ಗುಂಡ್ಲುಪೇಟೆಯಲ್ಲಿ ನಷ್ಟಕ್ಕೆ ಕಂಗೆಟ್ಟು ಈರುಳ್ಳಿ ಹೊಲವನ್ನು ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿದ ರೈತ
ಚಾಮರಾಜನಗರ, ಜೂನ್ 06: ಒಂದೆಡೆ ಈರುಳ್ಳಿಗೆ ತಗುಲಿದ ರೋಗ, ಮತ್ತೊಂದೆಡೆ ಕುಸಿದ ದರ... ಇದರಿಂದ ನೊಂದ ರೈತರು ತಾವು ಬೆಳೆದ ಈರುಳ್ಳಿಯನ್ನು ಕೀಳುವ ಗೋಜಿಗೆ ಹೋಗದೆ ಟ್ರ್ಯಾಕ್ಟರ್ ನಿಂದ ಉಳುಮೆ ಮಾಡಿರುವುದು ಗುಂಡ್ಲುಪೇಟೆ ತಾಲೂಕಿನ ಕಲ್ಲಿಗೌಡನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.
Recommended Video
ಲಾಕ್ ಡೌನ್ ಸಮಸ್ಯೆ ನಡುವೆಯೂ ಕಷ್ಟಪಟ್ಟು ಈರುಳ್ಳಿಯನ್ನು ರೈತರು ಬೆಳೆದಿದ್ದರು. ಆದರೆ ಅದಕ್ಕೆ ರೋಗ ತಗುಲಿದ್ದರಿಂದ ಇಳುವರಿ ಕುಂಠಿತಗೊಂಡಿತ್ತಲ್ಲದೆ, ಕೈಗೆ ಬಂದ ಫಸಲು ಬಾಯಿಗೆ ಬಾರದ ಪರಿಸ್ಥಿತಿ ಎದುರಾಗಿದೆ. ಈ ನಡುವೆ ಕೆಲವರು ಈರುಳ್ಳಿಯನ್ನು ಕಿತ್ತು ಮಾರುಕಟ್ಟೆಗೆ ಕೊಂಡೊಯ್ದರೂ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದಾರೆ. ಬೆಳೆಯಲು ಮಾಡಿದ ಖರ್ಚು ವಾಪಸ್ ಬಾರದ ಕಾರಣದಿಂದಾಗಿ ನೊಂದ ರೈತರು ಅದನ್ನು ಉಳುಮೆ ಮಾಡಿ ಬೇರೆ ಬೆಳೆ ಬೆಳೆಯುವ ಬಗ್ಗೆ ಆಲೋಚನೆ ಮಾಡುತ್ತಿದ್ದಾರೆ.
ತಮಿಳುನಾಡಿನಿಂದ ಬಾರದ ಬಿತ್ತನೆ ಬೀಜ
ಮೊದಲೆಲ್ಲ ತಮಿಳುನಾಡಿನಿಂದ ಉತ್ತಮ ಗುಣಮಟ್ಟದ ಬಿತ್ತನೆ ಬೀಜ ಮಾರುಕಟ್ಟೆಗೆ ಬರುತ್ತಿತ್ತು. ಆದರೆ ಈ ಬಾರಿ ಲಾಕ್ ಡೌನ್ ನಿಂದಾಗಿ ಬಿತ್ತನೆ ಬೀಜ ಬರಲಿಲ್ಲ. ಇದರಿಂದ ಸ್ಥಳೀಯವಾಗಿ ದೊರಕಿದ ಬೀಜವನ್ನೇ ಬಳಸಿ ಈರುಳ್ಳಿ ಬೆಳೆದಿದ್ದರು. ಆದರೆ ಅದಕ್ಕೆ ರೋಗ ತಗುಲಿದೆ. ಹೀಗಿದ್ದರೂ ರಾಸಾಯನಿಕ ಔಷಧಿ ಸಿಂಪಡಣೆ ಮಾಡಿ ಬೆಳೆಯನ್ನು ಕಾಪಾಡಿಕೊಂಡಿದ್ದಾರೆ. ಆದರೆ ಈಗ ಅದನ್ನು ಕಿತ್ತು ಮಾರುಕಟ್ಟೆಗೆ ಕೊಂಡೊಯ್ದರೆ ಹೆಚ್ಚಿನ ಹಣ ಖರ್ಚು ಆಗುತ್ತದೆ. ಆದರೆ ಈಗ ದೊರೆಯುತ್ತಿರುವ ದರವನ್ನು ಗಮನಿಸಿದರೆ ಖರ್ಚು ಮಾಡಿದ ಹಣವೂ ಬರಲ್ಲ. ಹೀಗಾಗಿ ಫಸಲನ್ನು ಕೀಳದೆ ಉಳುಮೆ ಮಾಡುತ್ತಿರುವುದಾಗಿ ರೈತರು ಹೇಳುತ್ತಿದ್ದಾರೆ.
ಚಾಮರಾಜನಗರದ ರೈತರನ್ನು ಸಂಕಷ್ಟಕ್ಕೆ ತಳ್ಳಿದ ಈರುಳ್ಳಿ ಬೆಳೆ
ಈರುಳ್ಳಿ ಬೆಳೆದ ಕಾಡಂಚಿನ ರೈತರು ಕಂಗಾಲು
ಕಲ್ಲಿಗೌಡನಹಳ್ಳಿ ಬಸವರಾಜು ಎರಡು ಎಕರೆ ಜಮೀನಿನಲ್ಲಿ ಒಂದು ಲಕ್ಷ ಖರ್ಚು ಮಾಡಿ ಈರುಳ್ಳಿ ಬೆಳೆದಿದ್ದರು. ಆದರೆ ಬೆಳೆಗೆ ರೋಗ ಭೀತಿ ಎದುರಾದ ಹಿನ್ನೆಲೆಯಲ್ಲಿ ಉಳುಮೆ ಮಾಡಿ ಈರುಳ್ಳಿಯನ್ನು ನಾಶ ಮಾಡಿದ್ದಾರೆ. ತಾಲೂಕಿನಲ್ಲಿ ಮಳೆ ಚೆನ್ನಾಗಿ ಬಿದ್ದಿದ್ದರಿಂದ ಕಾಡಂಚಿನ ಹಂಗಳ, ಕಲ್ಲಿಗೌಡನಹಳ್ಳಿ, ಗೋಪಾಲಪುರ, ಬೇರಂಬಾಡಿ, ಚನ್ನಮಲ್ಲಿಪುರ, ದೇಶೀಪುರ, ಆಲತ್ತೂರು ಮಂಚಹಳ್ಳಿ ಮುಂತಾದ ಹಳ್ಳಿಗಳಲ್ಲಿ ಈರುಳ್ಳಿ ಬೆಳೆದಿದ್ದಾರೆ.
ಬೆಳೆಯನ್ನು ನಾಶ ಮಾಡಿದ ರೈತ
ಇದೀಗ ಇಲ್ಲಿನ ಬಹುತೇಕ ನೀರಾವರಿ ಜಮೀನುಗಳಲ್ಲಿ ಬೆಳೆದಿದ್ದ ಈರುಳ್ಳಿ ಬಿಳುಚಿಕೊಂಡು ಕೊಳೆಯುತ್ತಿದೆ. ಇದನ್ನು ಕಿತ್ತು ಮಾರುಕಟ್ಟೆಗೆ ಕೊಂಡೊಯ್ದರೆ ಕೇವಲ ಕ್ವಿಂಟಾಲಿಗೆ ಸಾವಿರದಿಂದ ಸಾವಿರದೈನೂರು ಮಾತ್ರ ಸಿಗುತ್ತದೆ. ಇದಕ್ಕಿಂದ ಫಸಲನ್ನು ಉಳುಮೆ ಮಾಡಿ ಬೇರೆ ಬೆಳೆಯನ್ನು ಬೆಳೆಯುವುದೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಹುತೇಕ ರೈತರು ಬರತೊಡಗಿದ್ದಾರೆ.
ಸಾಲ ಮಾಡಿ ಬೆಳೆದ ಬೆಳೆಯೂ ಮಣ್ಣುಪಾಲು
ಒಂದು ಕಡೆ ಲಾಕ್ ಡೌನ್ನಿಂದಾಗಿ ವ್ಯವಹಾರಗಳೆಲ್ಲವೂ ಮೊಟಕುಗೊಂಡಿದೆ. ಜತೆಗೆ ಬೆಳೆದ ಬೆಳೆಗೂ ಸೂಕ್ತ ಬೆಲೆ ಸಿಗುತ್ತಿಲ್ಲ. ಹೀಗಿರುವಾಗ ಸಾಲ ಮಾಡಿ ಬೆಳೆದ ಬೆಳೆಯೂ ಮಣ್ಣು ಪಾಲಾಗುತ್ತಿದೆ. ಇದರಿಂದ ನೊಂದ ರೈತ ಮುಂದೇನು ಮಾಡಬೇಕೆಂದು ಗೊತ್ತಾಗದೆ ತಲೆ ಮೇಲೆ ಕೈಹೊತ್ತು ಕುಳಿತಿದ್ದಾನೆ.