Cauvery Dispute: ರೈತರಿಗೆ ಮೋಸ ಆಗಲು ಬಿಡಲ್ಲ: ಬಸವರಾಜ ಬೊಮ್ಮಾಯಿ
ಮಂಡ್ಯ, ಸೆಪ್ಟೆಂಬರ್, 09: ಈ ಬಾರಿ ಮಳೆ ಕೊರತೆ ಆಗಿದೆ. ಜೂನ್ ತಿಂಗಳಲ್ಲಿ ಮಳೆ ಕೊರತೆ ಗೊತ್ತಿದ್ದರೂ ಸರ್ಕಾರ ಮುನ್ನಚರಿಕೆ ತೆಗೆದುಕೊಂಡಿಲ್ಲ. ಕಾವೇರಿ ಅಚ್ಚುಕಟ್ಟಿನ ನಾಲ್ಕು ಡ್ಯಾಂಗಳನ್ನು ನಿರ್ವಹಣೆ ಮಾಡಿಲ್ಲ. ಕೆರೆ ಕಟ್ಟೆ ತುಂಬಿಸುವುದು ವಿಳಂಬ ಮಾಡಿದ್ದಾರೆ, ನಾವು ಡ್ಯಾಂ ವೀಕ್ಷಣೆಗೆ ಬರುತ್ತೇವೆಂದೇ ನೀರು ನಿಲ್ಲಿಸಿದ್ದಾರೆ. ರೈತರಿಗೆ ಮೋಸವಾಗಲು ನಾವು ಬಿಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದ ವಿರುದ್ಧ ಹರಿಹಾಯ್ದರು.
ಜೂನ್ನಲ್ಲಿ ನಡೆಯಬೇಕಾದ ಐಸಿಸಿ ಸಭೆ ಆಗಸ್ಟ್ ತಿಂಗಳಲ್ಲಿ ಕರೆದಿದ್ದಾರೆ. ಸಿಡಬ್ಲ್ಯೂಎಂಎ ಮುಂದೆ ಸರಿಯಾದ ವಾದ ಮಂಡನೆ ಆಗಿಲ್ಲ. 37 ಟಿಎಂಸಿ ಕೊಡುವ ಬದಲಿಗೆ 62 ಟಿಎಂಸಿ ನೀರು ಬಳಕೆ ಮಾಡಿದ್ದಾರೆ. ಹೆಚ್ಚುವರಿ ಬೆಳೆಗೆ ನೀರು ಕೇಳುತ್ತಿದ್ದಾರೆ. ಅವರು ಕೇಳಿದ್ದಕ್ಕಿಂದ ಕಡಿಮೆ ನೀರು ಬಿಟ್ಟಿದ್ದೇವೆ ಎಂದು ಮುಖ್ಯಮಂತ್ರಿ ಬೆನ್ನು ತಟ್ಟಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.

ಸುಪ್ರೀಂ ಆದೇಶ ಬಳಿಕ ನೀರು ಬಿಟ್ಟಿದ್ದರೆ ನೀರು ಉಳಿಸಬಹುದಿತ್ತು. ಕರ್ನಾಟಕ ಇವತ್ತಿನವರೆಗೂ ಐಎ ಹಾಕಿಲ್ಲ. ತಮಿಳುನಾಡಿನ ಅರ್ಜಿಗೆ ಅಫಿಡವಿಟ್ ಹಾಕಿದ್ದಾರೆ ಅಷ್ಟೇ. ವಾಸ್ತವವಾಂಶ ಮರೆಮಾಚಿ ನೀರು ಬಿಟ್ಟಿದ್ದಾರೆ. ನೀರಿನ ವಿಷಯದಲ್ಲಿ ರಾಜಕಾರಣ ಮಾಡಬಾರದು. ಕರ್ನಾಟಕ ಸರ್ಕಾರಕ್ಕೆ ಎಚ್ಚರಿಕೆ ಕೊಡಲು ಇಲ್ಲಿಗೆ ಬಂದಿದ್ದೇವೆ. ಈ ಕೂಡಲೇ ನೀರು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ನೀರು ಬಿಟ್ಟರೆ ಕಾವೇರಿ ಮಕ್ಕಳಿಗೆ ದ್ರೋಹ ಎಸಗಿದ ಹಾಗೇ. ಬೆಳೆಗಳು ಒಣಗುತ್ತಿದೆ, ಅರೆ ಖುಷ್ಕಿ ಬೆಳೆಯಿರಿ ಎಂದು ಆದೇಶ ಮಾಡುತ್ತಾರೆ. ನಮ್ಮ ಮಕ್ಕಳಿಗೆ ನೀರು ಕೊಡುತ್ತಿಲ್ಲ. ನಮ್ಮ ಹಕ್ಕಿನ ನೀರು ತಮಿಳುನಾಡಿಗೆ ಕೊಡುವ ದುಸ್ಸಾಹಸ ಮಾಡಿದ್ದೀರಾ. ನಮ್ಮ ನಾಡಿನ ಹಿತಕ್ಕಾಗಿ ಡ್ಯಾಂ ನಿರ್ಮಾಣ ಮಾಡಿದ್ದಾರೆ. ನಮ್ಮ ಸರ್ಕಾರದಲ್ಲಿ ವಸ್ತು ಸ್ಥಿತಿ ತಿಳಿಸುವ ಕೆಲಸ ಆಗಿತ್ತು. ನಿಮ್ಮಿಂದ ಆ ಪ್ರಯತ್ನವೇ ಆಗಿಲ್ಲ ಎಂದು ಆಕ್ರೋಶ ಹೊರಹಾಕಿದರು.
ಸಿಎಂ, ಡಿಸಿಎಂ ಈ ಬಗ್ಗೆ ಗಮನ ಹರಿಸಿಲ್ಲ. ಸಿಎಂ ನೀರು ಬಿಡಲ್ಲ ಅಂತಾರೆ, ಡಿಎಸಿಎಂ ಆದೇಶದ ಪ್ರಕಾರ ಬಿಡ್ತೀವಿ ಅಂತಾರೆ. ಈ ಸರ್ಕಾರದಲ್ಲಿ ಸ್ಪಷ್ಟತೆ ಇಲ್ಲ. ನಾವೆಲ್ಲ ಬರ್ತೀವಿ ಎಂದು ನೀರು ನಿಲ್ಲಿಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇನ್ನು ಮೇ ಅಂತ್ಯದವರೆಗೆ ಕುಡಿಯುವ ನೀರಿಗೆ 18 ಟಿಎಂಸಿ ಬೇಕು, ಕೇವಲ 13 ಟಿಎಂಸಿ ಬಳಕೆಗೆ ಸಿಗುವ ನೀರಿದೆ. ಸರ್ಕಾರದ ವೈಫಲ್ಯವನ್ನು ಜನ ಕ್ಷಮಿಸುವುದಿಲ್ಲ. ಕೃಷಿಗೆ 33 ಟಿಎಂಸಿ ನೀರು ಬಿಡಬೇಕು. ಆದರೆ ಬಿಟ್ಟಿದ್ದು 7 ಟಿಎಂಸಿ ಮಾತ್ರ. ರೈತರ ಬೆಳೆಗಳು ಏನಾಗಬೇಕು. ಇನ್ನು ಕೂಡ ತಮಿಳುನಾಡಿಗೆ ನೀರು ಬಿಡ್ತಿದ್ದೀರಿ ಎಂದು ಟೀಕಿಸಿದರು.
ಈ ಭಾಗದಲ್ಲಿ ದೊಡ್ಡ ಪ್ರಮಾಣದ ಬಹುಮತ ನಿಮಗೆ ಸಿಕ್ಕಿದೆ. ಬಹುಮತ ಕೊಟ್ಟ ಜನರಿಗೆ ನೀವು ಕೊಟ್ಟ ಬಹುಮಾನವ ಇದೇನಾ?. ಕಾಂಗ್ರೆಸ್ ಬರಗಾಲ ಸೃಷ್ಟಿ ಮಾಡಿದೆ. ಮೇಕೆದಾಟು ಬಗ್ಗೆ ಡಿಸಿಎಂ ಮಾತನಾಡ್ತಾರೆ. ಡಿಪಿಆರ್ ಕೊಡುವ ಸಂದರ್ಭದಲ್ಲಿ ಕಾಂಗ್ರೆಸ್ನವರು ಪಾದಯಾತ್ರೆ ಮಾಡಿದ್ರು. ಇವರ ಪಾದಯಾತ್ರೆ ಮಾಡಿದ ತಕ್ಷಣವೇ ತಮಿಳುನಾಡು ಸುಪ್ರೀಂ ಮೊರೆ ಹೋಗಿದೆ. ಕೂಡಲೇ ಮೇಕೆದಾಟು ಬಗ್ಗೆ ಸರ್ಕಾರ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ತಮಿಳುನಾಡಿನಲ್ಲಿ ಅಕ್ರಮವಾಗಿ ಕುರುವೈ ಬೆಳೆ ಬೆಳೆದಿದ್ದಾರೆ. ನಾಲ್ಕು ಲಕ್ಷ ಹೆಕ್ಟೇರ್ ಬೆಳೆಗೆ ಕಾವೇರಿ ನೀರು ಬಳಸಿಕೊಳ್ಳುತ್ತಿದ್ದಾರೆ. ಅಕ್ರಮವಾಗಿ ಕಾವೇರಿ ನೀರು ಉಪಯೋಗಿಸಲಾಗಿದೆ. ಯಾಕೆ ಇವರು ಅದರ ಬಗ್ಗೆ ತಿಳಿಸುತ್ತಿಲ್ಲ. ಡ್ಯಾಂ ನೋಡಿದಾಗ ನನಗೆ ಹೊಟ್ಟೆ ಉರಿ. ಡ್ಯಾಂನ ಹಿನ್ನೀರಿನ ಪ್ರದೇಶ ಡ್ರೈ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಮಾಜಿ ಸಚಿವ ಆರ್ ಆಶೋಕ್ ಮಾತನಾಡಿ, ತಮಿಳುನಾಡಿಗೆ ಸಿದ್ದರಾಮಯ್ಯ ಸರ್ಕಾರ ಖದ್ದು ಮುಚ್ಚಿ ನೀರು ಬಿಟ್ಟು ಮಂಡ್ಯ, ಮೈಸೂರು, ಬೆಂಗಳೂರು ಜನರಿಗೆ ಮೋಸ ಮಾಡಿದೆ. ಕೆ.ಆರ್.ಎಸ್.ಅಣೆಕಟ್ಟೆಯ ನೀರಿನ ನಿಜ ತಿಳಿಸಲು ಪರಿಶೀಲನೆ ನಡೆಸಿದ್ದೇವೆ. ಮಾಧ್ಯದವರನ್ನು ಡ್ಯಾಂಗೆ ಬಿಡದೇ ಮೋಸಮಾಡಲಾಗಿದೆ. ಇಂದಿರಾಗಾಂಧಿ ಆಡಳಿತದಂತೆ ಕೆ.ಆರ್.ಎಸ್ ತುರ್ತು ಪರಿಸ್ಥಿತಿ ತಂದಿದೆ. ವಿಧಾನಸೌಧದಲ್ಲಿ ಕುಳಿತವರು ಪೋನ್ ಕರೆ ಮೂಲಕ ಮಾಧ್ಯಮದವರನ್ನು ತಡೆಸಿದ್ದಾರೆ. ಇದರ ಹಿಂದೆ ಇಂಡಿಯಾ ಅಜೆಂಡಾ ಇದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications