ಚೀನಾದಲ್ಲಿ ಕೊರೊನಾ ವೈರಸ್: ಬಳ್ಳಾರಿ ಕೆಂಪು ಮೆಣಸಿನಕಾಯಿ ಮೇಲೆ ಭಾರೀ ಎಫೆಕ್ಟ್
ಬಳ್ಳಾರಿ, ಫೆಬ್ರವರಿ 04: ಚೀನಾದಲ್ಲಿ ಕೊರೊನಾ ವೈರಸ್ ನಿಂದ ಜನರು ಏಕಾಏಕಿ ಸಾವನ್ನಪ್ಪಿರುತ್ತಿರುವ ಬೆನ್ನಲ್ಲೇ ಭಾರತದಲ್ಲೂ ಕೊರೊನಾ ಭೀತಿ ಆವರಿಸಿದೆ. ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಈಗಾಗಲೇ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಜಿಲ್ಲಾಸ್ಪತ್ರೆಗಳಲ್ಲಿ ಸ್ಪೆಷಲ್ ವಾರ್ಡ್ ಗಳ ವ್ಯವಸ್ಥೆಯನ್ನೂ ಮಾಡಲಾಗಿದೆ.
ಆದರೆ ಇದಿಷ್ಟೇ ಅಲ್ಲ, ಚೀನಾದ ಕೊರೊನಾ ವೈರಸ್ ಎಫೆಕ್ಟ್ ಬಳ್ಳಾರಿ ರೈತರಿಗೂ ತಟ್ಟಿದೆ. ಬಳ್ಳಾರಿಯಲ್ಲಿ ಬೆಳೆಯಲಾಗುವ ಕೆಂಪು ಮೆಣಸಿನಕಾಯಿ ಮೇಲೂ ಕೊರೊನಾ ವೈರಸ್ ಪರಿಣಾಮ ಬೀರಿದೆ. ಅದು ಹೇಗೆ ಅನ್ನುತ್ತೀರಾ? ಈ ವರದಿಯಲ್ಲಿದೆ ಸಂಪೂರ್ಣ ವಿವರ...
ಕೊರೊನಾ ವೈರಸ್ ನಿಂದ ಕರ್ನಾಟಕದಲ್ಲಿ ಕಟ್ಟೆಚ್ಚರ
ಕೇರಳ ಹಾಗೂ ಗೋವಾದಲ್ಲಿ ಕೊರೊನಾ ವೈರಸ್ ಪತ್ತೆಯಾದ ಪ್ರಕರಣಗಳು ಬೆಳಕಿಗೆ ಬರುತ್ತಿದ್ದಂತೆ ಕರ್ನಾಟಕದ ಗಡಿಜಿಲ್ಲೆಗಳಲ್ಲಿ ಭೀತಿ ಉಂಟಾಗಿದೆ. ಹೀಗಾಗಿ ಅಂಥ ಕಡೆಗಳಲ್ಲಿ ಈಗಾಗಲೇ ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಸ್ಪೆಷಲ್ ವಾರ್ಡ್ ಗಳನ್ನು ತೆರೆಯಲಾಗಿದೆ. ಸೂಕ್ತ ಚಿಕಿತ್ಸೆ ಪಡೆಯುವಂತೆ ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಆರೋಗ್ಯ ಇಲಾಖೆಯು ಜಿಲ್ಲೆಗಳಿಗೆ ಬರುವ ಪ್ರವಾಸಿಗರ ಮೇಲೆ ಕಣ್ಣಿಟ್ಟು ಅವರ ಆರೋಗ್ಯ ತಪಾಸಣೆಗೆ ಮುಂದಾಗಿದೆ.
ಕೊರೊನಾ ಭೀತಿ; ಕರ್ನಾಟಕದ ಹಲವೆಡೆ ಹೈ ಅಲರ್ಟ್
ಬಳ್ಳಾರಿ ಮೆಣಸಿನಕಾಯಿಗೂ, ಕೊರೊನಾಗೂ ಸಂಬಂಧವೇನು?
ಬಳ್ಳಾರಿ ಹಾಗೂ ಹಾವೇರಿ ಭಾಗದಲ್ಲಿ ಅತಿ ಹೆಚ್ಚು ಕೆಂಪು ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ವಿಶೇಷವಾಗಿ ಡಬ್ಬಿ ಬ್ಯಾಡಗಿ, ಸಿಜೆಂಟಾ ತಳಿಯ ಮೆಣಸಿನಕಾಯಿಯನ್ನು ಬೆಳೆಯಲಾಗುತ್ತದೆ. ಈ ಮೆಣಸಿನ ಕಾಯಿಯನ್ನು ಊಟಕ್ಕಷ್ಟೇ ಅಲ್ಲ ಲಿಪ್ ಸ್ಟಿಕ್ ಸೇರಿದಂತೆ ಕೆಂಪು ಬಣ್ಣದ ಸೌಂದರ್ಯ ವರ್ಧಕಗಳಿಗೂ ಬಳಸಲಾಗುತ್ತದೆ. ಬಳ್ಳಾರಿಯಲ್ಲಿ ಭತ್ತದ ಜೊತೆ ಅತಿಹೆಚ್ಚು ಬೆಳೆಯುವ ಬೆಳೆ ಅಂದರೆ ಕೆಂಪು ಮೆಣಸಿನ ಕಾಯಿ. ಹೀಗಾಗಿ ಚೀನಾಗೆ ಬಳ್ಳಾರಿಯಿಂದ ಕೆಂಪು ಮೆಣಸಿನ ಕಾಯಿಯನ್ನು ರಫ್ತು ಮಾಡಲಾಗುತ್ತಿತ್ತು. ಆದರೆ ಕೊರೊನಾ ವೈರಸ್ ನಿಂದಾಗಿ ಇಲ್ಲಿನ ಕೆಂಪು ಮೆಣಸಿನ ಕಾಯಿ ರಫ್ತು ಸ್ಥಗಿತಗೊಂಡಿದೆ.
ಬಳ್ಳಾರಿಯಿಂದ ಚೀನಾಗೆ ಮೆಣಸಿನಕಾಯಿ ರಫ್ತು
ಬಳ್ಳಾರಿ ಜಿಲ್ಲೆಯ ಕಂಪ್ಲಿ, ಸಿರಗುಪ್ಪ ಇನ್ನೂ ಹಲವೆಡೆ ಅತಿಹೆಚ್ಚಿನ ಮಟ್ಟದಲ್ಲಿ ಕೆಂಪು ಮೆಣಸಿನಕಾಯಿ ಬೆಳೆ ಬೆಳೆಯಲಾಗುತ್ತಿದೆ. ಆದರೆ ಕಳೆದ ಮೂರು ವರ್ಷದಿಂದ ಉತ್ತಮ ಇಳುವರಿ ಇಲ್ಲದೇ ಮೆಣಸಿನಕಾಯಿ ಬೆಳೆದು ನಷ್ಟ ಅನುಭವಿಸಿದ್ದರು ಇಲ್ಲಿನ ರೈತರು. ಈ ಬಾರಿ ಮೆಣಸಿನಕಾಯಿ ಬೆಳೆ ಒಂದಷ್ಟು ಕೈ ಹಿಡಿದಿತ್ತು. ಉತ್ತಮ ಮಳೆ ಬಂದ ಹಿನ್ನೆಲೆ ಇಳುವರಿ ಕೂಡ ಉತ್ತಮವಾಗಿ ಬಂದಿತ್ತು. ಆದರೆ, ಇದೀಗ ಚೀನಾದಲ್ಲಿ ಕೊರೊನಾ ವೈರಸ್ ನಿಂದಾಗಿ ಮೆಣಸಿನಕಾಯಿ ರಫ್ತು ಸ್ಥಗಿತಗೊಳಿಸಲಾಗಿದೆ. ಇಲ್ಲಿನ ಮೆಣಸಿನಕಾಯಿ ಬೆಳೆಯಲ್ಲಿ ಶೇಕಡಾ 30ರಷ್ಟು ಚೀನಾಗೆ ರಫ್ತಾಗುತ್ತದೆ. ಈಗ ಚೀನಾಗೆ ರಫ್ತಾಗುವುದನ್ನು ಸ್ಥಗಿತಗೊಳಿಸಲಾಗಿದೆ ಎಂದು ಕೃಷಿ ನಿರ್ದೇಶಕರು ಸ್ಪಷ್ಟಪಡಿಸಿದ್ದಾರೆ.
ಕೊರೊನಾ ವೈರಸ್: ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀತಿಗೆ ಕಾರಣವೇನು?
ಮೆಣಸಿನಕಾಯಿ ಬೆಲೆಯಲ್ಲೂ ದಿಢೀರ್ ಕುಸಿತ
ರಫ್ತು ಸ್ಥಗಿತಗೊಂಡಿದ್ದರಿಂದ ಮೆಣಸಿನಕಾಯಿ ಬೆಲೆಯೂ ದಿಢೀರನೆ ಕುಸಿದಿದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. 15 ದಿನಗಳ ಹಿಂದೆ ಬ್ಯಾಡಗಿ, ಬಳ್ಳಾರಿ ಸೇರಿದಂತೆ ವಿವಿಧ ಮಾರುಕಟ್ಟೆಯಲ್ಲಿ ಒಂದು ಕ್ವಿಂಟಾಲ್ ಕೆಂಪು ಮೆಣಸಿನಕಾಯಿಗೆ 20 ರಿಂದ 25 ಸಾವಿರ ಬೆಲೆಯಿತ್ತು. ಆದರೆ, ಇದೀಗ ಏಕಾಏಕಿ ಕ್ವಿಂಟಾಲ್ ಗೆ ಕೇವಲ 10 ರಿಂದ 12 ಸಾವಿರ ರೂಪಾಯಿಗೆ ಇಳಿಮುಖವಾಗಿದೆ. ಧಿಡೀರ್ ಬೆಲೆ ಕುಸಿತದಿಂದ ಬಳ್ಳಾರಿಯ ಇಪ್ಪತ್ತು ಸಾವಿರಕ್ಕೂ ಹೆಚ್ಚು ರೈತರು ಕಂಗಾಲಾಗಿದ್ದಾರೆ. ಆದರೆ ರಫ್ತು ನಿಷೇಧದ ಜೊತೆ ಈ ಬಾರಿ ಇಳುವರಿ ಹೆಚ್ಚು ಬಂದಿರುವುದು ಬೆಲೆ ಇಳಿಕೆಗೆ ಕಾರಣ ಎನ್ನುತ್ತಿದ್ದಾರೆ ಎಪಿಎಂಸಿ ಅಧಿಕಾರಿಗಳು.