ಕರ್ನಾಟಕ ಪಿಯುಸಿ ಫಲಿತಾಂಶ: ಮೈಸೂರಿಗೆ ಸ್ವಲ್ಪ ಸಿಹಿ – ಸ್ವಲ್ಪ ಕಹಿ
ನಿನ್ನೆ ಹೊರಬಿದ್ದ ಕರ್ನಾಟಕ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದ ಮೈಸೂರಿನ ವಿದ್ಯಾರ್ಥಿಗಳು 'ಒನ್ ಇಂಡಿಯಾ'ದೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದು ಹೀಗೆ…
ಮೈಸೂರು , ಮೇ 12 : ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮಲ್ಲಿಗೆ ನಗರಿ ಮೈಸೂರು ಈ ಬಾರಿ 14ನೇ ಸ್ಥಾನಕ್ಕೆ ತೃಪ್ತಿಪಟ್ಟಿಕೊಂಡಿದೆ. ಕಳೆದ ಬಾರಿ 11 ನೇ ಸ್ಥಾನ ಪಡೆದಿದ್ದ ಜಿಲ್ಲೆ ಈ ಬಾರಿ ಮೂರು ಸ್ಥಾನ ಕುಸಿದಿದೆ. ಒಟ್ಟಾರೆ ಫಲಿತಾಂಶದಲ್ಲಿ ಮೈಸೂರು ಜಿಲ್ಲೆಯ ಕಳೆದ ಬಾರಿಗಿಂತ ಈ ಬಾರಿ ಹಿಂದೆ ಬಿದ್ದಿದೆ. ರ್ಯಾಂಕ್ ಪಡೆದ ಮಕ್ಕಳ ಮೊಗದಲ್ಲೂ ಸಂತಸ ಮನೆಮಾಡಿದೆ. ಇನ್ನು ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳು 'ಒನ್ ಇಂಡಿಯಾ'ದೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದು ಹೀಗೆ...[ಮೇ 12 ಮಧ್ಯಾಹ್ನ 3ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ]
ಕಷ್ಟಪಟ್ಟು ಓದಿದ್ದಕ್ಕೆ ತಕ್ಕ ಪ್ರತಿಫಲ :
ರಘು ಹಾಗೂ ಮಾಲಾ ದಂಪತಿ ಪುತ್ರ ಪ್ರಜ್ವಲ್ ವಿಜ್ಞಾನ ವಿಭಾಗದಲ್ಲಿ 593 ಅಂಕ ಪಡೆಯುವ ಮೂಲಕ ಈ ಬಾರಿ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾನೆ. 4 ವಿಭಾಗದಲ್ಲಿ 100ಕ್ಕೆ 100 ಅಂಕ ಪಡೆದಿದ್ದಾನೆ. 'ಪ್ರತಿದಿನ ಕಷ್ಟ ಪಟ್ಟು ಓದುತ್ತಿದ್ದೆ. ಇದಕ್ಕೆ ಫಲ ಸಿಕ್ಕಿದೆ. ತಂದೆ- ತಾಯಿ, ಶಿಕ್ಷಕರು ಸೇರಿದಂತೆ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ. ರ್ಯಾಂಕ್ ಬಂದೇ ಬರುತ್ತೇನೆ ಎಂಬ ವಿಶ್ವಾಸವಿತ್ತು. ನಮ್ಮ ತಾಯಿ ತುಂಬ ಕಷ್ಟಪಟ್ಟು ಓದುವಂತೆ ನನಗೆ ಸಲಹೆ ನೀಡುತ್ತಿದ್ದರು. ಇದರಿಂದ ಹೆಚ್ಚು ಅಂಕ ಪಡೆಯಲು ಸಾದ್ಯವಾಯಿತು' ಎಂದು ಒನ್ ಇಂಡಿಯಾ ಜೊತೆ ತಮ್ಮ್ ಸಂತಸ ಹಂಚಿಕೊಂಡಿದ್ದಾರೆ.[ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ: ಸೃಜನಾ, ರಾಧಿಕಾ, ಚೈತ್ರಾ ಟಾಪರ್ಸ್]
ಕಲಾವಿಭಾಗ ಅಂದರೆ ಅಸಡ್ಡೆಯಲ್ಲ :
ನಾನು ಕಲಾ ವಿಭಾಗ ತೆಗೆದುಕೊಂಡಾಗ ಎಲ್ಲರೂ ಹಂಗಿಸಿದರು ಜೊತೆಗೆ ವಿರೋಧಿಸಿದರು. ಅವರಿಗೆಲ್ಲ ತಕ್ಕ ಉತ್ತರ ನನ್ನೀ ಫಲಿತಾಂಶ. ನಾನಗೆ ಐಎಎಸ್ ಆಫೀಸರ್ ಆಗಬೇಕು ಎಂಬ ಹಂಬಲವಿದೆ. ಡಾಕ್ಟರ್, ಇಂಜಿನಿಯರ್ ಆಗೋದು ಕಾಮನ್. ಯಾರು ಕೂಡ ಕಲಾ ವಿಭಾಗವನ್ನು ಹಿಯಾಳಿಸುವುದು ಬೇಡ. ಹೀಗೆಂದು ಹೆಮ್ಮೆಯಿಂದ ಹೇಳಿದ್ದು ಮರಿಮಲ್ಲಪ್ಪ ಕಾಲೇಜಿನ ಕಲಾವಿಭಾಗದ ವಿದ್ಯಾರ್ಥಿ ಆಯಿಷಾ ಮಿರಿಯಮ್. ಇವರು ಮೈಸೂರಿನ ಝಹೀರ್ ಅಹ್ಮದ್ ಖಾನ್ ಹಾಗೂ ತಾಹಿರಾ ಬೇಗಂ ಪುತ್ರಿ.ಇವರು ಕಲಾ ವಿಭಾಗದಲ್ಲಿ 580 (600) ಅಂಕ ಗಳಿಸಿದ್ದಾರೆ.
ನನ್ನಂತಹವರನ್ನು ಓದು ಎಂದು ಹೇಳುವವರು ಕಡಿಮೆ. ಅದರಲ್ಲೂ ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳನ್ನು ಮನೆಯಲ್ಲೇ ಕುಳ್ಳಿರಿಸುತ್ತಾರೆ. ಅದು ತಪ್ಪು. ಹೆಣ್ಣು ಮಕ್ಕಳನ್ನು ಓದಲು ಬಿಡಿ. ಅವರನ್ನು ಸಾಧಕರನ್ನಾಗಿಸಿ. ನನ್ನ ಸಾಧನೆಗೆ ಬೆಂಬಲಿಸಿದ ನನ್ನ ಪೋಷಕರು ಹಾಗೂ ಕಾಲೇಜಿನ ಆಡಳಿತ ಮಂಡಳಿಗೆ ನಾನು ಕೃತಜ್ಞ.[ತಾಯಿಯೇ ನನಗೆ ಸ್ಫೂರ್ತಿ: ಪಿಯುಸಿ ಟಾಪರ್ ಸೃಜನಾ]
ವಾಣಿಜ್ಯ ವಿಭಾಗದಲ್ಲೂ ಎರಡನೇ ಸ್ಥಾನ...
ನನ್ನ ಓದಿಗೆ ತಂದೆ ಶಿವಲಿಂಗಪ್ಪ ಹಾಗೂ ತಾಯಿ ಅನುಪಮಾ ಮೂಲ ಕಾರಣಕರ್ತರು, ಆ ದಿನದ್ದನ್ನು ಅಂದೆಯೇ ಓದಿದರೆ ಗೆಲುವು ನಿಮ್ಮದಾಗುತ್ತದೆ ಎನ್ನುತ್ತಾಳೆ ವಾಣಿಜ್ಯ ವಿಭಾಗದಲ್ಲಿ 593 ಅಂಕ ಪಡೆದು ದ್ವೀತಿಯ ಸ್ಥಾನ ಪಡೆದ ಮೈಸೂರಿನ ಮರಿಮಲ್ಲಪ್ಪ ಕಾಲೇಜಿನ ಹಂಸಶ್ರೀ. ತಂದೆ- ತಾಯಿ, ಶಿಕ್ಷಕರು ಸೇರಿದಂತೆ ನನ್ನನ್ನು ಪ್ರೋತ್ಸಾಹಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂಬುದು ಆಕೆಯ ನುಡಿ.
ನಿರೀಕ್ಷಿತ ಫಲಿತಾಂಶವಲ್ಲ
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಶಿಕ್ಷಣ ಸಚಿವ ತನ್ವೀರ್ ಸೇಠ್ ತವರು ಜಿಲ್ಲೆಯಲ್ಲಿ ಫಲಿತಾಂಶ ಕುಸಿತ ಕಂಡಿದೆ. ಅನೇಕ ಯೋಜನೆಗಳ ಮೂಲಕ ವಿದ್ಯಾರ್ಥಿಗಳಿಗೆ ಗೈಡ್ ಮಾಡಿದರೂ ಫಲಿತಾಂಶ ನಿರೀಕ್ಷೆಯಷ್ಟು ಬಾರದಿರುವುದು ಶಿಕ್ಷಣ ಇಲಾಖೆಯಲ್ಲಿ ಬೇಸರ ಮೂಡಿಸಿದೆ.
ಒಟ್ಟು ವಿದ್ಯಾರ್ಥಿಗಳು
ಮೈಸೂರು ನಗರ ಮತ್ತು ಜಿಲ್ಲೆ ಸೇರಿದಂತೆ ಒಟ್ಟು 36,891 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು. ಅದರಲ್ಲಿ 1560 ಖಾಸಗಿ, 30115 ಫ್ರೆಷರ್ಸ್, 5516 ರಿಪಿಟರ್ಸ್ ಪರೀಕ್ಷೆ ತೆಗೆದುಕೊಂಡಿದ್ದರು. ವಿಜ್ಞಾನ ವಿಭಾಗದಲ್ಲಿ 11905, ಕಲಾವಿಭಾಗ ದಲ್ಲಿ 12833, ವಾಣಿಜ್ಯ ವಿಭಾಗ ದಲ್ಲಿ 12153 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.