶಿಣದ ಗಿಡವನ್ನು ಕಿತ್ತು ತಮ್ಮ ಬೀಣಿ ಚೀಲದಲ್ಲಿ ಹಾಕಿಕೊಂಡು ಹತ್ತಿರದ ಸಂಬಂಧಿಯೊಬ್ಬರಿಗೆ ನೀಡುವ ಉದ್ದೇಶದಿಂದ ಶ್ಯಾಮಯ್ಯ ಭಟ್ಟರು ಪೇಟೆ ಕಡೆಗೆ ಹೋಗಿದ್ದರು. ದಾರಿ ಮಧ್ಯದಲ್ಲಿ ಅಚಾನಕ್ ಆಗಿ ಒಬ್ಬ ವ್ಯಕ್ತಿ ಸಿಕ್ಕಿದ. ಆ ವ್ಯಕ್ತಿ ಬಹಳ ಉತ್ತಮವಾಗಿ ಮಾತನಾಡುತ್ತಿದ್ದ. ಅವನ ತಿಳಿವಳಿಕೆ ನೋಡಿ ಶ್ಯಾಮಯ್ಯ ಭಟ್ರು ನಿಜಕ್ಕೂ ಖುಷಿ ಪಟ್ರು. ಆತ ಗಿಡಮೂಲಿಕೆಗಳ ಬಗ್ಗೆ ಬಹಳ ತಿಳಿದುಕೊಂಡಿದ್ದಾನೆ ಎಂದು ಅವರಿಗೆ ಹೆಮ್ಮೆಯಾಯಿತು. ಏನ್ ಓದಿದ್ದಿ ಎಂದು ಪ್ರಶ್ನಿಸಿದರು. ಆತ ಯಾವುದೋ ಪದವಿಯ ವಿವರ ನೀಡಿದ. ಆತ ತಾನು ಮಾರಾಟ ಮಾಡುತ್ತಿದ್ದ ಯಾವುದೋ ಬ್ರ್ಯಾಂಡಿನ ಬ್ಯೂಟಿ ಪ್ರಾಡಕ್ಟ್ ವೊಂದರ ವಿವರ ನೀಡುತ್ತಿದ್ದ.

ಆ ಕಂಪೆನಿ ಆ ಬ್ಯೂಟಿ ಪ್ರಾಡಕ್ಟ್ ತಯಾರಿಸುವುದಕ್ಕೆ ಅರಿಶಿಣ ಬಳಸಿದೆ ಎಂದು ಹೇಳಿಕೊಂಡಿದೆ ಮತ್ತು ಅದರಿಂದ ಕಲೆಗಳ ನಿವಾರಣೆಯಾಗುತ್ತದೆ ಮತ್ತು ಗಾಯಗಳ ನಿವಾರಣೆಯಾಗುತ್ತದೆ ಎಂಬುದಾಗಿ ತಿಳಿಸಿದ್ದು, ಅದನ್ನೇ ಗ್ರಾಹಕರಿಗೆ ತಿಳಿಸುವುದಕ್ಕೆ ಕಂಪೆನಿ ಹೇಳಿದೆ. ಅವನ ಮಾತಿನಲ್ಲಿ ಅರಿಶಿಣದಲ್ಲಿ ಕರ್ಕ್ಯುಮಿನ್ ಅನ್ನೋ ಅಂಶವಿರುತ್ತದೆ. ಆ ಅಂಶವೇ ನಮ್ಮ ಗಾಯವನ್ನು ಉಪಶಮನ ಮಾಡುವ ಸಾಮರ್ಥ್ಯ ಹೊಂದಿರುತ್ತದೆ ಇತ್ಯಾದಿ ಅರಿಶಿಣದ ಬಗ್ಗೆ ಹಲವು ವೈಜ್ಞಾನಿಕ ವಿವರಗಳಿದ್ದವು. ಇದನ್ನು ಬಹಳ ಆಸಕ್ತಿಯಿಂದ ಕೇಳಿಸಿಕೊಂಡರು ಶ್ಯಾಮಯ್ಯ ಭಟ್ರು. ಎಲ್ಲವನ್ನೂ ಕೇಳಿಸಿಕೊಂಡ ನಂತರ ತಮ್ಮ ಚೀಲದಲ್ಲಿದ್ದ ಗಿಡವನ್ನು ತೆಗೆದು ಇದೇನು ಎಂದು ತಿಳಿದಿದೆಯೇ ಎಂದು ಪ್ರಶ್ನಿಸಿದರು."ಇಲ್ಲ, ನನಗೆ ತಿಳಿದಿಲ್ಲ. ಏನಿದು ಗಿಡ" ಎಂದ ಆತ. ಇದುವೇ ನೀವು ಇಷ್ಟೊತ್ತು ಹೇಳಿದ ಅರಿಶಿಣದ ಗಿಡ ಎಂದಷ್ಟೇ ಉತ್ತರಿಸಿ ತಮ್ಮ ಕೆಲಸಕ್ಕೆ ಮುಂದುವರಿದರು.

 ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಮನೋಭಾವ

ದುಡ್ಡು ಕೊಟ್ಟರೆ ಎಲ್ಲವೂ ಸಿಗುತ್ತದೆ ಎಂಬ ಮನೋಭಾವ

ಅರಿಶಿಣದ ಮಹತ್ವವನ್ನೆಲ್ಲಾ ತಿಳಿದ ಆತ ಯಾಕೆ ಅದರ ಬೇಸಿಕ್ ವಿಚಾರ ಗಿಡವನ್ನು ಗುರುತಿಸುವಿಕೆಯನ್ನು ಅರಿಯಲಿಲ್ಲ? ಇದು ಕೇವಲ ಆತನೊಬ್ಬನ ಸಮಸ್ಯೆಯಲ್ಲ. ಅನೇಕರ ಸಮಸ್ಯೆ. ಅರಿಶಿಣದ ಎಲೆಯೊಂದಿಗೆ ಕಾಡು ಅರಿಶಿಣದ ಎಲೆ ಸೇರಿಸಿದರೆ ಗುರುತಿಸುವ ಸಾಮರ್ಥ್ಯ ಎಷ್ಟು ಮಂದಿಗೆ ಇದೆ? ಅರಿಶಿಣದ ಕೊಂಬು ಹಸಿಯಾಗಿದ್ದಾಗ ಹೇಗಿರುತ್ತದೆ. ಅದರ ಗಿಡ ಹೇಗಿರುತ್ತದೆ? ಗಿಡದ ಎಲೆಯಲ್ಲೂ ಸುಗಂಧವಿರುತ್ತದೆ. ಅರಿಶಿಣದಂತೆಯೇ ಕಾಣುವ ಹಲವು ಸಸ್ಯಗಳು ಈ ಭೂಮಿಯಲ್ಲಿವೆ. ಇಂತಹ ವಿಚಾರಗಳನ್ನು ಯಾರೆಲ್ಲಾ ಯೋಚಿಸುತ್ತಾರೆ ಅಥವಾ ಅದನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ ಹೇಳಿ. ಎಲ್ಲರಿಗೂ ದುಡ್ಡು ಕೊಟ್ಟರೆ ತಮಗೆ ಬೇಕಾದದ್ದು ಅಂಗಡಿಯಲ್ಲಿ ಸಿಗಬೇಕು ಅಷ್ಟೇಯಾಗಿದೆ ಅಲ್ಲವೇ?

ಪ್ರತಿಯೊಬ್ಬರೂ ಓದುತ್ತಾರೆ. ಅದು ಇದಕ್ಕೆ ಒಳ್ಳೇದು, ಇದು ಅದಕ್ಕೆ ಒಳ್ಳೇದು ಅಂತ ಗಂಟೆಗಟ್ಟಲೆ ಮಾತನಾಡಬಲ್ಲರು. ಹೀಗೆ ಮುಂದುವರಿದರೆ ಮುಂದೊಂದು ದಿನ ಪುಸ್ತಕದ ಬದನೆಕಾಯಿ ತಿಳಿದವರೇ ಎಲ್ಲರೂ ಆಗಿರುತ್ತಾರೆ. ಗಿಡಗಳನ್ನು ಗುರುತಿಸುವ ವ್ಯಕ್ತಿಗಳು ಯಾರಿರುತ್ತಾರೆ ಅಲ್ಲವೇ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+