ದಕ್ಷಿಣ ಕನ್ನಡದಲ್ಲಿ ಮರಳು ಗಣಿಗಾರಿಕೆಗೆ ಹೊಸ ನಿಯಮ
ಮಂಗಳೂರು, ಆಗಸ್ಟ್ 16 : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜೂನ್ 15ರಿಂದ ಮರಳು ಗಣಿಗಾರಿಕೆಗೆ ನಿಷೇಧ ಹೇರಲಾಗಿದೆ. ಆಗಸ್ಟ್ ತಿಂಗಳಿನಲ್ಲಿ ಗಣಿಗಾರಿಕೆಗೆ ಪುನಃ ಆರಂಭವಾಗಬೇಕಿತ್ತು. ಆದರೆ, ಹೊಸ ಮಾರ್ಗ ಸೂಚಿ ಮತ್ತು ಮರಳು ಗಣಿಗಾರಿಕೆಗೆ ಜಿಲ್ಲಾಡಳಿತ ಒಪ್ಪಿಗೆ ನೀಡದ ಹಿನ್ನಲೆಯಲ್ಲಿ ಇನ್ನೂ ಗಣಿಗಾರಿಕೆ ಆರಂಭವಾಗಿಲ್ಲ.
ಸಿಆರ್ ಝಡ್ (Coastal Regulation Zone) ವ್ಯಾಪ್ತಿಯಲ್ಲಿ ಮರಳುಗಾರಿಕೆ ನಡೆಸಲು ಹೊಸ ಮಾರ್ಗಸೂಚಿ ಸಿದ್ಧವಾಗಿದೆ. ಜಿಲ್ಲಾಧಿಕಾರಿ ಡಾ.ಕೆ.ಜಿ ಜಗದೀಶ್ ಅವರು ಅಧಿಕಾರಿಗಳ ಸಭೆ ಕರೆದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ. ಅಲ್ಲಿಯವರೆಗೆ ಜಿಲ್ಲೆಯಲ್ಲಿ ಮರಳುಗಾರಿಕೆ ಆರಂಭವಾಗುವುದಿಲ್ಲ.[ದಕ್ಷಿಣ ಕನ್ನಡದಲ್ಲಿ ಜೂನ್ 15ರಿಂದ ಮರಳುಗಾರಿಕೆ ನಿಷೇಧ]
ಹೊಸ ಮಾರ್ಗಸೂಚಿ ಅನ್ವಯ ಮರಳುಗಾರಿಕೆ ಆರಂಭಿಸಿದರೆ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕು. ನಿಯಮ ಉಲ್ಲಂಘಿಸಿ ಮರಳುಗಾರಿಕೆ ನಡೆಸಿದಲ್ಲಿ, ಜಿಲ್ಲಾಡಳಿತ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಿದೆ.[ಮರಳು ಮಾಫಿಯಾ ಎಂದರೇನು? ಏನಿದರ ಮರ್ಮ?]
ಹೊಸ ನಿಯಮದ ಅನ್ವಯ ಯಾವುದೇ ಕಾರಣಕ್ಕೂ ಮರಳುಗಾರಿಕೆಗೆ ಯಂತ್ರವನ್ನು ಬಳಸುವಂತಿಲ್ಲ, ಮರಳು ಸಾಗಣೆ ಮಾಡುವ ವಾಹನಕ್ಕೆ ಜೆಪಿಎಸ್ ಅಳವಡಿಸಬೇಕು. ಬೆಳಗ್ಗೆ 6 ರಿಂದ ಸಂಜೆ 6ರವರೆಗೆ ಮಾತ್ರ ಮರಳುಗಾರಿಕೆ ನಡೆಸಬೇಕು ಎಂದು ಷರತ್ತು ವಿಧಿಸಲಾಗಿದೆ.[ಮಂಗಳೂರಲ್ಲಿ ಅಕ್ರಮ ಮರಳು ದಂಧೆಗೆ ಇಲ್ಲ ಕಡಿವಾಣ]
ಮರಳು ಗಣಿಗಾರಿಕೆ ನಡೆಸುವವರು ಹೊಸ ಮಾರ್ಗಸೂಚಿಯ ಕೆಲವು ಷರತ್ತುಗಳನ್ನು ಒಪ್ಪಿಲ್ಲ. ಜಿಪಿಎಸ್ ಅಳವಡಿಕೆ ಸೇರಿದಂತೆ ಕೆಲವು ಪ್ರಮುಖ ನಿಯಮಗಳನ್ನು ಯಾರು ಪಾಲಿಸುತ್ತಿಲ್ಲ. ಆದ್ದರಿಂದ, ಜಿಲ್ಲಾಡಳಿತ ಅವರ ವಿರುದ್ಧ ಕ್ರಮ ಕೈಗೊಂಡರೆ ಮರಳುಗಾರಿಕೆ ನಡೆಸುವವರಿಗೆ ಸಂಕಷ್ಟ ಎದುರಾಗಲಿದೆ.