'ರೈತ ಸಮುದಾಯಕ್ಕೆ, ಮಹಿಳೆಯರಿಗೆ ಅವಮಾನ ಮಾಡಿದ ಕುಮಾರಸ್ವಾಮಿ'
ಬೆಂಗಳೂರು, ನವದೆಹಲಿ 19: ರೈತ ಮಹಿಳೆಯ ಕುರಿತು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ನೀಡಿದ ಹೇಳಿಕೆಯನ್ನು ಕರ್ನಾಟಕದ ಆಮ್ ಆದ್ಮಿ ಪಕ್ಷದ ಘಟಕ ತೀವ್ರವಾಗಿ ಖಂಡಿಸಿದೆ.
ಬೆಳಗಾವಿಯ ಸುವರ್ಣ ಸೌಧದ ಮುಂದೆ ಪ್ರತಿಭಟನೆಯಲ್ಲಿ ನಿರತರಾಗಿದ್ದ ರೈತ ಮಹಿಳೆಯ ವಿರುದ್ಧ ಮುಖ್ಯಮಂತ್ರಿಗಳು ನೀಡಿರುವ "ನಾಲ್ಕು ವರ್ಷಗಳಿಂದ ಎಲ್ಲಿ ಮಲಗಿದ್ದೆ" ಎಂಬ ಹೇಳಿಕೆಯು ಇಡೀ ರೈತ ಕುಲಕ್ಕೆ ಹಾಗೂ ಮಹಿಳೆಯರಿಗೆ ಮಾಡಿರುವ ಘೋರ ಅಪಮಾನ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಹಲವಾರು ವರ್ಷಗಳಿಂದ ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಗಾರರ ಸಮಸ್ಯೆಗಳು ನಿರಂತರವಾಗಿ ಉಲ್ಬಣಿಸುತ್ತಿದೆ.
ಸಕ್ಕರೆ ಕಾರ್ಖಾನೆಯ ಮಾಲೀಕರು ರೈತರಿಗೆ ಸಲ್ಲಿಸ ಬೇಕಾಗಿರುವ ನ್ಯಾಯೋಚಿತ ಬೆಲೆಯನ್ನೂ ನೀಡದೆ, ಕೊಡಬೇಕಾಗಿರುವ ಮೊತ್ತದಲ್ಲಿ ಸಾವಿರಾರು ಕೋಟಿ ರೂಗಳನ್ನು ಉಳಿಸಿಕೊಳ್ಳುತ್ತಿದ್ದಾರೆ.
ಕರ್ನಾಟಕದ ರಾಜಕೀಯದಲ್ಲಿ ಹಲವಾರು ವರ್ಷಗಳಿಂದ ಸಕ್ರಿಯರಾಗಿರುವ ಕುಮಾರಸ್ವಾಮಿ ಅವರು, ವಿರೋಧ ಪಕ್ಷದ ನಾಯಕನಾಗಿ, ಮುಖ್ಯಮಂತ್ರಿಯಾಗಿ ಚಟುವಟಿಕೆಗಳಲ್ಲಿ ತೊಡಿಸಿಕೊಂಡಿದ್ದು, ಅವರಿಗೆ ಅದು ತಿಳಿಯದ ವಿಷಯವೇನಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಪ್ರತಿ ವರ್ಷವೂ ಕಬ್ಬು ಬೆಳೆಗಾರರು ಈ ರೀತಿಯ ಉಗ್ರ ಪ್ರತಿಭಟನೆಗಳ ಮೂಲಕ ಸರ್ಕಾರ ಹಾಗೂ ಸಕ್ಕರೆ ಕಾರ್ಖಾನೆಗಳ ವಿರುದ್ಧ ಹೋರಾಡಿ ತಮ್ಮ ಬೆಳೆಗೆ ನ್ಯಾಯೋಚಿತವಾದ ಬೆಲೆಯನ್ನು ದೊರಕಿಸಿಕೊಳ್ಳುವಲ್ಲಿ ಭಾಗಶಃ ಯಶಸ್ವಿ ಆಗುತ್ತಿರುವುದು ಕೂಡ ಕುಮಾರಸ್ವಾಮಿಯವರಿಗೆ ತಿಳಿದಿದೆ.

ಕ್ಷಮೆ ಯಾಚಿಸಲಿ
ರೈತರ ಪ್ರತಿಭಟನೆಗಳು, ಅವರ ಸಮಸ್ಯೆಗಳ ಬಗ್ಗೆ ಅರಿವಿದ್ದೂ, ಪ್ರತಿಭಟನಾ ನಿರತ ರೈತ ಮಹಿಳೆಯ ವಿರುದ್ಧ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಈ ರೀತಿಯ ಹೇಳಿಕೆಗಳನ್ನು ನೀಡುವುದು ತೀರ ಅಕ್ಷಮ್ಯ.
ಈ ಕೂಡಲೇ ಕುಮಾರಸ್ವಾಮಿ ತಮ್ಮ ಈ ಹೇಳಿಕೆಯನ್ನು ವಾಪಸ್ ಪಡೆದು ಕ್ಷಮೆ ಯಾಚಿಸಬೇಕೆಂದು ಆಮ್ ಆದ್ಮಿ ಪಕ್ಷ ಆಗ್ರಹಿಸಿದೆ.

ಬಾಕಿ ಮೊತ್ತ ವಸೂಲಿ ಮಾಡಿ
ರೈತ ಪರವಾದ ಸರ್ಕಾರವೆಂದು ಬೀಗುವ ಜೆಡಿಎಸ್ ಹಾಗೂ ಕಾಂಗ್ರೆಸ್ ಮೈತ್ರಿ ಪಕ್ಷದ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಎಚ್ಚೆತ್ತುಕೊಂಡು ಸಕ್ಕರೆ ಕಾರ್ಖಾನೆ ಮಾಲೀಕರಿಂದ ಬಾಕಿ ಬರಬೇಕಿರುವ ಮೊತ್ತವನ್ನು ವಸೂಲಿ ಮಾಡಿ ರೈತರಿಗೆ ನ್ಯಾಯವಾದ ಬೆಲೆ ನೀಡಬೇಕೆಂದು ಹಾಗೂ ಈ ಬಗೆಗಿನ ಚರ್ಚೆಗಳು ಎಲ್ಲವನ್ನೂ ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಸಿ ರೈತರುಗಳ ಅಹವಾಲುಗಳನ್ನು ಸ್ವೀಕರಿಸಬೇಕೆಂದು ಒತ್ತಾಯಿಸಿದೆ.

ಖರೀದಿ ಕೇಂದ್ರ ಸ್ಥಾಪಿಸಿ
ಈಗಾಗಲೇ ಬೆಂಬಲ ಬೆಲೆ ನಿಗದಿಯಾಗಿದ್ದರೂ ಕರ್ನಾಟಕದ ಯಾವ ಮೂಲೆಯಲ್ಲಿಯೂ ಖರೀದಿ ಕೇಂದ್ರಗಳನ್ನು ಸ್ಥಾಪಿಸದೆ ಇರುವುದು ಅತ್ಯಂತ ದುರದೃಷ್ಟಕರ. ಈ ಕೂಡಲೇ ಎಲ್ಲ ಕಡೆ ಖರೀದಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ವಕ್ತಾರ ಜಗದೀಶ್ ವಿ ಸದಂ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕುಮಾರಸ್ವಾಮಿ ವಿಷಾದ
ಮುಖ್ಯಮಂತ್ರಿ ಕುಮಾರಸ್ವಾಮಿ 26 ಅಂಶಗಳುಳ್ಳ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, ರೈತ ಮಹಿಳೆಯ ಕುರಿತು ನೀಡಿರುವ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದಾರೆ. ಮಹಿಳೆಯರಿಗೆ ನಾನು ಗೌರವ ನೀಡುತ್ತೇನೆ. ನನ್ನ ಹೇಳಿಕೆಯಲ್ಲಿ ಯಾವ ದುರುದ್ದೇಶವೂ ಇರಲಿಲ್ಲ. ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.











Click it and Unblock the Notifications