ಉಗ್ರ ಹಫೀಜ್ ಸಯೀದ್ ನ ಕತ್ತಿನ ಮೇಲೆ ಕಾಲಿಟ್ಟಿತೇ ಪಾಕಿಸ್ತಾನ?
ಉಗ್ರ ಹಫೀಜ್ ಸಯೀದ್ ಮತ್ತು ಇತರ ನಾಲ್ವರನ್ನು ಶನಿವಾರ ಭಯೋತ್ಪಾದನೆ ವಿರೋಧಿ ಕಾಯ್ದೆ ಅಡಿ ಪಟ್ಟಿಯಲ್ಲಿ ಸೇರಿಸಿದೆ ಪಾಕಿಸ್ತಾನ. ಸದ್ಯಕ್ಕೆ ಗೃಹಬಂಧನದಲ್ಲಿರುವ ಹಫೀಜ್ ಮೇಲೆ ಮತ್ತಷ್ಟು ನಿರ್ಬಂಧ ಹೇರಲಾಗಿದೆ. ಈ ಕ್ರಮವನ್ನು ಭಾರತ ಸ್ವಾಗತಿಸಿದೆ
ನವದೆಹಲಿ, ಫೆಬ್ರವರಿ 18: ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನ ಶನಿವಾರ ಲಷ್ಕರ್-ಇ-ತೈಬಾ ಉಗ್ರ ಸಂಘಟನೆ ಸ್ಥಾಪಕ ಹಫೀಜ್ ಸಯೀದ್ ಹಾಗೂ ಆತನ ನಾಲ್ವರು ಸಹಚರರನ್ನು ಭಯೋತ್ಪಾದನಾ ವಿರೋಧಿ ಕಾಯ್ದೆ ಅಡಿಯ ಪಟ್ಟಿಯಲ್ಲಿ ಸೇರಿಸಿದೆ. ಆ ಮೂಲಕ ಆತನ ಮೇಲೆ ಇನ್ನಷ್ಟು ನಿರ್ಬಂಧ ಹೇರಿದಂತಾಗಿದೆ. ಸಯೀದ್ ಸದ್ಯಕ್ಕೆ ಗೃಹಬಂಧನದಲ್ಲಿದ್ದಾನೆ.
ಆ ಕಾಯ್ದೆಯ ಸೆಕ್ಷನ್ 11EE ಪ್ರಕಾರ, ಭಯೋತ್ಪಾದನಾ ಕೃತ್ಯದಲ್ಲಿ ತೊಡಗಿರುವ ವ್ಯಕ್ತಿ, ಆಂತರಿಕ ಸಚಿವಾಲಯದಿಂದ ನಿಷೇಧಿತ ಪಟ್ಟಿಯಲ್ಲಿರುವ ಸಂಘಟನೆಗಳ ಸದಸ್ಯರು ಅಥವಾ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿರುವ ಶಂಕೆಯಿರುವ ಸಂಘಟನೆಯೊಂದಿಗೆ ನಂಟಿರುವವರನ್ನು ಈ ಕಾಯ್ದೆಯಡಿ ನಾಲ್ಕನೇ ಷೆಡ್ಯೂಲ್ ಗೆ ಸೇರಿಸಬಹುದು.[100ಕ್ಕೂ ಹೆಚ್ಚು ಉಗ್ರರನ್ನು ಹೊಡೆದುರುಳಿಸಿದ ಪಾಕ್]
ಲಷ್ಕರ್ ಇ ತೈಬಾದ ಮುಖ್ಯಸ್ಥ ಸಯೀದ್ ಮತ್ತು ಅದರ ಹಣಕಾಸು ನೆರವಿನ ವಿಭಾಗ ಜಮಾತ್ ಉದ್ ದವಾ. ಇದೀಗ ಜೆಯುಡಿ ಅಮೆರಿಕ ಹಾಗೂ ಪಾಕಿಸ್ತಾನದಿಂದ ನಿಷೇಧಿಸಲಾಗಿದೆ. ಆಂತರಿಕ ಸಚಿವಾಲಯದ ಆದೇಶದ ಪ್ರಕಾರ ನಾಲ್ವರ ಹೆಸರನ್ನು ನಾಲ್ಕನೇ ಷೆಡ್ಯೂಲ್ ಅಡಿ ಸೇರಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಪಾಕಿಸ್ತಾನದ ಪ್ರಮುಖ ದಿನಪತ್ರಿಕೆ 'ಡಾನ್'ಗೆ ತಿಳಿಸಿದ್ದಾರೆ.
ಆ ಮೂಲಕ ಸಯೀದ್ ಮತ್ತು ಇತರರು ಶಾಲೆ-ಕಾಲೇಜು, ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡುವಂತಿಲ್ಲ. ಅಷ್ಟೇ ಅಲ್ಲ, ಉದ್ಯಾನ, ಹೋಟೆಲ್, ಸಾರ್ವಜನಿಕ ಸ್ಥಳಗಳು, ಏರ್ ಪೋರ್ಟ್, ರೈಲು ನಿಲ್ದಾಣ, ಟಿವಿ-ರೇಡಿಯೋ ಸ್ಟೇಷನ್ ಗೆ ಭೇಟಿ ನೀಡುವಂತಿಲ್ಲ. ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಭಾಗವಹಿಸುವಂತಿಲ್ಲ.[ಪಾಕಿಸ್ತಾನದಲ್ಲಿ ಮತ್ತೆ ಬಾಂಬ್ ಸ್ಫೋಟ: 100ಕ್ಕೂ ಹೆಚ್ಚು ಸಾವು]
ಪಾಕಿಸ್ತಾನದ ಈ ನಿರ್ಧಾರವನ್ನು ಭಾರತದ ಅಧಿಕಾರಿಗಳು ಸ್ವಾಗತಿಸಿದ್ದಾರೆ. ಮುಂಬೈ ದಾಳಿ ಪ್ರಕರಣದಲ್ಲಿ ಸಯೀದ್ ನನ್ನು ಕಾನೂನು ವ್ಯಾಪ್ತಿಗೆ ತಂದರೆ ಈ ಕ್ರಮ ನಿಜವಾದದ್ದು ಅಂತ ಒಪ್ಪಬಹುದು ಎಂದು ಹೇಳಿದ್ದಾರೆ. ಕೆಲ ಅಧಿಕಾರಿಗಳ ಪ್ರಕಾರ, ಇದು ಕಣ್ನೊರೆಸುವ ಕ್ರಮ ಅಷ್ಟೆ. ಅಮೆರಿಕದ ಕಣ್ಣಿನಿಂದ ಆತನನ್ನು ತಪ್ಪಿಸಲು ಮಾಡಿರುವ ಯತ್ನ ಇದು ಎನ್ನುತ್ತಾರೆ.