ಬೇಸಿಗೆಯಲ್ಲಿ ಮಾವು ಬೆಳೆ ಕಾಡುವ ರೋಗಗಳು; ಹತೋಟಿ ಕ್ರಮ
ಬೆಂಗಳೂರು, ಫೆಬ್ರವರಿ 23; ಬೇಸಿಗೆ ಹಂಗಾಮಿನಲ್ಲಿ ಮಾವು ಬೆಳೆಯನ್ನು ನಿರ್ವಹಣೆ ಮಾಡಲು ರೈತರಿಗೆ ಹಲವು ಸಲಹೆಗಳನ್ನು ನೀಡಲಾಗಿದೆ. ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರ ಅಧಿಕಾರಿಗಳು, ವಿಜ್ಞಾನಿಗಳು ರೈತರಿಗೆ ಬೆಳೆ ನಿರ್ವಹಣೆ, ರೋಗಗಳ ಹತೋಟಿ ಕುರಿತು ರೈತ ಹೊಲಗಳಿಗೆ ತೆರಳಿ, ಪರಿಶೀಲಿಸಿ ಮಾಹಿತಿ ನೀಡಿದ್ದಾರೆ.
ಈ ವರ್ಷ ಮುಂಗಾರು ಕೈ ಕೊಟ್ಟ ಪರಿಣಾಮ ಮಳೆ ಕಮ್ಮಿಯಾಗಿದ್ದರೂ, ಬೆಳಗಿನ ತೇವಾಂಶ ಹಾಗೂ ಆರ್ದ್ರತೆಯಿಂದಾಗಿ ಹೂವು ಮತ್ತು ಕಾಯಿ ಕಚ್ಚುವುದು ತುಂಬ ತಡವಾಗಿದೆ. ಈ ಹಂತದಲ್ಲಿ ಕೀಟ ಮತ್ತು ರೋಗಗಳ ಬಾಧೆ ಅಲ್ಲದೇ ಹೂವು ಉದುರುವಿಕೆ ಹೆಚ್ಚಿನ ಪ್ರಮಾಣದಲ್ಲಿ ಕಂಡುಬಂದಿದೆ.

ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ವಿಜ್ಞಾನಿಗಳು ಇತ್ತೀಚೆಗೆ ಕೆಲ ಮಾವಿನ ತೋಟಗಳಿಗೆ ಭೇಟಿ ನೀಡಿ, ಬೇಸಿಗೆ ಹಂಗಾಮಿನಲ್ಲಿ ಬೆಳೆಗಳನ್ನು ಕಾಡುವ ರೋಗಗಳ ನಿರ್ವಹಣಾ ಕ್ರಮಗಳ ಕುರಿತಾಗಿ ರೈತರಿಗೆ ಸಲಹೆಗಳನ್ನು ಕೊಟ್ಟಿದ್ದಾರೆ.
ಕೀಟಗಳ ನಿಯಂತ್ರಣ ಕ್ರಮ: ಜಿಗಿಹುಳು. ತಂಪು ವಾತಾವರಣ ಹಾಗೂ ಆಗಾಗ ಮೋಡ ಕವಿದ ವಾತಾವರಣದಿಂದಾಗಿ ಜಿಗಿಹುಳುವಿನ ಬಾಧೆ ಕಂಡು ಬಂದಿರುತ್ತದೆ. ಇದರ ನಿಯಂತ್ರಣಕ್ಕೆ ಉತ್ತಮ ಗಾಳಿ ಮತ್ತು ಬೆಳೆಕು ಆಡುವಂತೆ ಗಿಡಗಳ ನಿರ್ವಹಣೆ ಮಾಡಬೇಕು.
ಬೇವಿನ ಎಣ್ಣೆ 10000 ಪಿ.ಪಿ.ಎಂ. 2 ಮಿಲಿ ಅಥವಾ ಇಮಿಡಾಕ್ಲೋಪ್ರಿಡ್ 17.8 ಇ.ಸಿ. 0.5 ಮಿಲಿ ಅಥವಾ ಲ್ಯಾಂಬ್ಡಾ ಸಿಯಾಲೋಥ್ರಿನ್ 5 ಇ.ಸಿ. ಅಥವಾ ಬಿಪ್ರೋಫೆಜಿನ್ 25 ಎಸ್.ಸಿ. 1 ಮಿಲಿ ಜೊತೆಗೆ ಅಸಿಫೇಟ್ 75 ಎಸ್.ಪಿ. ಪುಡಿಯನ್ನು ಒಂದು ಗ್ರಾಂ. ಒಂದು ಲೀಟರಗೆ ಬೆರೆಸಿ ಸಿಂಪರಿಸಬೇಕು. ಹಳದಿ ಅಂಟುಕಾರ್ಡುಗಳನ್ನು ಅಳವಡಿಸಬೇಕು.
ಹಿಟ್ಟು ತಿಗಣೆ. ಈ ಕೀಟದ ಹತೋಟಿಗಾಗಿ ಇರುವೆಗಳನ್ನು ಇರದಂತೆ ನೋಡಿಕೊಳ್ಳಬೇಕು. ಎರಡನೇಯದಾಗಿ ಬೇವಿನ ಎಣ್ಣೆ ಜೊತೆಗೆ ಮೀನಿನೆಣ್ಣೆ 2 ಮಿಲಿ ಅಥವಾ ರಾಸಾಯನಿಕಗಳಾದ ಕ್ಲೋರೋಪೈರಿಫಾಸ್ 20 ಇ.ಸಿ. 2 ಮಿಲಿ ಒಂದು ಲೀಟರ ನೀರಿಗೆ ಬೆರೆಸಿ ಜೊತೆಗೆ ಶ್ಯಾಂಪೂ ಮಿಶ್ರ ಮಾಡಿ ಸಿಂಪರಿಸಬೇಕು.
ಗೂಡು ಕಟ್ಟುವ ಕೀಡೆ ಅಥವಾ ಬಾರುಹುಳು. ಕಂಡುಬಂದಲ್ಲಿ ಇಮ್ಯಾಮೆಕ್ಟಿನ್ ಬೆಂಜೋಯೇಟ್ 5 ಎಸ್.ಜಿ. 0.4 ಮಿಲಿ ಅಥವಾ ಕ್ವಿನಾಲಫಾಸ್ 25 ಇ.ಸಿ. 2 ಮಿಲಿ 1 ಲೀಟರ ನೀರಿಗೆ ಬೆರೆಸಿ ಸಿಂಪರಿಸಬೇಕು. ಮುಂದೆ ಬರಬಹುದಾದ ಹಣ್ಣಿನ ನೊಣ ಕೀಟದ ಹತೋಟಿಗಾಗಿ ಈಗಲೇ ಎಕರೆಗೆ 6-10 ರಂತೆ ಮೋಹಕ ಬಲೆಗಳನ್ನು ಅಳವಡಿಸಬೇಕು. ತೋಟದಲ್ಲಿ ಅಲ್ಲಲ್ಲಿ ಎಕರೆಗೆ 1 ರಂತೆ ದೀಪಾಕರ್ಷಕ ಬಲೆಗಳನ್ನು ಅಳವಡಿಸಬೇಕು.
ಮಾವಿನ ಬೆಳೆಯಲ್ಲಿ ಕಂಡುಬರುವ ಪ್ರಮುಖ ರೋಗವಾದ 'ಬೂದಿ ರೋಗ'ದ ನಿಯಂತ್ರಣಕ್ಕಾಗಿ ಹುಳಿಮಜ್ಜಿಗೆ ಅಥವಾ ಅಡುಗೆ ಸೋಡಾ 2-3 ಗ್ರಾಂ. ಅಥವಾ ಹೆಕ್ಸಾಕೋನಾಜೋಲ್ 5% ಎಸ್.ಸಿ. 1 ಮಿಲಿ ಅಥವಾ ಸಿಸ್ಥೇನ್ 20% ಇ.ಡಬ್ಲ್ಯೂ ಪುಡಿ 2 ಗ್ರಾಂ. 1 ಲೀಟರ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಇನ್ನೊಂದು ಪ್ರಮುಖ ರೋಗವಾದ 'ಚಿಬ್ಬುರೋಗ'ದ ಹತೋಟಿಗೆ ಕಾರ್ಬನ್ಡೇಜಿಮ್ 50 ಡಬ್ಲ್ಯೂ.ಪಿ 1 ಗ್ರಾಂ. ಅಥವಾ ಥಯೋಫಿನೈಟ್ ಮಿಥೈಲ್ 70 ಡಬ್ಲೂ.ಪಿ 1 ಗ್ರಾಂ. ಅಥವಾ ಫಾಲಿಕ್ಯೂರ್ 250 ಇ.ಸಿ. 1 ಮಿಲಿ 1 ಲೀಟರ ನೀರಿಗೆ ಸಿಂಪರಿಸಬೇಕು.
ಹೂವು ಜಾಸ್ತಿ ಇದ್ದಾಗ ಸಿಂಪರಣೆ ಮಾಡಬಾರದು ಮತ್ತು ಅತೀ ಮುಖ್ಯವಾಗಿ ಗಂಧಕ ಮತ್ತು ಗಂಧಕಯುಕ್ತ ಪದಾರ್ಥಗಳನ್ನು ಸಿಂಪಡಿಸಬಾರದು. ಮಾವು ಅತ್ಯಂತ ಉಪಕಾರಿ ಬಹುವಾರ್ಷಿಕ ಹಣ್ಣಿನ ಬೆಳೆಯಾಗಿದ್ದು, ಅನೇಕ ಪರಭಕ್ಷಕ ಕೀಟಗಳು ಹಾಗೂ ಜೇನು ನೊಣದಂತಹ ಉಪಕಾರಿ ಕೀಟಗಳಿಗೆ ಆಶ್ರಯ ನೀಡುತ್ತದಾದ್ದರಿಂದ ಅನಾವಶ್ಯಕವಾಗಿ ಮತ್ತು ಹಾನಿಕಾರಕ ರಾಸಾಯನಿಕಗಳ ಸಿಂಪರಣೆ ಮಾಡಬಾರದು.
ಹೆಚ್ಚಿನ ಮಾಹಿತಿಗಾಗಿ ವಿಸ್ತರಣಾ ಕೊಪ್ಪಳ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದ ಮುಂದಾಳುಗಳಾದ ಡಾ ಎಂ. ವಿ. ರವಿ. (9480247745) ಹಾಗೂ ಸಹಾಯಕ ಪ್ರಾಧ್ಯಾಪಕರಾದ ವಾಮನಮೂರ್ತಿ (9482672039) ಇವರನ್ನು ಸಂಪರ್ಕಿಸಬಹುದು.












Click it and Unblock the Notifications