ಹವಾಮಾನ ಬದಲಾವಣೆ; ಭತ್ತ ಬೆಳೆಯುವ ರೈತರಿಗೆ ಸಲಹೆ
ಮೈಸೂರು, ಅಕ್ಟೋಬರ್ 22 : ಭತ್ತದ ಬೆಳೆಗೆ ಹಳದಿ ಕಾಂಡ ಕೊರಕ, ಗರಿ ಸುತ್ತುವ ಹುಳು, ಬೆಂಕಿ ರೋಗ ಮತ್ತು ದುಂಡಾಣು ಅಂಗಮಾರಿ ರೋಗ ಕಂಡು ಬಂದಿದೆ. ಪ್ರಸ್ತುತ ರೋಗ ಮತ್ತು ಕೀಟಗಳು ಹೆಚ್ಚಾಗಲು ಅನುಕೂಲವಾದ ವಾತಾವರಣವಿದೆ.
ಮೈಸೂರು ಜಿಲ್ಲೆಯ ಕೆ. ಆರ್. ನಗರ, ತಿ. ನರಸೀಪುರ, ನಂಜನಗೂಡು ಮತ್ತು ಮೈಸೂರು ತಾಲೂಕಿನ ಕೆಲವು ಭಾಗಗಳಲ್ಲಿ ಭತ್ತದ ಬೆಳೆಗೆ ವಿವಿಧ ರೋಗಗಳು ಕಂಡು ಬಂದಿವೆ. ರೋಗ/ಕೀಟಗಳ ನಿರ್ವಹಣೆಗಾಗಿ ಜಂಟಿ ಕೃಷಿ ನಿರ್ದೇಶಕರು ಸಲಹೆಗಳನ್ನು ನೀಡಿದ್ದಾರೆ.
ಕಾಂಡ ಕೊರಕದ ಹುಳು ಇದ್ದಲ್ಲಿ ಬೆಳವಣಿಗೆಯ ಹಂತದಲ್ಲಿ ಸುಳಿ ಒಣಗುವುದು. ತೆನೆ ಬರುವ ಹಂತದಲ್ಲಿ ಮತ್ತು ಬಂದ ನಂತರ ಬಿಳಿತೆನೆ ಜಳ್ಳು ತೆನೆ ಕಂಡು ಬರುತ್ತದೆ. ಇದರ ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಕ್ಲೋರೋಪೈರಿಫಾಸ್ 20EC 2.5 ಮಿ.ಲೀ ಬೆರೆಸಿ ಸಿಂಪಡಿಸಬೇಕು.

ಗರಿ ಸುತ್ತುವ ಹುಳು ಇದ್ದಲ್ಲಿ ಗರಿಗಳ ಅಂಚು ಒಳಭಾಗಕ್ಕೆ ಸುರುಳಿ ಸುತ್ತಿಕೊಂಡಿರುವುದು ಕಂಡು ಬರುತ್ತದೆ. ಎರಡು ಮೂರು ಗರಿಗಳನ್ನು ಕುಣಿಕೆ ಆಕಾರದಲ್ಲಿ ಹೆಣೆದಿರುವುದನ್ನು ಗಮನಿಸಬಹುದು. ನಿರ್ವಹಣೆಗಾಗಿ ಪ್ರತಿ ಲೀಟರ್ ನೀರಿಗೆ ಕ್ವಿನಾಲ್ ಫಾಸ್ 20EC 2 ಮಿ.ಲೀ ಅಥವಾ ಇಂಡಾಕ್ಸಿಕಾರ್ಬ್ 14.5 ಇಅ 0.5 ಮಿ.ಲೀ ಬೆರೆಸಿ ಸಿಂಪಡಿಸಬೇಕು. ಒಂದು ಎಕರೆಗೆ 250 ರಿಂದ 300 ಲೀ ದ್ರಾವಣ ಸಿಂಪಡಿಸಬೇಕು.
ಬೆಂಕಿ ರೋಗ/ ಕುತ್ತಿಗೆ ರೋಗ ಇದ್ದಲ್ಲಿ ಬೆಳೆವಣಿಗೆ ಹಂತದಲ್ಲಿ ಗರಿಗಳ ಮೇಲೆ ವಜ್ರದಾಕಾರದ ಕಂದು ಚುಕ್ಕಿಗಳಾಗಿ, ಆ ಚುಕ್ಕಿಗಳ ಮಧ್ಯಭಾಗವು ಬೂದಿ ಬಣ್ಣ ಹೊಂದಿರುತ್ತದೆ. ತೆನೆ ಹೊರ ಬಂದಾಗ ತೆನೆಯ ಕುತ್ತಿಗೆ ಭಾಗದಲ್ಲಿ ಕಪ್ಪು ಮಚ್ಚೆ ಕಂಡು ಬಂದು ಕಾಳು ಒಣಗುತ್ತದೆ.
ರೋಗದ ನಿರ್ವಹಣೆಗಾಗಿ ರೈತರು ಪ್ರತಿ ಲೀಟರ್ ನೀರಿಗೆ ಟ್ರೈಸೈಕ್ಲೋಜೋಲ್ 75 WC 0.6 ಗ್ರಾಂ ಅನ್ನು ಸೇರಿಸಿ ಅಗತ್ಯಕ್ಕೆ ತಕ್ಕಂತೆ ಬೆಳವಣಿಗೆ ಹಂತ ಅಥವಾ ತೆನೆ ಬರುವ ಪೂರ್ವದಲ್ಲಿ (ಹೂ ಬಿಡುವ ಹಂತ) ಸಿಂಪಡಿಸುವುದು.
ಕೊಳವೆ ಹುಳು, ಎಳೆ ಕವಚ ರೋಗ ಮತ್ತು ಊದುಬತ್ತಿ ರೋಗವೂ ಸಹ ಅಲ್ಲಲ್ಲಿ ಕಂಡು ಬಂದಿದೆ. ನಿರ್ವಹಣೆಗಾಗಿ ಮತ್ತು ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರ ಕಛೇರಿ, ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ತಿಳಿಸಲಾಗಿದೆ.












Click it and Unblock the Notifications