ಮಂಗಳೂರು: ಅಶ್ರಫ್ ಕೊಲೆ ಪ್ರಕರಣದ ತನಿಖೆ ಚುರುಕು
ಮಂಗಳೂರು, ಜೂನ್ 22: ಅಶ್ರಫ್ ಕೊಲೆ ಪ್ರಕರಣದ ದುಷ್ಕರ್ಮಿಗಳ ಶೋಧಕ್ಕೆ 4 ತಂಡಗಳನ್ನು ರಚಿಸಲಾಗಿದೆ. ಕೊಲೆ ಕೃತ್ಯದಲ್ಲಿ ಭಾಗಿಯಾದವರನ್ನು ಪತ್ತೆ ಹಚ್ಚಿ ಶೀಘ್ರವಾಗಿ ಬಂಧಿಸಲಾಗುವುದು ಎಂದು ಎಡಿಜಿಪಿ ಅಲೋಕ್ ಮೋಹನ್ ತಿಳಿಸಿದ್ದಾರೆ. ಮುಹಮ್ಮದ್ ಅಶ್ರಫ್ ಕಲಾಯಿ ಅವರ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ ಎಂದರು .
ಬಂಟ್ವಾಳ ತಾಲೂಕಿನಲ್ಲಿ ನಿರಂತರವಾಗಿ ಅಹಿತಕರ ಘಟನೆಗಳು ನಡೆಯುತ್ತಿದ್ದು, ಇದರ ಬಗ್ಗೆ ನಿಗಾ ವಹಿಸುವುದಾಗಿ ಅವರು ಈ ಸಂದರ್ಭ ಹೇಳಿದರು.
ಕಲ್ಲಡ್ಕ, ಮಣಿ, ಬಿ ಸಿ ರೋಡ್, ಕೈಕಂಬ, ಪರಂಗಿಪೇಟೆ ಮತ್ತು ಬಂಟ್ವಾಳ ಪರಿಸರದಲ್ಲಿ ಪರಿಸ್ಥಿತಿ ಹತೋಟಿಗೆ ತರುವ ನಿಟ್ಟಿನಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.
ಜೂ. 27ರ ವರೆಗೆ ಜಿಲ್ಲೆಯಲ್ಲಿ ಹಾಗೂ ಮಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿಯಲ್ಲಿರುವುದಾಗಿ ಅವರು ಈ ಸಂದರ್ಭ ಮಾಹಿತಿ ನೀಡಿದರು.
ಇನ್ನು ದೇವಸ್ಥಾನ-ಮಂದಿರಗಳ ಮೇಲೆ ದಾಳಿ, ಮತೀಯ ಉಗ್ರವಾದ, ಲವ್ ಜಿಹಾದ್, ಅಕ್ರಮ ಗೋಸಾಗಾಣಿಕೆ ವಿರೋಧಿಸಿ ಹಿಂದೂ ಹಿತರಕ್ಷಣಾ ಸಮಿತಿಯ ವತಿಯಿಂದ ಜೂ.24ರಂದು ಬೆಳಗ್ಗೆ 10ಕ್ಕೆ ಬಿ.ಸಿ.ರೋಡಿನಲ್ಲಿ ಇರುವ ಪ್ರತಿಭಟನೆಗೆ ಪೊಲೀಸ್ ಇಲಾಖೆಯಿಂದ ಯಾವುದೇ ಅನುಮತಿ ಇಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.
ಬಿ ಸಿ ರೋಡ್ ಹಾಗೂ ಕಲ್ಲಡ್ಕ ಸಹಜ ಸ್ಥಿತಿಗೆ: ಬುಧವಾರ ನಡೆದ ಎಸ್ ಡಿಪಿಐ ಕಾರ್ಯಕರ್ತ ಕಲಾಯಿ ಅಶ್ರಫ್ ಹತ್ಯೆಯ ನಂತರ ಉದ್ವಿಗ್ನಗೊಂಡಿದ್ದ ಬಂಟ್ವಾಳ ತಾಲೂಕಿನ ಕಲ್ಲಡ್ಕ, ಬಿ.ಸಿ. ರೋಡ್ ಸೇರಿದಂತೆ ಇತರ ಪ್ರದೇಶಗಳು ನಿಧಾನವಾಗಿ ಸಹಜ ಸ್ಥಿತಿಗೆ ಮರಳುತ್ತಿದೆ.
ರಸ್ತೆಗಳಲ್ಲಿ ವಾಹನ ಸಂಚಾರವಿದ್ದು, ಅಂಗಡಿಗಳು ಎಂದಿನಂತೆ ವಹಿವಾಟು ನಡೆಸುತ್ತಿದೆ. ಕೋಮು ಸೂಕ್ಷ್ಮ ಪ್ರದೇಶವಾದ ಕಲ್ಲಡ್ಕ ಕೂಡ ಸಹಜಸ್ಥಿತಿಗೆ ಮರಳುತ್ತಿದ್ದು, ಜನರ ಓಡಾಟ, ವ್ಯಾಪಾರಗಳು ಎಂದಿನಂತೆ ನಡೆಯುತ್ತಿವೆ.