ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆಯನ್ನು ಸಮರ್ಥಿಸಿಕೊಂಡ ಜಯಮಾಲಾ
ಉಡುಪಿ, ನವೆಂಬರ್. 21:ಮುಖ್ಯಮಂತ್ರಿ ಕುಮಾರಸ್ವಾಮಿ ರೈತ ಮಹಿಳೆಯ ಕುರಿತು ಮಾತನಾಡಿರುವುದು ನಾನು ಕೇಳಿದ್ದೇನೆ. ಅವರ ಮಾತಿನ ಅರ್ಥ, ಭಾವನೆ ಮಹಿಳೆಯರ ವಿರುದ್ಧ ಇರಲಿಲ್ಲ. ಹೋರಾಟ ಮಾಡಿದ ರೈತ ಮಹಿಳೆಗೆ ಅವಮಾನ ಮಾಡಿಲ್ಲ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಸಿಎಂ ಅವರನ್ನು ಸಮರ್ಥಿಸಿಕೊಂಡಿದ್ದಾರೆ.
ಉಡುಪಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು ಮುಖ್ಯಮಂತ್ರಿಗಳು ಮಾತನಾಡಿರುವುದನ್ನು ಎಲ್ಲರೂ ಅವರವರ ಭಾವಕ್ಕೆ ತಕ್ಕಂತೆ ಬಿಂಬಿಸುತ್ತಿದ್ದಾರೆ. ಯಾವುದೇ ಗೂಡಾರ್ಥ ಇಟ್ಟುಕೊಂಡು ಸಿಎಂ ಮಾತನಾಡಿಲ್ಲ. ಹೆಣ್ಮಕ್ಕಳನ್ನು ತಾಯಿ ಅಂತಾನೆ ಗೌರವದಿಂದ ಕರಿತಾರೆ ಎಂದು ಹೇಳಿದರು.
ಇನ್ನು ಶಬರಿಮಲೆ ವಿವಾದ ಕುರಿತು ಪ್ರತಿಕ್ರಿಯಿಸಿದ ಅವರು , ಎಲ್ಲರೂ ಅವರ ಆತ್ಮ ಮುಟ್ಟಿಕೊಂಡು ವಿಚಾರ ಮಾಡಲಿ. ಈ ದೇಶ ಎಲ್ಲವನ್ನೂ ಗಮನಿಸುತ್ತಿದೆ ಎನ್ನುವುದನ್ನು ಮರಿಬೇಡಿ. ಅರ್ಧ ಆಕಾಶ, ಅರ್ಧ ಭೂಮಿ ಇದ್ದ ಹಾಗೆ, ಅರ್ಧ ಹೆಣ್ಮಕ್ಕಳಿದ್ದಾರೆ. ದೇವರು ನನ್ನ ನಂಬಿಕೆ. ನನಗೆ ಬದುಕು. ದೇವರನ್ನೇ ಟಾರ್ಗೆಟ್ ಮಾಡುವವರ ಬಗ್ಗೆ ನಾನು ಏನೂ ಹೇಳಲ್ಲ ಎಂದು ಪ್ರತಿಕ್ರಯಿಸಿದರು.

ರಾಜ್ಯೋತ್ಸವ ಪ್ರಶಸ್ತಿಯ ಘನತೆ, ಗೌರವ ಕಡಿಮೆ ಆಗೋಕೆ ನಾನು ಬಿಡಲ್ಲ. ರಾಜ್ಯದ ಪ್ರಶಸ್ತಿ ಪುರಸ್ಕೃತರ ಪಟ್ಟಿ ತಯಾರಿದೆ. ಮುಖ್ಯಮಂತ್ರಿಯವರಿಗೆ ಅಕ್ರೋಬರ್ 30 ಕ್ಕೆ ಪಟ್ಟಿ ಕೊಟ್ಟಿದ್ದೇನೆ. ಚುನಾವಣಾ ನೀತಿ ಸಂಹಿತೆಯಿಂದ ವಿಳಂಬವಾಗಿದೆ ಅಷ್ಟೇ. ರಾಜ್ಯೋತ್ಸವ ಪ್ರಶಸ್ತಿಗೆ ಬಗ್ಗೆ ನವೆಂಬರ್ 29 ಕ್ಕೆ ಸಿಎಂ ಸಭೆ ಕರೆದಿದ್ದಾರೆ. ನವೆಂಬರ್ ಅಂತ್ಯದೊಳಗೆ ಪ್ರಶಸ್ತಿ ಪ್ರಧಾನ ಮಾಡೇ ಮಾಡ್ತೇವೆ ಎಂದು ಸ್ಪಷ್ಟಪಡಿಸಿದರು.
ರೈತರ ಸಭೆಯಲ್ಲಿ ಸಕ್ಕರೆ ಕಾರ್ಖಾನೆ ಮಾಲೀಕರು ಗೈರು ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಏನು ಸಂದಿಗ್ಧತೆ ಇದೆಯೋ ಗೊತ್ತಿಲ್ಲ. ಅವರಿಗೆ ನಾನು ಕೇಳಿ ತಿಳಿಸುತ್ತೇನೆ . ರೈತರ ಸಮಸ್ಯೆ ನಮ್ಮದೇ ಸಮಸ್ಯೆ, ನಾವೆಲ್ಲರೂ ರೈತರೇ. ರೈತರಿಗೆ ಮೊದಲು ಸ್ಪಂದಿಸುವ ಸರ್ಕಾರ ನಮ್ಮದು ಎಂದು ಜಯಮಾಲಾ ಭರವಸೆ ನೀಡಿದರು.












Click it and Unblock the Notifications