ಮೈಸೂರು ಜಿಲ್ಲೆಯಲ್ಲೂ ಮಳೆಗೆ ಕೃಷಿ ಭೂಮಿ ಮುಳುಗಡೆ, ರೈತರ ಬದುಕು ಅತಂತ್ರ
ಮೈಸೂರು, ಆಗಸ್ಟ್ 19 : ಕಳೆದ ಒಂದು ವಾರದ ಹಿಂದೆ ಕಬಿನಿ, ನುಗು, ತಾರಕ ಜಲಾಶಯಗಳ ಹೊರಹರಿವಿನ ಪ್ರಮಾಣ ಕಡಿಮೆಯಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಕೇರಳದ ವೈನಾಡು ಮತ್ತು ಕೊಡಗು ಜಿಲ್ಲೆಗಳಲ್ಲಿ ಸುರಿಯುತ್ತಿರುವ ಮಳೆಯಿಂದ ಜಲಾಶಯಗಳಿಗೆ ಭಾರೀ ಪ್ರಮಾಣದ ನೀರು ಹರಿದು ಬರುತ್ತಿದೆ.
'
ಕಬಿನಿ ಜಲಾಶಯದಿಂದ 82 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರನ್ನು ಹೊರಬಿಡಲಾಗುತ್ತಿದ್ದು, ನದಿ ಪಾತ್ರದ ರೈತರ ಜಮೀನುಗಳು, ಅನೇಕ ಸೇತುವೆಗಳು, ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಜಲಾಶಯದ ಇತಿಹಾಸದಲ್ಲಿ ಮೊದಲ ಬಾರಿಗೆ 82 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗಿದೆ.
ಕಬಿನಿ ಹಿನ್ನೀರಿನ ಪ್ರದೇಶವಾದ ಡಿಬಿ ಕುಪ್ಪೆಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅನೇಕ ಹೊಲಗದ್ದೆಗಳು, ಮನೆಗಳು ಜಲಾವೃತಗೊಂಡಿದ್ದು, ಅವರ ರಕ್ಷಣೆಗಾಗಿ ತಾಲೂಕು ಆಡಳಿತ ಮುಂದಾಗಿದೆ.
ನುಗು ಜಲಾಶಯದಿಂದ 7 ಸಾವಿರಕ್ಕೂ ಹೆಚ್ಚು ಕ್ಯೂಸೆಕ್ ನೀರನ್ನು ಹೊರಬಿಡುವ ಮೂಲಕ ಜಲಾಶಯದಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ಜಲಾಶಯದ ಮುಂಭಾಗದ ಸೇತುವೆ ಜಲಾವೃತಗೊಂಡಿದ್ದು, ಜಮೀನುಗಳಿಗೆ ನೀರು ನುಗ್ಗಿದೆ. ತಾರಕ ಜಲಾಶಯ ನಿರ್ಮಿಸಿದ ನಂತರ ಮೊದಲ ಬಾರಿಗೆ 4 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ. ಜಲಾಶಯ ಮುಂಭಾಗದ ಸೇತುವೆ ಕಟ್ಟೇಮನುಗನಹಳ್ಳಿ ಕೋಟೆ ಸೇತುವೆ ಮುಳುಗುವ ಹಂತದಲ್ಲಿದೆ.
ಕಬಿನಿ ಜಲಾಶಯದಿಂದ 80 ಸಾವಿರ ಕ್ಯೂಸೆಕ್ ಗೂ ಹೆಚ್ಚು ನೀರು ಹರಿ ಬಿಟ್ಟಿರುವುದರಿಂದ ನದಿ ಪಾತ್ರದಲ್ಲಿರುವ ವರುಣ ಕ್ಷೇತ್ರಕ್ಕೆ ಸೇರುವ ರೈತರ ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದ್ದು, ಇದರಿಂದ ರೈತರ ಬದುಕು ಅತಂತ್ರವಾಗಿದೆ.
ವರುಣ ಕ್ಷೇತ್ರಕ್ಕೆ ಸೇರುವ ಕಪಿಲಾ ನದಿ ದಡದಲ್ಲಿರುವ ಮರಳೂರು, ಗೊದ್ದನಪುರ, ರಾಂಪುರ, ಹಳ್ಳಿದಿಡ್ಡಿ, ಏಚಗಳ್ಳಿ, ತಾಂಡವಪುರ, ಚಿಕ್ಕಯ್ಯನ ಛತ್ರ, ಬಂಚಹಳ್ಳಿ ಹುಂಡಿ, ಕೆಂಪೀಸಿದ್ದನಹುಂಡಿ, ಹೆಜ್ಜಿಗೆ, ತೊರೆಮಾವು, ಇಮ್ಮಾವು, ಇಮ್ಮಾವು ಹುಂಡಿ, ಬೊಕ್ಕಹಳ್ಳಿ , ಹದಿನಾರು, ಹದಿನಾರು ಮೋಳೆ, ಆಲತ್ತೂರು, ಹೊಸಕೋಟೆ ಸೇರಿದಂತೆ ಹಲವಾರು ಗ್ರಾಮಗಳ ರೈತರ ಜಮೀನು ಮುಳುಗಡೆಯಾಗಿದೆ.

ಇತ್ತ ರೈತರು ತಮ್ಮ ಗದ್ದೆಯಲ್ಲಿ ನಾಟಿ ಮಾಡಲು ಸಸಿ ವಡಿ ತಯಾರು ಮಾಡಿಕೊಂಡಿದ್ದ ಭತ್ತದ ಒಟ್ಲು ಸಂಪೂರ್ಣವಾಗಿ ಮುಳುಗಡೆಯಾಗಿ ನಾಶವಾಗಿದ್ದು, ಇದರಿಂದ ರೈತರು ಇತ್ತ ಭತ್ತದ ನಾಟಿಯೂ ಮಾಡುವಂತಿಲ್ಲ, ಅತ್ತ ಬೇರೆ ಫಸಲು ಬೆಳೆಯುವಂತೆಯೂ ಇಲ್ಲದ ಪರಿಸ್ಥಿತಿಗೆ ಸಿಲುಕಿಕೊಂಡಿದ್ದಾರೆ.
ಹಳೇ ತಿರಮಕೂಡಲು, ಶ್ರೀಗುಂಜಾ ನರಸಿಂಹಸ್ವಾಮಿ ದೇವಾಲಯದ ಸೋಪಾನ ಕಟ್ಟೆ ಸಂಪೂರ್ಣ ಮುಳುಗಡೆಗೊಂಡಿದ್ದು, ಅದರ ಆಸುಪಾಸು ರಸ್ತೆಯಂಚಿನ ಬಳಿಗೆ ನೀರು ಹರಿದಿದೆ. ಪಟ್ಟಣದಿಂದ ತಾಯೂರಿಗೆ ತೆರಳುವ ಹುಣಸೂರು ಮಾರ್ಗದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತಿದೆ.
ಭಾರಿಮಳೆ ಪರಿಣಾಮ ರಾಜ್ಯದ ಹಲವೆಡೆ ಪ್ರವಾಹ ಭೀತಿ ಎದುರಾಗಿ ಜನರು ಭೀತಿಯಿಂದಿರುವಾಗಲೇ ಮೈಸೂರಿನ ತಿ.ನರಸೀಪುರದ ಸೇತುವೆ ಬಿರುಕು ಬಿಟ್ಟಿರುವುದು ಆತಂಕ ಮೂಡಿಸಿದೆ.
ಡಾ.ಎಚ್.ಸಿ.ಮಹದೇವಪ್ಪ ಸಚಿವರಾಗಿದ್ದಾಗ ಅಂದರೆ ನಾಲ್ಕು ವರ್ಷಗಳ ಹಿಂದೆ ಬಹುಕೋಟಿ ರೂ. ವೆಚ್ಚದಲ್ಲಿ ಈ ಸೇತುವೆ ನಿರ್ಮಾಣಗೊಂಡಿತ್ತು. ತಿ.ನರಸೀಪುರ, ಕೊಳ್ಳೇಗಾಲ, ಚಾಮರಾಜನಗರ ಸಂಪರ್ಕದ ರಸ್ತೆಯ ಸೇತುವೆ ಬಿರುಕು ಬಿಟ್ಟಿರುವುದು ಪ್ರಯಾಣಿಕರಲ್ಲಿ ಆತಂಕ ಹೆಚ್ಚಿಸಿದೆ.












Click it and Unblock the Notifications