ಪೇಜಾವರರೇ, ಮೊದಲು ಉಡುಪಿಯಲ್ಲಿ ಮಡೆ ಸ್ನಾನ, ಪಂಕ್ತಿಭೇದ ನಿಲ್ಲಿಸಿ
ಮಂಗಳೂರು, ಜನವರಿ,16: ಪೇಜಾವರ ಸ್ವಾಮೀಜಿ ಪರ್ಯಾಯ ಸಂದರ್ಭ ಉಡುಪಿಯಲ್ಲಿ ಪಂಕ್ತಿಭೇದ ಹಾಗೂ ಮಡೆಸ್ನಾನ ನಿಲ್ಲಿಸುತ್ತೇನೆ ಎಂದು ಘೋಷಿಸಲಿ. ಆಗ ಪೇಜಾವರ ಶ್ರೀಗಳಿಗೂ ಪರ್ಯಾಯ ಉತ್ಸವಕ್ಕೂ ಗೌರವ ಬರುತ್ತದೆ ಎಂದು ಮಾಜಿ ಶಾಸಕ, ಸಿಪಿಐಎಂ ಮುಖಂಡ ಶ್ರೀರಾಮ ರೆಡ್ಡಿ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಶ್ರೀರಾಮ ರೆಡ್ಡಿ ಅವರು, ಮಡೆಸ್ನಾನ ಹಾಗೂ ಪಂಕ್ತಿಬೇಧದ ವಿರುದ್ಧ ಸಿಪಿಐಎಂ ಪ್ರತಿಭಟನೆ ಮಾಡುತ್ತಲೇ ಬಂದಿದೆ. ಅನೇಕ ಮಂದಿಯ ಮೇಲೆ ಪ್ರಕರಣಗಳು ದಾಖಲಾಗಿವೆ. ಆದರೆ, ಉಡುಪಿಯಲ್ಲೇ ಪಂಕ್ತಿಬೇಧ ಹಾಗೂ ಮಡೆಸ್ನಾನ ನಡೆಯುತ್ತದೆ. ಇದನ್ನು ನಿಲ್ಲಿಸಲಾಗದ ಪೇಜಾವರ ಸ್ವಾಮೀಜಿ ಅಂದು ಪಂಕ್ತಿಬೇಧ ನಿಲ್ಲಿಸುತ್ತೇನೆ. ಮಡೆಸ್ನಾನ ನಿಲ್ಲಿಸುತ್ತೇನೆ ಎಂದು ಹೇಳುತ್ತಾರೆ ಎಂದು ಟೀಕಿಸಿದರು.[ಉಡುಪಿ ಪರ್ಯಾಯ ಇತಿಹಾಸದಲ್ಲಿ ಮೊದಲ ಬಾರಿಗೆ ಮಹತ್ವದ ಬದಲಾವಣೆ]
ಪೇಜಾವರ ಶ್ರೀಗಳು ಸುಬ್ರಹ್ಮಣ್ಯದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ಇರಲಿ ಎಂದು ಹೇಳಿದ್ದಾರೆ. ಆದರೆ ಮಡೆ ಸ್ನಾನಕ್ಕೂ ಎಡೆಸ್ನಾನಕ್ಕೂ ಯಾವುದೇ ವ್ಯತ್ಯಾಸವಿಲ್ಲ ಎಂದು ಪೇಜಾವರ ಸ್ವಾಮೀಜಿಯವರ ಮಾತಿಗೆ ವಿರೋಧ ವ್ಯಕ್ತಪಡಿಸಿದರು.[ಪರ್ಯಾಯ ಹಬ್ಬಕ್ಕೆ ಉಡುಪಿ ಸಜ್ಜು]
ಹಿಂದೆ ಬಾಬ್ರಿ ಮಸೀದಿ ಧ್ವಂಸವಾದಾಗ ತನಗೆ ರೋಮಾಂಚನವಾಯಿತು ಎಂದು ಹೇಳಿದ ಸ್ವಾಮೀಜಿ, ಈಗ ರಾಮಮಂದಿರ ನಿರ್ಮಾಣ ಮಾಡಲು ಮುಸ್ಲಿಂರ ಜೊತೆಗೆ ಸಂಧಾನ ಮಾಡಬೇಕೆನ್ನುವ ಇವರದ್ದು ದ್ವಂದ್ವ ನಿಲುವು ಎಂದು ಕಿಡಿಕಾರಿದರು.