'ಹಲವು ಗೋರಕ್ಷಕರು ಕ್ರಿಮಿನಲ್ ಹಿನ್ನಲೆಯುಳ್ಳವರು'
ಮಂಗಳೂರು, ಆಗಸ್ಟ್ 23 : 'ಶೇ 80ರಷ್ಟು ಮಂದಿ ಗೋರಕ್ಷಕರು ಕ್ರಿಮಿನಲ್ ಹಿನ್ನಲೆಯವರು. ಗೋ ರಕ್ಷಣೆ ಎಂದರೆ ಮೊದಲಿಗೆ ಬಜರಂಗದಳ ನೆನಪಿಗೆ ಬರುತ್ತದೆ. ಈ ಸಂಘಟನೆಯ ಹಲವು ನಾಯಕರ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ' ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಹೇಳಿದರು.
ಮಂಗಳೂರಿನ ಸರ್ಕೀಟ್ ಹೌಸ್ನಲ್ಲಿ ಮಂಗಳವಾರ ಮಾತನಾಡಿದ ಸಚಿವರು, 'ಕಾನೂನನ್ನು ಕೈಗೆ ತೆಗೆದುಕೊಂಡು ಇಷ್ಟ ಬಂದಂತೆ ಕೊಲೆ ಮಾಡುವ ನೀತಿ ಎಷ್ಟರ ಮಟ್ಟಿಗೆ ಸರಿ?. ಮುಗ್ಧ ಜನರನ್ನು ಕೊಲ್ಲಲು ಇವರು ಯಾರು?. ಕಾಂಗ್ರೆಸ್ ಪಕ್ಷ ದೇಶಕ್ಕಾಗಿ ಹೋರಾಡುತ್ತದೆ. ಆದರೆ, ಬಿಜೆಪಿ ಕೇವಲ ಹಕ್ಕಿಗಾಗಿ ಅಧಿಕಾರಕ್ಕಾಗಿ ಹೋರಾಡುತ್ತದೆ' ಎಂದು ಟೀಕಿಸಿದರು.[ಪ್ರವೀಣ್ ಕೊಲೆ ಪ್ರಕರಣ ಹೆಬ್ರಿ ಠಾಣೆಗೆ ವರ್ಗಾವಣೆ]
'ಧರ್ಮ, ದೇವರು ಮತ್ತು ದೇಶಭಕ್ತಿ ಹೆಸರಿನಲ್ಲಿ ಕೆಲವು ಸಂಘಟನೆಗಳು ಕಾನೂನನ್ನು ಕೈಗೆತೆಗೆದುಕೊಂಡು ತಮಗೆ ಇಷ್ಟ ಬಂದಂತೆ ಶಿಕ್ಷೆ ವಿಧಿಸಿ ಸಮಾಜದಲ್ಲಿ ಶಾಂತಿಯನ್ನು ಕಾದಡುತ್ತಿವೆ. ಪ್ರಚಾರಕ್ಕೋಸ್ಕರ ಅನೇಕ ಸಮಸ್ಯೆಗಳನ್ನು ಸೃಷ್ಟಿಸುತ್ತಿವೆ. ಗೋರಕ್ಷಣೆಯ ಹೆಸರಿನಲ್ಲಿ ಅಮಾಯಕರ ಜೀವವನ್ನೇ ಬಲಿತೆಗೆದುಕೊಳ್ಳುತ್ತಿವೆ' ಎಂದು ಹೇಳಿದರು.[ಗೋವು ಸಾಗಾಟ ವಿವಾದ, ದಕ್ಷಿಣ ಕನ್ನಡದ ಹಿಂದಿನ ಘಟನೆಗಳು]
'ಮೊದಲು ಗೋರಕ್ಷಣೆಯ ಹೆಸರಿನಲ್ಲಿ ಅಲ್ಪಸಂಖ್ಯಾತ ವರ್ಗದವರ ಮೇಲೆ ದಾಳಿ ಮಾಡಲಾಗುತ್ತಿತ್ತು. ಆದರೆ, ಈಗ ಹಿಂದುಳಿದ ವರ್ಗದವರನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸಂಘ ಪರಿವಾರ ಕೋಮುವಾದ ಸೃಷ್ಟಿಸಿದೆ ಮತ್ತು ಮುಗ್ಧ ಜನರನ್ನು ಕೊಲ್ಲುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಲೆಬೇಕು' ಎಂದರು.