ವಿಭಕ್ತ ಕುಟುಂಬಗಳಲ್ಲೇ ಕಳ್ಳತನ ಹೆಚ್ಚು: ಮೈಸೂರು ಪೊಲೀಸರ ಸಮೀಕ್ಷೆ
ಮೈಸೂರು, ಜುಲೈ 6 : ಸಾಂಸ್ಕೃತಿಕ ನಗರಿ ಮೈಸೂರಿನ ವಿವಿಧ ಬಡಾವಣೆಗಳಲ್ಲಿ ದಿನೇದಿನೇ ಮನೆಗಳ್ಳತನ ಪ್ರಕರಣಗಳು ಹೆಚ್ಚಾಗುತ್ತಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ. ಕಳೆದ ಜನವರಿ ತಿಂಗಳಿನಿಂದ ಇಲ್ಲಿಯವರೆಗೆ ಸುಮಾರು 82 ಮನೆಗಳವು ಪ್ರಕರಣ ಗಳು ದಾಖಲಾಗುವ ಮೂಲಕ ಪೊಲೀಸರ ನಿದ್ದೆ ಗೆಡಿಸಿವೆ.
ಪೊಲೀಸ್ ಇಲಾಖೆಯ ಅಂಕಿ ಅಂಶದ ಪ್ರಕಾರ 3 ವರ್ಷಗಳ ಅವಧಿಯಲ್ಲಿ 427 ಮನೆಗಳ್ಳತನ ಪ್ರಕರಣ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿವೆ. ಬೆಂಗಳೂರನ್ನು ಹೊರತುಪಡಿಸಿದರೆ ಮೈಸೂರು ಅತೀ ವೇಗವಾಗಿ ಬೆಳೆಯುತ್ತಿರುವ ಎರಡನೇ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಉದ್ಯೋಗ, ವ್ಯಾಪಾರ ಹಾಗೂ ವ್ಯಾಸಂಗದ ಉದ್ದೇಶಕ್ಕಾಗಿ ಮೈಸೂರಿಗೆ ವಲಸೆ ಬರುವವರ ಸಂಖ್ಯೆ ಕೂಡ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ನಗರ ವ್ಯಾಪ್ತಿಯಲ್ಲಿ ಅಪಾರ್ಟ್ ಮೆಂಟ್ ಸೇರಿದಂತೆ 2 ಲಕ್ಷಕ್ಕೂ ಹೆಚ್ಚಿನ ವಾಸದ ಮನೆಗಳಿವೆ. ಹೀಗಾಗಿ ಮನೆಗಳ್ಳರಿಗೆ ಮೈಸೂರು ನಗರ ಉತ್ತಮ ತಾಣ ಎಂಬಂತಾಗಿದೆ.
ಅವಿಭಕ್ತ ಕುಟುಂಬದ ಕಲ್ಪನೆ ಮಾಯವಾಗುತ್ತಿರುವ ಇಂದಿನ ದಿನಗಳಲ್ಲಿ ಪತಿ, ಪತ್ನಿ ಉದ್ಯೋಗಕ್ಕೆಂದು ಹಾಗೂ ಮಕ್ಕಳು ಶಾಲೆಗೆ ತೆರಳಿದಲ್ಲಿ ಸಂಜೆಯವರೆಗೂ ಮನೆಗೆ ಬೀಗ ಬಿದ್ದಿರುತ್ತದೆ. ಶ್ರೀಮಂತರೇ ಹೆಚ್ಚು ವಾಸಿಸುವ ಬಡಾವಣೆಯಲ್ಲಂತೂ ಅಕ್ಕಪಕ್ಕದ ಮನೆಗೆ ಯಾರೇ ಬಂದು ಹೋದರೂ ಅವರನ್ನು ಯಾರೂ ಪ್ರಶ್ನಿಸುವುದಿಲ್ಲ. ಇದರಿಂದ ಕೂಡ ಕಳ್ಳತನ ಸುಲಭ ಎಂಬಂತಾಗಿದೆ. ಇನ್ನು ವಿವಾಹ, ಪ್ರವಾಸ ಇನ್ನಿತರ ಕಾರ್ಯಕ್ರಮಗಳಿಗೆ ತೆರಳುವವರು ಯಾವುದೇ ಮುನ್ನೆಚ್ಚರಿಕೆ ಕ್ರಮವಹಿಸುವುದಿಲ್ಲ. ಮನೆಗೆ ಬೀಗ ಹಾಕಿ ಹೊರಡುವ ಅವರಿಗೆ ಮೂರು-ನಾಲ್ಕು ದಿನಗಳಾದರೂ ಮನೆಯ ಬಗ್ಗೆ ಯೋಚನೆಯೇ ಇರುವುದಿಲ್ಲ.
ಸಾರ್ವಜನಿಕರ ನಿರ್ಲಕ್ಷ್ಯ
ಕಳೆದ 3 ತಿಂಗಳ ಅವಧಿಯಲ್ಲಿ ನಡೆದಿರುವ ಬಹುತೇಕ ಕಳ್ಳತನ ಇಂತಹ ಮನೆಗಳಲ್ಲಿಯೇ ಎಂಬುದು ಗಮನಾರ್ಹ. ಮನೆಗೆ ಬೀಗ ಹಾಕಿ ದೂರದ ಊರುಗಳಿಗೆ ತೆರಳುವವರು ಮನೆಯ ಬಗ್ಗೆ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿ ಎಂದು ಪೊಲೀಸರು ಎಷ್ಟು ಹೇಳಿದರೂ ಸಾರ್ವಜನಿಕರು ಇದಕ್ಕೆ ಸ್ಪಂದಿಸುವ ಕೆಲಸ ಮಾಡುತ್ತಿಲ್ಲ.
ನಮ್ಮ ಮನೆಗೆ ಯಾರು ಬಂದಾರೂ ಎಂಬ ಉಡಾಫೆಯ ಕಾರಣದಿಂದ ಕಳ್ಳತನಗಳು ಹೆಚ್ಚುತ್ತಿವೆ. ಈಗಲೂ ಪೊಲೀಸರು ಕಳ್ಳತನ ತಡೆಗಟ್ಟುವ ಸಲುವಾಗಿ ಸಾರ್ವಜನಿಕರಿಗಾಗಿ ಕೆಲವೊಂದು ಸೂಚನೆಗಳನ್ನು ನೀಡಿದ್ದಾರೆ. ಅದರಲ್ಲಿ ಪ್ರಮುಖವಾದುದೆಂದರೆ, ಸಾರ್ವಜನಿಕರು 3 ಅಥವಾ ಅದಕ್ಕಿಂತ ಹೆಚ್ಚು ದಿನ ದೂರದ ಊರುಗಳಿಗೆ ಹೊರಟಲ್ಲಿ ನಿಮ್ಮ ಮನೆಯ ವಿಳಾಸವನ್ನು ಸ್ಥಳೀಯ ಪೊಲೀಸ್ ಠಾಣೆಗೆ ನೀಡಿದಲ್ಲಿ ಪ್ರತೀ ದಿನ ಅಲ್ಲಿ ಪೊಲೀಸ್ ಬೀಟ್ ಆಗುವಂತೆ ನೋಡಿಕೊಳ್ಳುತ್ತಾರೆ.
ಸ್ನೇಹಿತರಿಗೆ ಮಾಹಿತಿ ನೀಡಿ
ಮನೆಯಿಂದ ಹೊರಡುವ ಮುನ್ನ ಹಾಲು ಹಾಕುವವರು, ಪತ್ರಿಕೆಗಳನ್ನು ವಿತರಿಸುವವರಿಗೆ ನೀವು ಬರುವವರೆಗೂ ಹಾಲು, ಪತ್ರಿಕೆಗಳನ್ನು ಮನೆಯ ಮುಂದೆ ಎಸೆದು ಹೋಗದಂತೆ ಸೂಚನೆ ನೀಡಿ. ಸಾಧ್ಯವಾದಲ್ಲಿ ನಿಮ್ಮ ಬಂಧುಗಳು ಹಾಗೂ ಆತ್ಮೀಯ ಸ್ನೇಹಿತರನ್ನು ಪ್ರತಿ ದಿನ ಸಂಜೆ ಹಾಗೂ ಬೆಳಿಗ್ಗೆ ಮನೆಯ ಕಡೆ ಬಂದು ನೋಡಿಕೊಂಡು ಹೋಗುವಂತೆ ಕೇಳಿಕೊಳ್ಳಿ. ಪ್ರವಾಸ ಇನ್ನಿತರ ಕಾರ್ಯಕ್ರಮ ಮಗಳಿಗೆ ಹೊರಡುವ ಮುನ್ನ ನಿಮ್ಮ ಬಳಿ ಇರುವ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಡಿ. ಅಥವಾ ನಿಮಗೆ ನಂಬಿಕಸ್ಥರಾದವರ ಮನೆಯಲ್ಲಿ ಇಡುವುದು ಒಳಿತು. ಸಾಧ್ಯವಾದಲ್ಲಿ ಅಕ್ಕಪಕ್ಕದ ನಿವಾಸಿ ಗಳ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡು ದಿನಕ್ಕೊಮ್ಮೆ ಮನೆಯ ಬಗ್ಗೆ ವಿಚಾರಿಸಿ ಎಂಬ ಸಲಹೆಗಳನ್ನೂ ನೀಡಿದ್ದಾರೆ.
ಕಳ್ಳರ ಕಾರ್ಯಾಚರಣೆ ಹೇಗೆ?
ನಗರದಾದ್ಯಂತ ಕಳ್ಳರ ಹಲವು ತಂಡಗಳು ಕಾರ್ಯಾಚರಣೆ ನಡೆಸುತ್ತಿದೆ. ದ್ವಿಚಕ್ರ ವಾಹನದಲ್ಲಿ ಬೆಳಿಗ್ಗೆ ಹೊರಡುವ ಅವರು ಹೆಚ್ಚಿನ ಜನಸಂದಣಿ ಇರದ ಬಡಾವಣೆಗಳ ರಸ್ತೆಗಳು ಹಾಗೂ ವಿರಳವಾಗಿರುವ ಮನೆಗಳ ರಸ್ತೆಗಳಲ್ಲಿ ಸಂಚರಿಸುತ್ತಾರೆ. ಬೀಗ ಹಾಕಿರುವ ಮನೆಗಳನ್ನು ಗುರುತಿಸುವ ಅವರು ಮತ್ತೆ ಸಂಜೆ ಬಂದು ಮನೆಯಲ್ಲಿ ಯಾರೂ ಇದೆಲ್ಲವನ್ನು ಗಮನಿಸುತ್ತಾರೆ. ಇದಾದ ನಂತರವೇ ಅವರು ಕಳ್ಳತನದ ಕಾರ್ಯಾಚರಣೆಗೆ ಹೊಂಚುಹಾಕುವುದು. ಮಧ್ಯರಾತ್ರಿಯ ವೇಳೆಗೆ ತಂಡದೊಂದಿಗೆ ಆಗಮಿಸುವ ಅವರು ಹಲವಾರು ಸಾಧನಗಳನ್ನು ಬಳಸಿ ಸದ್ದಿಲ್ಲದೆಯೇ ತಮ್ಮ ಕೆಲಸವನ್ನು ಮುಗಿಸಿ ಪರಾರಿಯಾಗುತ್ತಾರೆ. ಕೆಲವೊಂದುಪ್ರಕರಣದಲ್ಲಿ ಉದ್ಯೋಗಿ ದಂಪತಿಗಳ ಮನೆಯನ್ನು ಗುರುತಿಸುವ ಕಳ್ಳರು ಹಗಲೇ ತಮ್ಮ ಚಾಣಾಕ್ಷತನದಿಂದ ಕಳ್ಳತನಕ್ಕೆ ಮುಂದಾಗುತ್ತಾರೆ.
ಪೊಲೀಸರಿಗೂ ತಲೆ ನೋವು
ನಗರದಾದ್ಯಂತ ನಡೆಯುತ್ತಿರುವ ಕಳ್ಳತನ ಪ್ರಕರಣಗಳಿಗೆ ಸಂಬಂಧಿಸಿದಂತೆ ಅಪರಾಧಿಗಳನ್ನು ಹತ್ತಿಕ್ಕಲು ಸಾಕಷ್ಟು ಕ್ರಮಗಳನ್ನು ಖಾಕಿ ಪಡೆ ಕೈಗೊಂಡಿದ್ದಾರೆ. ಪ್ರತೀ ಬಾರಿ ಕಳ್ಳತನವಾದಾಗಲೂ ತಂಡವನ್ನು ರಚಿಸುವ ಪೊಲೀಸ್ ಇಲಾಖೆ ಖದೀಮರ ಬಂಧನಕ್ಕೆ ಶ್ರಮಪಟ್ಟಿದೆ. ಹೀಗಾಗಿ ಕಳೆದ 3 ವರ್ಷಗಳಲ್ಲಿ ನಡೆದಿರುವ 426 ಕಳ್ಳತನ ಪ್ರಕರಣಗಳಲ್ಲಿ 255 ಪ್ರಕರಣಗಳನ್ನು ಭೇದಿಸಿ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಏನೇ ಆಗಲಿ ನಮ್ಮ ಅರಿವಿನಲ್ಲಿ ನಾವಿದ್ದರೆ ಒಳಿತು!