ಭಾವೈಕ್ಯತೆ ಮೆರೆದ ದೀಪಾವಳಿ ಸಂಭ್ರಮ
ಮಂಗಳೂರು, ಅ. 30: ದೀಪಾವಳಿ ಹಬ್ಬದ ಪ್ರಯುಕ್ತ ವಿಧಾನಪರಿಷತ್ ಮುಖ್ಯಸಚೇತಕ ಐವನ್ ಡಿಸೋಜಾ ನೇತೃತ್ವದಲ್ಲಿ ನಗರದ ಕದ್ರಿಯ ಗೋರಕ್ಷನಾಥ ಜ್ಞಾನ ಮಂದಿರದಲ್ಲಿ 'ಭಾವೈಕ್ಯತಾ ಸಂಗಮ' ನಡೆಯಿತು.
ಕಾರ್ಯಕ್ರಮದಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಗೂಡುದೀಪ ಸ್ಪರ್ಧೆಯಲ್ಲಿ ಸುಮಾರು 75 ಗೂಡುದೀಪಗಳು ಪಾಲ್ಗೊಂಡಿದ್ದು, ಜನಾಕರ್ಷಣೆಯ ಕೇಂದ್ರವಾಗಿತ್ತು.
ವಿದ್ಯಾರ್ಥಿಗಳಿಗೆ ಏರ್ಪಡಿಸಲಾಗಿದ್ದ 'ಭಾವೈಕ್ಯತಾ ವೈಶಿಷ್ಟತೆ' ಎಂಬ ವಿಷಯದ ಪ್ರಬಂಧ ಸ್ಪರ್ಧೆಯಲ್ಲಿ ಪ್ರೌಢ ಶಾಲೆಯ 18 ಮಂದಿ ವಿದ್ಯಾರ್ಥಿಗಳು ಮತ್ತು ಪ್ರಥಮ ಹಾಗೂ ದ್ವಿತೀಯ ಪಿಯುಸಿಯ 14 ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಅಕ್ಕಿ ವಿತರಣೆ ಮತ್ತು ಅಗತ್ಯವಿದ್ದರಿಗೆ ಕನ್ನಡಕಗಳ ವಿತರಣೆ ನಡೆಯಿತು.
ಸೆಮಿನಾರ್ ಚರ್ಚ್ನ ಧರ್ಮಗುರು ಫಾ.ಸೆಬೆಸ್ಟಿಯನ್ ಮಾತನಾಡಿ, ಎಲ್ಲ ಧರ್ಮೀಯರೂ ಪರಸ್ಪರ ಅನ್ಯೋನ್ಯತೆ ಮತ್ತು ಸಹೋದರತೆಯಂದ ಬಾಳ್ವೆ ನಡೆಸುವಂತಾಗಲಿ. ಹಬ್ಬದ ಸಂದರ್ಭದಲ್ಲಿ ಇತರ ಕಷ್ಟದಲ್ಲಿರುವವರಿಗೆ ಸ್ಪಂದಿಸುವ ಮತ್ತು ಸಹಾಯ ಯಾಚಿಸುವವರಿಗೆ ನೆರವಾಗುವ ಕೆಲಸಗಳೂ ಆಗಲಿ ಎಂದು ಹಾರೈಸಿದರು.
ಇಮಾಮ್ ಕೌನ್ಸಿಲ್ನ ಕಾರ್ಯದರ್ಶಿ ಜಾಫರ್ ಸಾದಿಕ್ ಫೈಝಿ ಮಾತನಾಡಿ, ಪ್ರತಿ ಧರ್ಮದ ಹಬ್ಬ, ಸುದಿನಗಳಲ್ಲಿ ಇತರ ಧರ್ಮೀಯರೂ ಖುಷಿ ಪಡಬೇಕು. ಎಲ್ಲರೂ ಪರಸ್ಪರ ಸಹೋದರೆಯಿಂದ ಬಾಳೋಣ ಎಂದರು.
ಕದ್ರಿ ಮಠದ ಪ್ರತಿನಿಧಿಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದೀಪ್ನಾಥ ಜೀ ಮತ್ತು ಪಾಲಕ್ನಾಥ ಜೀ ಅವರು ಎಲ್ಲರಿಗೂ ದೀಪಾವಳಿ ಹಬ್ಬದ ಶುಭ ಕೋರಿದರಲ್ಲದೆ, ಎಲ್ಲರ ಮನಸ್ಸುಗಳು ಬೆಳಗಲಿ ಎಂದು ಹಾರೈಸಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕಿ ಶಕುಂತಲಾ ಶೆಟ್ಟಿ, ಮೇಯರ್ ಹರಿನಾಥ್, ಕಾರ್ಪೊರೇಟರ್ಗಳಾದ ಪ್ರತಿಭಾ ಕುಳಾಯಿ, ಶಶಿಧರ್ ಹೆಗ್ಡೆ, ಅಪ್ಪಿ, ಜೆಸಿಂತಾ ವಿಜಯ ಆಲ್ಫ್ರೆಡ್ ಮೊದಲಾದವರು ಉಪಸ್ಥಿತರಿದ್ದರು.