ಮೈಸೂರು: ನೇಣುಬಿಗಿದುಕೊಂಡು ರೈತ ಆತ್ಮಹತ್ಯೆ
ಮೈಸೂರು, ಅಕ್ಟೋಬರ್, 25: ಮೈಸೂರು ಜಿಲ್ಲೆಯಲ್ಲಿ ವಾರಕ್ಕೊಬ್ಬರಂತೆ ಅದರಲ್ಲೂ ಕೆ.ಆರ್.ನಗರ ತಾಲ್ಲೂಕಿನಲ್ಲಿ ಮೇಲಿನಿಂದ ಮೇಲೆ ಸಾಲಬಾಧೆಗೆ ಸಿಲುಕಿ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.
ಇದೀಗ ಮತ್ತೊಬ್ಬ ರೈತ ತಂಬಾಕು ಬ್ಯಾರಲ್ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಈ ಘಟನೆ ಸಾಲಿಗ್ರಾಮ ಹೋಬಳಿಯ ಲಕ್ಕಿಕುಪ್ಪೆ ಗ್ರಾಮದಲ್ಲಿ ನಡೆದಿದೆ. ಅಲ್ಲಿನ ಗ್ರಾಮದ ನಿವಾಸಿ ರೈತ ಸ್ವಾಮಿಗೌಡ (50) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.

ಇವರು ತಮಗಿದ್ದ ಒಂದು ಎಕರೆ ಜಮೀನಿನಲ್ಲಿ ತಂಬಾಕು ಬೆಳೆ ಬೆಳೆದು ಒಂದಷ್ಟು ಆದಾಯ ಪಡೆಯುವ ನಿರೀಕ್ಷೆಯಲ್ಲಿದ್ದರು. ಅಲ್ಲದೆ ತಂಬಾಕು ಬೆಳೆಯಲೆಂದು ಸಾಲ ಕೂಡ ಮಾಡಿದ್ದರು.
ಕಾವೇರಿ ಗ್ರಾಮೀಣ ಬ್ಯಾಂಕ್ನಲ್ಲಿ ತಂಬಾಕು ಬೆಳೆ ಸಾಲ ಮತ್ತು ತಂಬಾಕು ಪರವಾನಿಗೆ ಸಾಲ ಸೇರಿದಂತೆ ಒಟ್ಟು 2.80 ಲಕ್ಷ ರೂ. ಸಾಲ ಮಾಡಿದ್ದಲ್ಲದೆ, 2 ಲಕ್ಷದಷ್ಟು ಕೈ ಸಾಲ ಮಾಡಿಕೊಂಡಿದ್ದರು. ಆದರೆ ಬೆಳೆದ ತಂಬಾಕು ನಿರೀಕ್ಷೆಯಷ್ಟು ಇಳುವರಿ ನೀಡಲಿಲ್ಲ.
ಜತೆಗೆ ತಂಬಾಕು ಬೆಲೆ ಕುಸಿತವಾಗಿದ್ದರಿಂದ ಮಾಡಿದ ಸಾಲವನ್ನು ತೀರಿಸುವುದು ಹೇಗೆ ಎಂಬ ಚಿಂತೆ ಕಾಡಿತ್ತು. ಸಾಲಕೊಟ್ಟವರು ಕೇಳ ತೊಡಗಿದ್ದರು.
ಇದರಿಂದ ಬೇಸತ್ತ ಸ್ವಾಮಿಗೌಡ ಬೆಳೆ ಸಾಲವನ್ನು ತೀರಿಸುವ ಹಾದಿ ಕಾಣದಾಗಿದ್ದು, ಅದೇ ಚಿಂತೆಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಂದರ್ಭ ನೋಡಿ ಮನೆಯ ಹಿಂಭಾಗದಲ್ಲಿರುವ ತಂಬಾಕು ಹದ ಮಾಡುವ ಬ್ಯಾರಲ್ ಮನೆಯಲ್ಲೇ ನೇಣು ಬಿಗಿದು ಕೊಂಡು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಮೃತ ರೈತ ಸ್ವಾಮಿಗೌಡ ಅವರಿಗೆ ಮೂವರು ಪುತ್ರಿಯರು, ಓರ್ವ ಪುತ್ರನಿದ್ದಾನೆ.
ಈ ಸಂಬಂಧ ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತಹಸೀಲ್ದಾರ್ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವ್ವಾನ ಹೇಳಿದ್ದಾರೆ. ನಂತರ ಶವ ಪರೀಕ್ಷೆ ಮಾಡಿ ವಾರಸುದಾರರಿಗೆ ಒಪ್ಪಿಸಲಾಗಿದೆ.












Click it and Unblock the Notifications