ಯದುವಂಶದ ಸಂಪ್ರದಾಯದಲ್ಲಿ ಯದುವೀರ್ ವಿವಾಹ
ಮೈಸೂರು, ಜೂನ್ 19 : ಯುವರಾಜ ಯದುವೀರ್ ಮತ್ತು ತ್ರಿಷಿಕಾ ಕುಮಾರಿ ಸಿಂಗ್ ಅವರ ವಿವಾಹವು ಯದುವಂಶದ ಸಂಪ್ರದಾಯದಂತೆ ಜೂ.25ರಿಂದ 28ರವರೆಗೆ ಅದ್ಧೂರಿಯಾಗಿ ಮೈಸೂರಿನ ಅರಮನೆಯಲ್ಲಿ ನಡೆಯಲಿದೆ.
ವಿವಾಹದ ಕುರಿತು ಶನಿವಾರ ಮಾಧ್ಯಮದವರಿಗೆ ಮಾಹಿತಿ ನೀಡಿದ ರಾಜಮಾತೆ ರಾಜಮಾತೆ ಪ್ರಮೋದಾದೇವಿ ಒಡೆಯರ್ ಅವರು, ಮೈಸೂರಿನ ರಾಜ ಒಡೆಯರ ಬೆಟ್ಟದ ಕೋಟೆ ಮನೆತನದ ಶೈಲಿಯಲ್ಲೇ ಈ ಹಿಂದೆ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಹಾಗೂ ಚಾಮರಾಜ ಒಡೆಯರ್ ಮದುವೆ ನಡೆದಂತೆಯೇ ನಡೆಯಲಿದೆ. ಸಕಲ ಸಂಪ್ರದಾಯಗಳು ವಿವಾಹಕಾರ್ಯದಲ್ಲಿರುತ್ತದೆ ಎಂದು ಹೇಳಿದರು.[ಯದುವೀರ್ - ತ್ರಿಷಿಕಾ ಮದುವೆ ಚಿತ್ರಗಳು]
25ರಂದು ಬೆಳಗ್ಗೆ 4 ಗಂಟೆಯಿಂದ ಪೂಜಾ ಕೈಂಕರ್ಯಗಳು, ಎಣ್ಣೆ ಸ್ನಾನ, ಗುರುಪೂಜೆ, ಚಪ್ಪರ ಪೂಜೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ನಡೆಯಲಿವೆ. ಬೆಳಗ್ಗೆ 8 ಗಂಟೆಗೆ ಪರಕಾಲ ಮಠದ ಶ್ರೀ ಗಳು ಅರಮನೆಗೆ ಆಗಮಿಸುತ್ತಾರೆ. ಸಂಪ್ರದಾಯದಂತೆ ಪಾದಪೂಜೆ ನಡೆಯುತ್ತದೆ ಎಂದು ವಿವರಿಸಿದರು. [ಯದುವೀರ್-ತ್ರಿಷಿಕಾ ವಿವಾಹಕ್ಕೆ ಮೈಸೂರು ಅರಮನೆ ಸಿಂಗಾರ]
26ರಂದು ರಾಜಮನೆತನದ ಕುಟುಂಬದವರು ವಿಶೇಷ ಪೂಜಾ ಕೈಂಕರ್ಯಗಳಲ್ಲಿ ತೊಡಗಲಿದ್ದಾರೆ. 27ರಂದು ಬೆಳಗ್ಗೆ 9 ಗಂಟೆಯಿಂದ 9.35ರೊಳಗೆ ಸಲ್ಲುವ ಶುಭ ಲಗ್ನದಲ್ಲಿ ಕಲ್ಯಾಣ ಮಂಟಪದಲ್ಲಿ ಧಾರಾ ಮುಹೂರ್ತ ನಡೆಯಲಿದೆ. ನಂತರ ದರ್ಬಾರ್ ಹಾಲಿನಲ್ಲಿ ವಿಶೇಷ ಕಾರ್ಯಕ್ರಮಗಳಿದ್ದು, ಸಂಗೀತ ಕಾರ್ಯಕ್ರಮ ನಡೆಸಲಾಗುವುದು.
ಜೂ.28ರಂದು ದರ್ಬಾರ್ ಹಾಲ್ನಲ್ಲಿ ಆರತಕ್ಷತೆ ಕಾರ್ಯಕ್ರಮ ಜರುಗಲಿದ್ದು, ಅವತ್ತು ಕೂಡ ಮೈಸೂರು ಮಂಜುನಾಥ್ ತಂಡದಿಂದ ಸಂಗೀತ ಕಾರ್ಯಕ್ರಮವಿದೆ. 29ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಆರತಕ್ಷತೆ ಹಮ್ಮಿಕೊಳ್ಳಲಾಗಿದೆ. ವಿವಾಹದ ಕಾರ್ಯಕ್ರಮಗಳನ್ನು ಹೊರಗಡೆ ಪರದೆ ಮುಖಾಂತರ ವೀಕ್ಷಿಸಲು ಸಾರ್ವಜನಿಕರಿಗೆ ಅವಕಾಶ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದು ಅವಕಾಶ ನೀಡಿದರೆ ಆ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು. [ಯದುವೀರ ಒಡೆಯರ್ ಭಾವಿ ಪತ್ನಿ ರಾಜಸ್ಥಾನಿ ಕುವರಿ]
ಮುಖ್ಯಮಂತ್ರಿ ಸಿದ್ದರಾಮಯ್ಯರವರಿಂದ ಪ್ರಧಾನಿ ನರೇಂದ್ರ ಮೋದಿ ಅವರ ತನಕ ಸುಮಾರು 550 ಗಣ್ಯರಿಗೆ ವಿವಾಹ ಆಮಂತ್ರಣ ನೀಡಲಾಗಿದೆ. ಜತೆಗೆ ವಿದೇಶಿ ಗಣ್ಯರಿಗೂ ಆಹ್ವಾನ ನೀಡಲಾಗಿದ್ದು ಅವರು ಪಾಲ್ಗೊಳ್ಳುವ ವಿಶ್ವಾಸ ವ್ಯಕ್ತಪಡಿಸಿದರು.