ಬೆತ್ತಲೆಯಾಗಿ ಪ್ರತಿಭಟಿಸಿ ತಮಿಳುನಾಡು ರೈತರ ಆಕ್ರೋಶ
ತಮಿಳುನಾಡು ರೈತರ ಬೇಡಿಕೆಗಳಿಗೆ ಕೇಂದ್ರ ಸರಕಾರ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶಗೊಂಡ ರೈತರು ಸೋಮವಾರ ನವದೆಹಲಿ ಪ್ರಧಾನಿ ಕಚೇರಿ ಎದುರು ಬೆತ್ತಲೆ ಪ್ರತಿಭಟನೆ ನಡೆಸಿದ್ದಾರೆ.
ನವದೆಹಲಿ, ಏಪ್ರಿಲ್ 10: ಪ್ರಧಾನಿ ಕಚೇರಿಯ ಎದುರು ಸೋಮವಾರ ಬೆಳಗ್ಗೆ ನಡೆದ ಪ್ರತಿಭಟನೆಯ ರೀತಿ ತೀರಾ ಅನಿರೀಕ್ಷಿತವಾಗಿತ್ತು. ಅಷ್ಟೇ ವಿಚಿತ್ರವಾಗಿತ್ತು. ತಮಿಳುನಾಡಿನ ರೈತರ ಗುಂಪೊಂದು ತಾವು ತೊಟ್ಟಿದ್ದ ಬಟ್ಟೆ ಕಳಚಿ, ಬೆತ್ತಲೆಯಾಗಿ ಪ್ರತಿಭಟಿಸಿದರು. ಸಂಪೂರ್ಣ ಸಾಲ ಮನ್ನಾ ಮಾಡಬೇಕು ಎಂಬುದು ಅವರ ಬೇಡಿಕೆಯಾಗಿತ್ತು.
ಮೂರು ವಾರಗಳಿಂದ ತಮಿಳುನಾಡು ರೈತರು ನವದೆಹಲಿಯ ಜಂತರ್ ಮಂತರ್ ನಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ತಮ್ಮ ಬೇಡಿಕೆ ಈಡೇರಿಸುವ ವಿಚಾರವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಲಿಲ್ಲ ಅಂದರೆ ಪ್ರತಿಭಟನೆ ಕಾವು ಮತ್ತಷ್ಟು ಏರುತ್ತದೆ ಎಂದು ಕೂಡ ಅವರು ಎಚ್ಚರಿಸಿದ್ದರು. ಕಳೆದ ಶುಕ್ರವಾರ ಪ್ರತಿಭಟನಾ ಸ್ಥಳದಲ್ಲಿ ಕೆಲವು ಮಹಿಳೆಯರು ಸೇರಿದಂತೆ ಐವರು ರೈತರು ಕೈ ಕುಯ್ದುಕೊಂಡಿದ್ದರು.[ಪ್ರಧಾನಿ ಮೋದಿಯಿಂದ ರೈತರಿಗೆ ಅಗೌರವ: ರಾಹುಲ್ ಗಾಂಧಿ]
ಈಗಲಾದರೂ ಕೇಂದ್ರ ಸರಕಾರ ಎಚ್ಚೆತ್ತುಕೊಳ್ಳಲಿ ಎಂದಿದ್ದರು. "ಕಳೆದ ಎರಡು ವಾರದಿಂದ ಇಲ್ಲಿದ್ದೇವೆ. ಯಾರಾದರೂ ನಮ್ಮ ಬಗ್ಗೆ ನಿಜವಾಗಲೂ ಕಾಳಜಿ ಇದೆಯಾ? ಇಲ್ಲಿಗೆ ಬಂದು ಹಲವು ರಾಜಕೀಯ ನಾಯಕರು ಬೆಂಬಲ ವ್ಯಕ್ತಪಡಿಸಿದ್ದಾರೆ ನಮಗೆ. ಆದರೆ ಫಲಿತಾಂಶ ಏನು? ನಾವು ಈ ದೇಶ ಕೊಟ್ಟಿದ್ದೇವೆ. ನಮ್ಮ ರಕ್ತ ಕೊಟ್ಟಾಯಿತು. ಇನ್ನು ನಮ್ಮ ಬಳಿ ಏನೂ ಇಲ್ಲ" ಎಂದು ರೈತರು ಹೇಳಿದ್ದರು.