ಹೆಸರು ಬೆಳೆಯ ಬೇಸಾಯ; ರೈತರಿಗೆ ಕೃಷಿ ಇಲಾಖೆ ಸಲಹೆಗಳು
ಬೆಂಗಳೂರು, ಜುಲೈ 01 : ನೈಋತ್ಯ ಮುಂಗಾರು ಕರ್ನಾಟಕಕ್ಕೆ ಆಗಮಿಸುತ್ತಿದ್ದಂತೆ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳು ಆರಂಭಗೊಂಡಿವೆ. ಕೃಷಿ ಇಲಾಖೆ 'ಹೆಸರು' ಬೆಳೆಯನ್ನು ಬೆಳೆದ ರೈತರಿಗೆ ಹಲವು ಸಲಹೆಗಳನ್ನು ನೀಡಿದೆ.
ರೈತರು ಸುಧಾರಿತ ಬೇಸಾಯ ಕ್ರಮಗಳು ಮತ್ತು ಸಸ್ಯ ಸಂರಕ್ಷಣಾ ಕ್ರಮಗಳ ಕುರಿತು ಮಾಹಿತಿ ತಿಳಿದುಕೊಳ್ಳಬೇಕು. ಬೀಜಗಳನ್ನು ಬಿತ್ತಿದ 40 ದಿನಗಳಲ್ಲಿ ಸಸ್ಯಗಳ ಸಂರಕ್ಷಣಾ ಕ್ರಮಗಳನ್ನು ಕೈಗೊಂಡು, ಕಳೆಗಳನ್ನು ಹತೋಟಿ ಮಾಡಬೇಕು.
ಹೆಸರು ಬೆಳೆಯನ್ನು ಎಲೆ ತಿನ್ನುವ ಹುಳು, ನಂಜು ರೋಗ ಹೆಚ್ಚಾಗಿ ಕಾಡುತ್ತದೆ. ನೊಣಗಳು ಎಲೆಗಳ ಮೇಲೆ ಮೊಟ್ಟೆಗಳನ್ನು ಇಡುತ್ತದೆ. ಕಾಂಡವನ್ನು ಮರಿಗಳು ಕೊರೆಯುತ್ತವೆ. ರೈತರು ಕೀಟಗಳನ್ನು ನಿರ್ವಹಣೆ ಮಾಡುವ ವಿಧಾನಗಳನ್ನು ತಿಳಿಯಬೇಕು.
ರೈತರು ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತು ಮಣ್ಣಿನಲ್ಲಿ ಹೂಳಬೇಕು ಎಂದು ಕೃಷಿ ಇಲಾಖೆ ಸಲಹೆ ನೀಡಿದೆ. ರೈತರು ಅನುಸರಿಸಬೇಕಾದ ಬೇಸಾಯ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗಿದೆ.

ಅಂತರ ಬೇಸಾಯ ಕ್ರಮ ಅನುಸರಿಸಿ
ಜಮೀನಿನಲ್ಲಿ ಬೀಜ ಬಿತ್ತನೆ ಮಾಡಿದ 40 ದಿನಗಳೊಳಗಾಗಿ ಎರಡು ಸಾರಿ ಅಂತರ ಬೇಸಾಯ ಮಾಡಿ, ಕಳೆ ಹತೋಟಿ ಮಾಡಬೇಕು. ಬೆಳೆಯು ಹೂವಾಡುವ ಹಾಗೂ ಕಾಳು ಕಟ್ಟುವ ಹಂತದಲ್ಲಿದ್ದಾಗ ಪ್ರತಿ ಲೀಟರ್ ನೀರಿಗೆ 10 ಗ್ರಾಂ 19:19:19 ಅಥವಾ ಶೇ. 02 ರ ಡಿ.ಎ.ಪಿ. (20 ಗ್ರಾಂ ಡಿ.ಎ.ಪಿ ಪ್ರತಿ ಲೀಟರ ನೀರಿಗೆ) ಸಿಂಪಡಣೆ ಮಾಡಬೇಕು.

ಎಲೆಗಳ ಮೇಲೆ ಮೊಟ್ಟೆ
ಅಗ್ರೋಮೈಜಿಡ್ ನೋಣವು ಎಳೆಯ ಎಲೆಗಳ ಮೇಲೆ ಮೊಟ್ಟೆ ಇಡುತ್ತದೆ. ಮರಿಗಳು ಕಾಂಡ ಕೊರೆಯುತ್ತವೆ. ಕೊರೆದ ಕಾಂಡದ ಸಸಿಗಳು ಬಾಡುತ್ತವೆ. ಈ ಕೀಟದ ನಿಯಂತ್ರಣಕ್ಕಾಗಿ ಬಾಡುತ್ತಿರುವ ಸಸಿಗಳನ್ನು ಕಿತ್ತು ನೆಲದಲ್ಲಿ ಹೂಳಬೇಕು. ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ 0.2 ಮಿ.ಲೀ. ಇಮಿಡಾಕ್ಲೋಪ್ರಿಡ್ 17.8 ಎಸ್.ಎಲ್ ಅಥವಾ 0.3 ಗ್ರಾಂ. ಥೈಯಾಮಿಥಾಕ್ಸಾಮ್ 25 ಡಬ್ಲೂ.ಜಿ. ಅಥವಾ 1.7 ಮಿ.ಲೀ. ಡೈಮಿಥೊಯೇಟ್ 30 ಇ.ಸಿ. ಬೆರಸಿ ಸಿಂಪಡಣೆ ಮಾಡಿ.

ಬೆಳೆಗಳನ್ನು ಕಾಡುವ ರೋಗ
ಎಲೆ ತಿನ್ನುವ ಹುಳುಗಳು ಕಂಡು ಬಂದಾಗ ಪ್ರತಿ ಲೀಟರ್ ನೀರಿಗೆ 1 ಮಿ.ಲೀ. ಮೊನೊಕ್ರೋಟೊಫಾಸ್ 36 ಎಸ್.ಎಲ್. ಅಥವಾ 1.7 ಮಿ.ಲೀ. ಡೈಮಿಥೊಯೇಟ್ 30 ಇ.ಸಿ. ಬೆರೆಸಿ ಸಿಂಪಡಿಸಬೇಕು. ನಂಜು ರೋಗಗಳು ಕಂಡುಬಂದಾಗ ಎಲೆಗಳ ಮೇಲೆ ದಟ್ಟ ಮತ್ತು ತಿಳಿ ಹಳದಿ ಬಣ್ಣದ ಮಚ್ಚೆಗಳು ಕಾಣಿಸುತ್ತವೆ. ಗಿಡಗಳು ಕುಳ್ಳಗಾಗುವುದು, ರೋಗ ತೀವ್ರವಾಗಿದ್ದರೆ ಕಾಯಿ ಬಿಡುವುದಿಲ್ಲ, ರೋಗಕ್ಕೆ ತುತ್ತಾದ ಸಸ್ಯಗಳನ್ನು ಪ್ರಾರಂಭದ ಹಂತದಲ್ಲಿಯೇ ಗುರುತಿಸಿ ಕಿತ್ತು ಹೂಳಬೇಕು.

ರೋಗ ಹರಡುವುದನ್ನು ತಡೆಯಿರಿ
ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೀಟ ಮತ್ತು ರೋಗ ಬಾಧೆ ಕಂಡಾಗ ಮಾತ್ರ ತೆಗೆದುಕೊಳ್ಳಬೇಕು. ಪ್ರತಿ ವರ್ಷ ಕೀಟ ಮತ್ತು ರೋಗ ಬಾಧೆ ಇರುವ ಕ್ಷೇತ್ರಗಳಲ್ಲಿ ಮುಂಜಾಗ್ರತಾ ಕ್ರಮವಾಗಿ ಸಸ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕು. ಕೀಟ ಮತ್ತು ರೋಗ ಹತೋಟಿಗೆ ಪ್ರತಿ ಎಕರೆಗೆ 200 ಲೀ. ಸಿಂಪರಣಾ ದ್ರಾವಣ ಬಳಸಬೇಕು.












Click it and Unblock the Notifications