ಶಾಲೆಯಲ್ಲಿ ಸಮವಸ್ತ್ರ, ಪುಸ್ತಕ ಮಾರಾಟಕ್ಕೆ ತಡೆ -ಮಿಶ್ರ ಪ್ರತಿಕ್ರಿಯೆ
ಸಿಬಿಎಸ್ಇ ಮೂಲಗಳ ಪ್ರಕಾರ ಹೆಚ್ಚಿನ ಖಾಸಗಿ ಮತ್ತು ಅನುದಾನಿತ ಶಾಲೆಗಳು ಸಮವಸ್ತ್ರ, ಪುಸ್ತಕಗಳನ್ನು ಶಾಲೆಗಳಿಂದಲೇ ಖರೀದಿಸಬೇಕೆಂದು ಬಲವಂತಪಡಿಸುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇದಕ್ಕಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಮಂಗಳೂರು, ಮೇ 10: ಶಾಲೆಗಳು ಸಮವಸ್ತ್ರ ಮತ್ತು ಪಠ್ಯಪುಸ್ತಕ ವಿತರಿಸುವುದನ್ನು ನಿಷೇಧಿಸಿ ಸಿಬಿಎಸ್ಇ ಹೊರಡಿಸಿರುವ ನಿರ್ದೇಶನಕ್ಕೆ ಮಂಗಳೂರು ಶಾಲೆಗಳ ವಿದ್ಯಾರ್ಥಿಗಳ ಪೋಷಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಸಿಬಿಎಸ್ಇ ವ್ಯಾಪ್ತಿಗೆ ಬರುವ ಶಾಲೆಗಳಿಗೆ ಮಾತ್ರ ಈ ನಿಯಮ ಅನ್ವಯವಾಗಲಿದೆ.
ಇದೇ ವೇಳೆ ಕೆಲವು ಪೋಷಕರು ಸಿಬಿಎಸ್ಇ ನಿರ್ದೇಶನಕ್ಕೆ ಸಂತೋಷ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ. ಶಾಲೆಗಳು ಸಮವಸ್ತ್ರ, ಪಠ್ಯಪುಸ್ತಕ ಮತ್ತು ಇತರ ಸಾಮಗ್ರಿಗಳನ್ನು ವಿತರಿಸುವುದರಿಂದ ಪೋಷಕರ ಹೊರೆ ಕಡಿಮೆಯಾಗುತ್ತದೆ. ಇಲ್ಲದಿದ್ದರೆ ಮಕ್ಕಳ ಹೆತ್ತವರು ಇದಕ್ಕಾಗಿ ಅಂಗಡಿಗಳಿಗೆ ಸುತ್ತಬೇಕಾಗುತ್ತದೆ. ಎಲ್ಲವೂ ಒಂದೇ ಸೂರಿನಡಿ ದೊರೆಯುವುದು ಹೆಚ್ಚು ಅನುಕೂಲವಾಗುತ್ತದೆ ಎಂಬುದು ಹೆತ್ತವರ ಅಭಿಪ್ರಾಯ.
ಖಾಸಗಿ ಮತ್ತು ಅನುದಾನಿತ ಶಾಲೆಗಳಿಗೆ ಮಕ್ಕಳನ್ನು ಕಳುಹಿಸುವ ಹೆತ್ತವರು ಸ್ಟೇಷನರಿ, ನೋಟ್ ಪುಸ್ತಕಗಳು, ಪಠ್ಯಪುಸ್ತಕಗಳು ಮತ್ತು ಸಮವಸ್ತ್ರಗಳು ಖರೀದಿಸಲು ಹೆಚ್ಚು ಹಣ ವಿನಿಯೋಗಿಸಬೇಕಾಗುತ್ತದೆ. ಮಾತ್ರವಲ್ಲ, ಇವುಗಳನ್ನು ಶಾಲೆಗಳು ಅನುಮೋದಿಸಿದ ವ್ಯಾಪಾರಿಗಳಿಂದಲೇ ಖರೀದಿಸಬೇಕಾಗಿದೆ. ಇದನ್ನು ಪರಿಗಣಿಸಿ ದೆಹಲಿ ಹೈಕೋರ್ಟ್ ಸಿಬಿಎಸ್ಇಗೆ ಈ ನಿರ್ದೇಶನ ನೀಡಿತ್ತು. ಶಾಲಾ ಆಡಳಿತ ಮಂಡಳಿ ವಿದ್ಯಾರ್ಥಿಗಳು ಮತ್ತು ಹೆತ್ತವರಿಗೆ ಆಯ್ದ ವ್ಯಾಪಾರಿಗಳಿಂದ ಸಮವಸ್ತ್ರ ಅಥವಾ ಪಠ್ಯಪುಸ್ತಕ ಖರೀದಿಗೆ ಒತ್ತಾಯಿಸುವಂತಿಲ್ಲ ಎಂದು ಈ ಆದೇಶ ಹೊರಡಿಸಿತ್ತು.
ಸಿಬಿಎಸ್ಇ ಮೂಲಗಳ ಪ್ರಕಾರ ಹೆಚ್ಚಿನ ಖಾಸಗಿ ಮತ್ತು ಅನುದಾನಿತ ಶಾಲೆಗಳು ಸಮವಸ್ತ್ರ, ಪುಸ್ತಕಗಳನ್ನು ಶಾಲೆಗಳಿಂದಲೇ ಖರೀದಿಸಬೇಕೆಂದು ಬಲವಂತಪಡಿಸುತ್ತಿವೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಇತರ ಕೆಲವು ಶಾಲೆಗಳು ನಿರ್ದಿಷ್ಠ ಕೆಲವು ಅಂಗಡಿಗಳನ್ನು ಹೆತ್ತವರಿಗೆ ಸೂಚಿಸುತ್ತಿವೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೋಷಕರಾದ ಯೋಗೇಶ್ ಶೆಟ್ಟಿ, "ನನ್ನ ಇಬ್ಬರು ಹೆಣ್ಮಕ್ಕಳು ಕುಲಶೇಖರದ ಶಾಲೆಯೊಂದರಲ್ಲಿ ಕಲಿಯುತ್ತಿದ್ದಾರೆ. ಅವರ ಶಾಲೆಯು ಸಮವಸ್ತ್ರ ಮತ್ತು ಪುಸ್ತಕಗಳ ಖರೀದಿಗೆ ಅಂಗಡಿಯೊಂದನ್ನು ಸೂಚಿಸಿದೆ. ನಾನು ಆ ಅಂಗಡಿಯಿಂದ ಸಮವಸ್ತ್ರ ಖರೀದಿಸಿದ್ದೇನೆ. ಆದರೆ ಅದು ಉತ್ತಮ ಗುಣಮಟ್ಟವನ್ನು ಹೊಂದಿರಲಿಲ್ಲ. ನಂತರ ನಾನು ಬೇರೆ ಅಂಗಡಿಯಿಂದ ಸಮವಸ್ತ್ರ ಖರೀದಿಸಲು ಆರಂಭಿಸಿದೆ," ಎಂದು ತಿಳಿಸಿದ್ದಾರೆ.
ಕೆಲವು ಹೆತ್ತವರು ಆದೇಶವು ನಮಗೆ ಹೆಚ್ಚಿನ ಹೊರೆಯನ್ನು ನೀಡುತ್ತದೆ. ಅಂಗಡಿಗಳಿಗೆ ಅಲೆದಾಡಬೇಕಾಗುತ್ತದೆ. ಹೊಲಿಗೆಗೆ ದುಪ್ಪಟ್ಟು ಹಣ ನೀಡಬೇಕು. ಮಾತ್ರವಲ್ಲ, ಇದೀಗ ಮದುವೆ ಸಮಯ ಎಂದು ಟೈಲರುಗಳು ನಮ್ಮ ಬಟ್ಟೆ ಹೊಲಿದು ಕೊಡಲು ನಿರಾಕರಿಸುತ್ತಾರೆ ಎಂದು ಅಳಲು ತೋಡಿದ್ದಾರೆ.
ಇನ್ನೂ ಕೆಲವು ಹೆತ್ತವರು ಆದೇಶವನ್ನು ತಡವಾಗಿ ಹೊರಡಿಸಲಾಗಿದೆ. ಈ ಆದೇಶವನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಮಾತ್ರ ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸಾಧ್ಯ ಎಂದು ಹೇಳಿದ್ದಾರೆ.