ಮೆಣಸಿನಕಾಯಿ ಬೆಳೆಯಲ್ಲಿ ಥ್ರಿಪ್ಸ್ ನುಸಿ ಕೀಟ ಹತೋಟಿ, ರೈತರಿಗೆ ಸಲಹೆಗಳು
ಬಳ್ಳಾರಿ, ಸೆಪ್ಟೆಂಬರ್ 26: ಬಳ್ಳಾರಿ ಜಿಲ್ಲೆಯ ವಿವಿಧ ತಾಲೂಕುಗಳ ರೈತರು ಈ ವರ್ಷ ಮೆಣಸಿನಕಾಯಿ ಬೆಳೆ ಬೆಳೆದಿದ್ದಾರೆ. ಆದರೆ ಈ ಬೆಳೆಯಲ್ಲಿ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಸಿನಸ್) ಕೀಟ ಕಂಡುಬಂದಲ್ಲಿ ಸೂಕ್ತ ಕ್ರಮ ಅನುಸರಿಸಿ ಅವುಗಳನ್ನು ಹತೋಟಿ ಮಾಡಬೇಕು ಎಂದು ತೋಟಗಾರಿಕೆ ನಿರ್ದೇಶಕರು ಮಾಹಿತಿ ನೀಡಿದ್ದಾರೆ. ಈ ರೋಗದಿಂದಾಗಿ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ, ಇಳುವರಿ ಮೇಲೆಯೂ ಸಹ ಪ್ರಭಾವ ಬೀರುತ್ತದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ಜಿಲ್ಲೆಯ ಬಳ್ಳಾರಿ, ಕುರುಗೋಡು ಮತ್ತು ಕಂಪ್ಲಿ ತಾಲೂಕುಗಳಲ್ಲಿ ಸುಮಾರು 26 ಸಾವಿರ ಹೆಕ್ಟೇರ್ಗಿಂತ ಹೆಚ್ಚು ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯಲಾಗಿದೆ. ಕಳೆದ ವರ್ಷ ಈ ಬೆಳೆಯನ್ನು ಬಾಧಿಸಿದ್ದ ಹೊಸ ಥ್ರಿಪ್ಸ್ ನುಸಿ (ಥ್ರಿಪ್ಸ್ ಪಾರ್ವಿಸ್ಪಿನಸ್) ಕೀಟವು ಈ ಬಾರಿಯೂ ಕಾಣಿಸುವ ಸಂಭವವಿದೆ. ಆದ್ದರಿಂದ ಕೀಟದ ನಿರ್ವಹಣೆಗೆ ರೈತರು ಸೂಕ್ತ ಕ್ರಮ ಅನುಸರಿಸಬೇಕು ಎಂದು ಕರೆ ನೀಡಲಾಗಿದೆ.

ಈ ರೋಗ ಕಂಡುಬಂದರೆ ಪ್ರೌಢ ಕೀಟಗಳು ಗುಂಪು ಗುಂಪಾಗಿ ಎಲೆಗಳ ಕೆಳಭಾಗದಲ್ಲಿ, ಹೂಗಳ ಒಳಗೆ ಮತ್ತು ಹೊರಗೆ ಕಂಡುಬರುತ್ತವೆ. ಮರಿ ಹಂತದ ನುಸಿಗಳು ಎಲೆಗಳ ಕೆಳಭಾಗದಲ್ಲಿ ಕೇಂದ್ರೀಕೃತಗೊಂಡಿರುತ್ತವೆ. ಕೀಟಗಳು ಸಸ್ಯದ ಬಹುಭಾಗಗಳಿಂದ ರಸವನ್ನು ಹೀರುವುದರಿಂದ ಸಸ್ಯದ ಬೆಳವಣಿಗೆ ಕುಂಠಿತಗೊಳ್ಳುತ್ತದೆ.
ಅಲ್ಲದೇ ಮೆಣಸಿನಕಾಯಿ ಬೆಳೆಯ ಎಲೆಗಳ ಅಂಚುಗಳು ಮೇಲ್ಮುಖವಾಗಿ ಮುದುಡುತ್ತದೆ. ಹೂಗಳು ಉದುರುವುದು ಮತ್ತು ಬೆಳವಣಿಗೆ ಹಂತದಲ್ಲಿರುವ ಚಿಗುರುಗಳು ಗುಂಪಾಗಿ ಹೂಬಿಡದೆ ಒಣಗುವುದು ಸಾಮಾನ್ಯವಾಗಿ ಕಂಡುಬರುವ ಈ ರೋಗದಿಂದ ಆಗುವ ಹಾನಿಯ ಲಕ್ಷಣವಾಗಿದೆ. ಕಾಲ ಕ್ರಮೇಣ, ಕಾಯಿಗಳ ಸಂಖ್ಯೆ ಕಡಿಮೆಯಾಗಿ ಇಳುವರಿಯು ಗಣನೀಯ ಪ್ರಮಾಣದಲ್ಲಿ ಕುಂಠಿತಗೊಳ್ಳುತ್ತದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ನಿರ್ವಹಣೆ ಮಾಡುವುದು ಹೇಗೆ? : ರೈತರು ಹೊಲದ ಸುತ್ತಲೂ 2-3 ಸಾಲು ಜೋಳ, ಮೆಕ್ಕೆಜೋಳ, ಸಜ್ಜೆಯನ್ನು ಬೇಲಿ ಬೆಳೆಯಾಗಿ ಅಡವಾಗಿ ಬಿತ್ತುವುದರಿಂದ ಕೀಟಗಳ ಪ್ರಸಾರವನ್ನು ನಿಯಂತ್ರಿಸಬಹುದು. ಹೊಲ ಮತ್ತು ಬದುಗಳ ಸ್ವಚ್ಛತೆಯಿಂದ ಥ್ರಿಪ್ಸ್ ನುಸಿಗಳಿಗೆ ಆಸರೆ ನೀಡುವ ಕಳೆಗಳ ನಿರ್ಮೂಲನೆ ಮಾಡಬಹುದು. ಸೂಕ್ತ ಅಂತರ (90*30 ಸೆಂ.ಮೀ ಮತ್ತು 60*45 ಸೆಂ.ಮೀ) ಕಾಪಾಡಬೇಕು.
ಕೊಟ್ಟಿಗೆ ಗೊಬ್ಬರದೊಡನೆ ಮೆಟಾರೈಜಿಯಮ್ ಅನಿಸೋಪ್ಲಿಯೆ ಎಂಬ ಶಿಲೀಂಧ್ರ ಕೀಟನಾಶಕದಿಂದ (2-3 ಕೆಜಿ/ ಟನ್) ಮೌಲ್ಯವರ್ಧನೆಗೊಳಿಸಿ ಹೊಲಗಳಿಗೆ ಹಾಕಬೇಕು. ಬೇವಿನ ಹಿಂಡಿ (200 ಕೆಜಿ/ ಎಕರೆಗೆ) ಮತ್ತು ಎರೆಹುಳು ಗೊಬ್ಬರವನ್ನು (500 ಕೆಜಿ/ ಎಕರೆಗೆ) ಮಣ್ಣಿನಲ್ಲಿ ಬೆರೆಸುವುದರಿಂದ ನಿರೋಧಕ ಶಕ್ತಿ ವೃದ್ಧಿಗೊಳ್ಳುತ್ತದೆ ಎಂದು ರೈತರಿಗೆ ಮಾಹಿತಿ ನೀಡಲಾಗಿದೆ.
ಶಿಫಾರಸ್ಸು ಪ್ರಮಾಣದ ರಸಗೊಬ್ಬರದೊಂದಿಗೆ ಪೊಟ್ಯಾಶ್ನ ಬಳಕೆ ವೃದ್ಧಿಸುವುದರಿಂದ ಕೀಟ ನಿರೋಧಕ ಶಕ್ತಿ ಹೆಚ್ಚುತ್ತದೆ. ನೀಲಿ ಅಂಟಿನ ಬಲೆಗಳನ್ನು 25-30/ ಎಕರೆಗೆ ಬೆಳೆಯ ಎತ್ತರಕ್ಕೆ ಅಳವಡಿಸಬೇಕು. ಆಗಿಂದಾಗೆ ಕುಂಟೆಯೊಡೆಯುವುದರಿಂದ ಕೋಶಾವಸ್ಥೆಯಲ್ಲಿರುವ ಥ್ರಿಪ್ಸ್ ನುಸಿಯನ್ನು ನಾಶಪಡಿಸಬಹುದು.
ಸಾಧ್ಯವಾದಲ್ಲಿ ಕಾಲುವೆ ಮೂಲಕ ನೀರುಣಿಸುವ ಬದಲು ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಬೇಕು. ಸಿಲ್ವರ್ ಬಣ್ಣದ ಪ್ಲಾಸ್ಟಿಕ್ ಶೀಟ್ (25-30 ಮೈಕ್ರಾನ್)ನಿಂದ ಮಲ್ಚಿಂಗ್ ಮಾಡುವುದರಿಂದ ಮಣ್ಣಿನಲ್ಲಿ ಕೋಶಾವಸ್ಥೆಗೆ ಹೋಗುವುದನ್ನು ತಡೆಯಬಹುದು.
ತೀವ್ರ ಬಾಧೆಗೊಳಗಾದ ಗಿಡಗಳನ್ನು ಕಿತ್ತುಗುಂಡಿಯಲ್ಲಿ ಮುಚ್ಚಬೇಕು ಅಥವಾ ಸುಡಬೇಕು. ಪರಭಕ್ಷಕ/ ಮಿತ್ರ ಕೀಟಗಳ ವೃದ್ಧಿಗಾಗಿ ಹೆಚ್ಚಿನ ಪ್ರಮಾಣದಲ್ಲಿ ರಾಸಾಯನಿಕ ಕೀಟನಾಶಕಗಳ ಬದಲು ಪರಿಸರ ಸ್ನೇಹಿ ಕೀಟನಾಶಕಗಳಾದ ಶೇ.5 ರ ಬೇವಿನ ಬೀಜದ ಕಷಾಯ, ಬೇವಿನ ಎಣ್ಣೆ (1500 ಪಿಪಿಯಂ) 2 ಮಿ.ಲೀ/ಲೀ, ಹೊಂಗೆ ಎಣ್ಣೆ, 3 ಮಿ.ಲೀ/ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಶಿಲೀಂಧ್ರ ಕೀಟನಾಶಕಗಳಾದ ಬಿವೇರಿಯಾ ಬಸ್ಸಿಯಾನ ಅಥವಾ ಲೆಕ್ಯಾನಿಸಿಲಿಯಂ ಲೆಕ್ಯಾನಿ ಅಥವಾ ಮೆಟಾರೈಜಿಯಮ್ ಅನಿಸೋಪ್ಲಿಯೇಯನ್ನು 4 ಗ್ರಾಂ/ ಲೀ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅವಶ್ಯಕತೆಗನುಸಾರವಾಗಿ ಶಿಫಾರಸ್ಸು ಮಾಡಿರುವ ರಾಸಾಯನಿಕ ಕೀಟನಾಶಕಗಳಾದ 0.3 ಮಿ.ಲೀ., ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.2 ಗ್ರಾಂ ಥಯೋಮೆಥಾಕ್ಸಾಮ್ 25 ಡಬ್ಲ್ಯೂ.ಜಿ ಅಥವಾ 1.0 ಮಿ.ಲೀ., ಫಿಪ್ರೋನಿಲ್ 5 ಎಸ್.ಸಿ ಅಥವಾ 1.0 ಗ್ರಾಂ ಡಯಾಫೆನ್ ಥಯೂರಾನ್ 50 ಡಬ್ಲ್ಯೂ.ಪಿ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.












Click it and Unblock the Notifications