ಯಾಂತ್ರಿಕ ಯುಗದಲ್ಲಿ ಕಮ್ಮಾರರ ಬದುಕು ಅತಂತ್ರ!
ಮೈಸೂರು, ಏಪ್ರಿಲ್ 13 : ಇದು ಯಾಂತ್ರಿಕ ಯುಗ.. ಹೀಗಾಗಿ ಜಗತ್ತಿನ ಬದಲಾವಣೆಗೆ ತಕ್ಕಂತೆ ನಾವು ಕೂಡ ಬದಲಾಗುವುದು ಅನಿವಾರ್ಯವಾಗಿದೆ.
ಇದು ಎಷ್ಟರ ಮಟ್ಟಿಗೆ ಹೊಡೆತ ನೀಡಿದೆ ಎಂಬುವುದು ಹಳ್ಳಿಗಳಲ್ಲಿ ಕುಲಕಸುಬು ಮಾಡಿ ಬದುಕುತ್ತಿರುವರನ್ನು ನೋಡಿದರೆ ಗೊತ್ತಾಗಿ ಬಿಡುತ್ತದೆ. ಬೆತ್ತ, ಬಿದಿರಿನಿಂದ ಬುಟ್ಟಿ, ಮೊರ ಹೀಗೆ ವಿವಿಧ ಬಳಕೆಯ ವಸ್ತುಗಳನ್ನು ತಯಾರು ಮಾಡುತ್ತಿದ್ದ ಮೇದಾರರಿಗೆ ಈಗ ಕೆಲಸವಿಲ್ಲದಂತಾಗಿದೆ. ಮಾರುಕಟ್ಟೆಗೆ ರಬ್ಬರ್, ಪ್ಲಾಸ್ಟಿಕ್, ಫೈಬರ್ನಿಂದ ತಯಾರಿಸಿದ ಬುಟ್ಟಿಗಳು ಬಂದಿರುವಾಗ ಬಿದಿರಿನ ಬುಟ್ಟಿ ಯಾರು ಕೊಳ್ತಾರೆ?
ಕಮ್ಮಾರರ ಸ್ಥಿತಿಯಂತೂ ಇನ್ನೂ ಅಯೋಮಯವಾಗಿದೆ. ರೈತರಿಗೆ ಕೃಷಿಗೆ ಬೇಕಾದ ಮತ್ತು ಮನೆ ಬಳಕೆಗೆ ಅನುಕೂಲವಾಗುವ ಮಚ್ಚು, ಗುದ್ದಲಿ, ಕೊಡಲಿ, ಹಾರೆ ಹೀಗೆ ಕಬ್ಬಿಣದ ಸಲಕರಣೆಗಳನ್ನು ಮಾಡುತ್ತಿದ್ದ ಕಮ್ಮಾರರ ಪರಿಸ್ಥಿತಿ ಈಗ ಶೋಚನೀಯವಾಗಿದೆ. ಇದಕ್ಕೆ ನಂಜನಗೂಡು ತಾಲೂಕಿನ ದೇಬೂರು ಗ್ರಾಮದ ಮುಖ್ಯ ರಸ್ತೆಯಲ್ಲಿ ಶೆಡ್ ನಿರ್ಮಿಸಿಕೊಂಡು ಕಾರ್ಯ ನಿರ್ವಹಿಸುತ್ತಿರುವ ದಂಪತಿ ಸಾಕ್ಷಿಯಾಗಿದ್ದಾರೆ. [ನಿಸರ್ಗ ಪ್ರೇಮಿಗಳ ಸ್ವರ್ಗ ಹಿಮವದ್ ಗೋಪಾಲಸ್ವಾಮಿ ಬೆಟ್ಟ]
ತಾತಮುತ್ತಾತಂದಿರು ಮಾಡುತ್ತಾ ಬಂದಿದ್ದ ಕೆಲಸವನ್ನು ಕೆಲವರು ಇವತ್ತಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಆದರೆ ಯಾಂತ್ರಿಕ ಯುಗದಲ್ಲಿ ಎಲ್ಲವನ್ನೂ ಮಷಿನ್ನಿಂದ ಕಾರ್ಖಾನೆಗಳಲ್ಲಿ ತಯಾರಿಸುತ್ತಿರುವುದರಿಂದ ಕಮ್ಮಾರಿಕೆ ಮಾಡಿಕೊಂಡು ಬರುತ್ತಿರುವ ಸ್ಥಿತಿ ಚಿಂತಾಜನಕವಾಗಿದೆ.
ಮೊದಲೆಲ್ಲ ರೈತರು ಕೃಷಿ ಕೆಲಸದಲ್ಲಿ ತೊಡಗಿಸಿಕೊಳ್ಳುವ ಮುನ್ನ ಕೃಷಿ ಕೆಲಸಕ್ಕೆ ಬೇಕಾದ ಕಬ್ಬಿಣದ ಹತ್ಯಾರುಗಳನ್ನು ಕಮ್ಮಾರರ ಬಳಿ ತೆರಳಿ ಮಾಡಿಸಿಕೊಂಡು ಬರುತ್ತಿದ್ದರು. ಹೀಗಾಗಿ ಕಮ್ಮಾರರಿಗೆ ಬಿಡುವಿಲ್ಲದ ಕೆಲಸವಿರುತ್ತಿತ್ತು. ಈಗ ಎಲ್ಲವೂ ಬದಲಾಗಿದೆ. ಎಲ್ಲ ರೀತಿಯ ಸಲಕರಣೆಗಳು ಮಾರುಕಟ್ಟೆಯಲ್ಲಿ ಸಿಗುತ್ತಿರುವುದರಿಂದ ಕಮ್ಮಾರರ ಬಳಿಗೆ ತೆರಳುವವರ ಸಂಖ್ಯೆ ಕಡಿಮೆಯಾಗಿದೆ. ಆದ್ದರಿಂದ ಈ ವೃತ್ತಿಯನ್ನು ನಂಬಿ ಬದುಕುವುದು ಕಮ್ಮಾರರಿಗೆ ಬದುಕೇ ಬೇಡವಾಗಿದೆ. [ಬರ್ರೀ ಲೇ ಇಲ್ಲೇ ನನ್ನ ಉಳ್ಳಾಗಡ್ಡಿ ರೊಕ್ಕ ಕೊಡಿಸ್ರೋ!]
ಕೆಲವರು ತಮ್ಮ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಯತ್ತ ತೆರಳಿದರೆ, ಮತ್ತೆ ಕೆಲವರು ಅನಿವಾರ್ಯವಾಗಿ ಅದನ್ನು ಮಾಡುತ್ತಿದ್ದಾರೆ. ಇವತ್ತು ನಂಜನಗೂಡು ದೇಬೂರಿನ ಹಂಡುವಿನಹಳ್ಳಿಯಲ್ಲಿ ಕಮ್ಮಾರಿಕೆ ಮಾಡುತ್ತಿರುವ ವೆಂಕಟಯ್ಯ ಮತ್ತು ನಾಗಮ್ಮ ದಂಪತಿಗಳು ಮೂಲತಃ ಕೆ.ಆರ್.ನಗರದ ಸಾಲಿಗ್ರಾಮದವರಾಗಿದ್ದು, ಕೆಲಸ ಹುಡುಕಿಕೊಂಡು ಬಂದು ಕಳೆದೊಂದು ದಶಕದಿಂದ ಇಲ್ಲಿಯೇ ನೆಲೆಯೂರಿದ್ದಾರೆ.
ರೈತರು ಹತ್ಯಾರುಗಳನ್ನು ಮಾರುಕಟ್ಟೆಯಿಂದಲೇ ಖರೀದಿಸುವುದರಿಂದ ಇವರಿಗೆ ಕೆಲಸವಿಲ್ಲದಂತಾಗಿದೆ. ಇದರಿಂದ ಈ ವೃತ್ತಿಯನ್ನು ನಂಬಿಕೊಂಡು ಬದುಕುವುದು ಕಷ್ಟವಾಗುತ್ತಿದೆ ಎಂಬುದು ಅವರ ಅಳಲು. ಈ ಅಳಲು ಕೇವಲ ವೆಂಕಟಯ್ಯ ನಾಗಮ್ಮ ದಂಪತಿಗಳೊಬ್ಬರದೇ ಅಲ್ಲ. ಎಲ್ಲರದೂ ಅದೇ ಪರಿಸ್ಥಿತಿಯಾಗಿದೆ. ಕುಲಕಸುಬು ಮಾಡುವ ಇಂತಹ ಕುಟುಂಬಗಳಿಗೆ ಉತ್ತೇಜನ ನೀಡದೆ ಹೋದರೆ ಮುಂದಿನ ದಿನಗಳಲ್ಲಿ ಇದನ್ನೇ ನಂಬಿ ಬದುಕುವ ಕುಟುಂಬಗಳು ಬೀದಿಗೆ ಬಿದ್ದರೂ ಅಚ್ಚರಿ ಪಡುವಂತಿಲ್ಲ.