ಪಂಜಾಬ್ನಲ್ಲಿ ಎಎಪಿ ಗೆಲುವಿಗೆ ವರ್ಷಕ್ಕೆ 12,000 ಕೋಟಿ ರೂ. ಖರ್ಚು!, ಕಾರಣವೇನು?
ಚಂಡೀಗಢ, ನವೆಂಬರ್ 24: ಮುಂದಿನ ವರ್ಷದಲ್ಲಿ ಉತ್ತರ ಪ್ರದೇಶ, ಗೋವಾ, ಪಂಜಾಬ್ ಸೇರಿ ಪಂಚ ರಾಜ್ಯಗಳ ಚುನಾವಣೆಯು ನಡೆಯಲಿದೆ. ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಪಂಜಾಬ್ ಮಾತ್ರ ಬಿಜೆಪಿಯೇತರ ಆಡಳಿತವಿರುವ ರಾಜ್ಯವಾಗಿದೆ. ಪಂಜಾಬ್ನಲ್ಲಿ ಕಾಂಗ್ರೆಸ್ ತನ್ನ ಆಡಳಿತವನ್ನು ಉಳಿಸಿಕೊಳ್ಳುವ ಯತ್ನ ಮಾಡುತ್ತಿರುವಾಗ, ಬಿಜೆಪಿ, ಎಎಪಿ ಸೇರಿ ಹಲವಾರು ಪಕ್ಷಗಳು ಪಂಜಾಬ್ನ ಆಡಳಿತವನ್ನು ಪಡೆಯುವ ನಿಟ್ಟಿನಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದೆ.
ದೆಹಲಿ ಮುಖ್ಯಮಂತ್ರಿ, ಎಎಪಿ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್, ಪಂಜಾಬ್ನಲ್ಲಿ ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಈಗಾಗಲೇ ತನ್ನ ಪಕ್ಷದ ಪ್ರಚಾರ ಕಾರ್ಯವನ್ನು ಆರಂಭ ಮಾಡಿದ್ದಾರೆ. ಪಂಜಾಬ್ನಲ್ಲಿ ಎಎಪಿ ಪ್ರಚಾರ ಕಾರ್ಯವನ್ನು ಆರಂಭ ಮಾಡಿ ಮಾತನಾಡಿದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭರವಸೆಗಳ ಮಹಾಪೂರವನ್ನು ಮುಂದುವರಿಸಿದ್ದಾರೆ.
"ರಾಜ್ಯದಲ್ಲಿ ನಾವು ಅಧಿಕಾರಕ್ಕೆ ಬರಲು ಸಾಧ್ಯವಾಗುವಂತೆ ಜನರು ಮತವನ್ನು ಹಾಕಿದರೆ, 18 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ನಾವು ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಜಮೆ ಮಾಡುತ್ತೇವೆ," ಎಂದು ಎಎಪಿ ಆಶ್ವಾಸನೆ ನೀಡಿದೆ. ಪಂಜಾಬ್ನ ಮೊಗಾದಲ್ಲಿ ಅರವಿಂದ್ ಕೇಜ್ರಿವಾಲ್ ಈ ಘೋಷಣೆಯನ್ನು ಮಾಡಿದ್ದಾರೆ. ಜನತೆಯು ಎಎಪಿಗೆ ಮತ ಹಾಕಿದರೆ ಪ್ರತಿ ತಿಂಗಳು 18 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ," ಎಂದು ಹೇಳಿದ್ದಾರೆ. ಹಾಗಾದರೆ ನಾವೀಗ ಪಂಜಾಬ್ನಲ್ಲಿ ಅರವಿಂದ್ ಕೇಜ್ರಿವಾಲ್ ಮಾಡಿ ಘೋಷಣೆಯಿಂದಾಗಿ ಎಷ್ಟು ಖರ್ಚು ಆಗಲಿದೆ ಎಂಬುವುದನ್ನು ತಿಳಿಯೋಣ ಬನ್ನಿ...

ಪಂಜಾಬ್ನಲ್ಲಿ ಎಎಪಿಗೆ ಎಷ್ಟು ಖರ್ಚು ಆಗಲಿದೆ?
2019 ರ ಲೋಕ ಸಭೆ ಚುನಾವಣೆಯ ಡೇಟಾ ಪ್ರಕಾರ ಪಂಜಾಬ್ ರಾಜ್ಯದಲ್ಲಿ 96.19 ಲಕ್ಷ ಮಂದಿ ಮಹಿಳೆಯರು ಇದ್ದಾರೆ ಎಂದು ಭಾರತೀಯ ಚುನಾವಣಾ ಆಯೋಗ ಉಲ್ಲೇಖ ಮಾಡಿದೆ. 2022 ರಲ್ಲಿ ಚುನಾವಣೆ ಮಾಡಲು ಹಕ್ಕು ಪಡೆದಿರುವವರ ಪಟ್ಟಿಯನ್ನು ಇನ್ನಷ್ಟೇ ಬಿಡುಗಡೆ ಮಾಡಬೇಕಾಗಿದೆ. ಇನ್ನು ಎಎಪಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, "ಈ ಯೋಜನೆಯು ರಾಜ್ಯದ ಒಂದು ಕೋಟಿ ಮಹಿಳೆಯರಿಗೆ ಸಹಾಯ ಮಾಡಲಿದೆ," ಎಂದು ಹೇಳಿಕೊಂಡಿದೆ. ಅಂದರೆ ಈ ಯೋಜನೆಯಲ್ಲಿ ಪ್ರತಿ ಪಂಜಾಬ್ನ ಮಹಿಳೆಗೆ ತಿಂಗಳಿಗೆ ಒಂದು ಸಾವಿರ ಎಂದಾದರೆ ವರ್ಷಕ್ಕೆ 12,000 ರೂಪಾಯಿ ಆಗುತ್ತದೆ. ಎಲ್ಲಾ ಮಹಿಳೆಯರಿಗೆ ನೀಡುವ ವೆಚ್ಚ ಸೇರಿದಾಗ ವರ್ಷಕ್ಕೆ 12,000 ಕೋಟಿ ರೂಪಾಯಿ ಆಗಲಿದೆ.

ಹಣ ಎಲ್ಲಿಂದ ಬರುತ್ತದೆ?
ಇನ್ನು 18 ವರ್ಷ ಹಾಗೂ ಅದಕ್ಕಿಂತ ಹೆಚ್ಚು ವಯಸ್ಸಿನ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ ಎಂದು ಭರವಸೆಯನ್ನು ನೀಡಿರುವ ಅರವಿಂದ್ ಕೇಜ್ರಿವಾಲ್, ಇದೇ ಸಂದರ್ಭದಲ್ಲಿ ಈ ಬಾರಿ ಮೊತ್ತ ಬರುವುದು ಎಲ್ಲಿಂದ ಎಂದು ತಿಳಿಸಿದ್ದಾರೆ. "ಸರ್ಕಾರದಲ್ಲಿ ಯಾವುದೇ ಹಣದ ಕೊರತೆ ಇಲ್ಲ," ಎಂದು ತಿಳಿಸಿದ್ದಾರೆ. "ಜನರಿಗಾಗಿ ಕೆಲಸ ಮಾಡುವ ಉದ್ದೇಶವೇ ನಮಗೆ ಹೆಚ್ಚು ಮುಖ್ಯವಾದ ವಿಷಯ," ಎಂದು ಕೂಡಾ ಉಲ್ಲೇಖ ಮಾಡಿದ್ದಾರೆ.

ಪಂಜಾಬ್ನ ಸಾಲದ ಪರಿಸ್ಥಿತಿ ಹೇಗಿದೆ ನೋಡಿ..
2017 ರ ಮಾರ್ಚ್ನಲ್ಲಿ ಪಂಜಾಬ್ನಲ್ಲಿ ಕಾಂಗ್ರೆಸ್ ತನ್ನ ಆಡಳಿತವನ್ನು ಆರಂಭ ಮಾಡಿದ ಸಂದರ್ಭದಲ್ಲಿ ರಾಜ್ಯದಲ್ಲಿ 1.82 ಲಕ್ಷ ಕೋಟಿ ರೂಪಾಯಿ ಸಾಲವು ಅನುವಂಶಿಕವಾಗಿ ಬಂದಿದೆ. ಅಂದರೆ ಬಿಜೆಪಿ-ಎಸ್ಎಡಿಯ ಹತ್ತು ವರ್ಷದ ಆಡಳಿತದಲ್ಲಿ 1.82 ಲಕ್ಷ ಕೋಟಿ ರೂಪಾಯಿ ಸಾಲವು ಆಗಿದೆ. ಇನ್ನು ಈ ನಡುವೆ ಈಗಿನ ಸರ್ಕಾರ 2021-22 ರ ಬಜೆಟ್ ಅನ್ನು ಮಾಡಿದ ಬಳಿಕ ಈ ಸಾಲವು 2.82 ಲಕ್ಷ ಕೋಟಿಗೆ ಏರಿಕೆ ಆಗುವ ಅಂದಾಜು ಮಾಡಲಾಗಿದೆ. 2020-21 ರ ಅವಧಿಯಲ್ಲಿ ಜಿಎಸ್ಟಿ ಪರಿಹಾರದ ಬದಲಾಗಿ 8,359 ಕೋಟಿ ರೂ. ಸಾಲವನ್ನು ಪಡೆದ ಬಳಿಕ ರಾಜ್ಯದಲ್ಲಿ ಸಾಲವು 2.73 ಲಕ್ಷ ಕೋಟಿ ಆಗಿದೆ.

ಪಂಜಾಬ್ನ ಎಎಪಿ ಗೆದ್ದರೆ ಯಾರು ಸಿಎಂ?
ಇನ್ನು ಈ ನಡುವೆ ಪಂಜಾಬ್ನಲ್ಲಿ ಎಎಪಿ ಗೆಲುವು ಸಾಧಿಸಿದರೆ ಯಾರು ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ ಎಂಬ ಬಗ್ಗೆ ಚರ್ಚೆಯು ನಡೆಯುತ್ತಿದೆ. ಆದರೆ ಎಎಪಿ ಮುಖ್ಯಸ್ಥ, ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮಾತ್ರ ಈ ಪ್ರಶ್ನೆಗೆ ಉತ್ತರವನ್ನು ಈವರೆಗೂ ನೀಡಿಲ್ಲ. ಪಂಜಾಬ್ನಲ್ಲಿ ಎಎಪಿ ಯ ಸಿಎಂ ಅಭ್ಯರ್ಥಿ ಯಾರು ಎಂದು ಶೀಘ್ರದಲ್ಲೇ ಘೋಷಣೆ ಮಾಡುತ್ತೇವೆ ಎಂದು ಎರಡು ತಿಂಗಳಿನಿಂದ ಕೇಜ್ರಿವಾಲ್ ಹೇಳುತ್ತಿದ್ದಾರೆ. ಆದರೆ ಈವರೆಗೂ ಯಾರು ಎಂಬ ಗುಟ್ಟನ್ನು ರಟ್ಟು ಮಾಡಿಲ್ಲ. ಈ ನಡುವೆ ಎಎಪಿ ಪಂಜಾಬ್ ರಾಜ್ಯಾಧ್ಯಕ್ಷ ಭಾಗ್ವಂತ್ ಮಣ್ ಸಿಎಂ ಅಭ್ಯರ್ಥಿ ಆಗುವ ಸಾಧ್ಯತೆ ಇದೆ.












Click it and Unblock the Notifications