ಸ್ಥಳೀಯರ ಹೆಗಲೇರಿದ ಸಿಇಒ ಪ್ರಕರಣ: ಸ್ಥಳೀಯರ ಸ್ಪಷ್ಟನೆ
ಚರಂಡಿ ದಾಟುವಾಗ ದೇವಪ್ಪ ಹಾಗೂ ನರಸಿಂಹಲು ಎಂಬುವರ ಹೆಗಲೇರಿದ್ದ ರಾಯಚೂರು ಜಿಲ್ಲಾ ಪಂಚಾಯತ್ ಸಿಇಒ ವಿವಾದಕ್ಕೀಡಾಗಿದ್ದರು. ಇದೀಗ, ಅವರನ್ನು ಹೆಗಲ ಮೇಲೆ ಹೊತ್ತೊಯ್ದಿದ್ದವರೇ ಅವರ ನೆರವಿಗೆ ಬಂದಿದ್ದಾರೆ.
ರಾಯಚೂರು, ಮಾರ್ಚ್ 25: ಅಧಿಕಾರಿಗಳ ಜತೆಗೆ ಕಾರ್ಯ ನಿಮಿತ್ತ ಕಾಲ್ನಡಿಗೆಯಲ್ಲಿ ಸುತ್ತಾಡುವಾಗ ಚರಂಡಿಯೊಂದನ್ನು ದಾಟುವ ವೇಳೆ ಸ್ಥಳೀಯರ ಹೆಗಲೇರಿ ಚರಂಡಿ ದಾಟುವ ಮೂಲಕ ವಿವಾದ ಎಳೆದುಕೊಂಡಿದ್ದ ರಾಯಚೂರು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಕುರ್ಮಾ ರಾವ್ ಅವರ ಬೆಂಬಲಿಗೆ ಸ್ಥಳೀಯರು ಬಂದಿದ್ದಾರೆ.
ಕುರ್ಮ ರಾವ್ ಅವರು, ಚರಂಡಿ ದಾಟುವಾಗ ದೇವಪ್ಪ ಹಾಗೂ ನರಸಿಂಹಲು ಎಂಬುವರ ಹೆಗಲೇರಿದ್ದರು. ಈಗ, ಇದೇ ದೇವಪ್ಪ ಹಾಗೂ ನರಸಿಂಹಲು ಅವರು ಟಿವಿ ಮಾಧ್ಯಮವೊಂದಕ್ಕೆ ಹೇಳಿಕೆ ನೀಡಿದ್ದು, ತಾವೇ ಸ್ವಯಂ ಪ್ರೇರಿತರಾಗಿ ಅಧಿಕಾರಿಯನ್ನು ಹೆಗಲ ಮೇಲೆ ಹೊತ್ತೊಯ್ದಿರುವುದಾಗಿ ತಿಳಿಸಿದ್ದಾರೆ.[ಚರಂಡಿ ದಾಟಲು ಸ್ಥಳೀಯರ ಹೆಗಲೇರಿದ ರಾಯಚೂರು ಜಿ.ಪಂ ಸಿಇಒ]
ದೇವಪ್ಪ ಅವರು ಸಾಕ್ಷರತಾ ಪ್ರೇಕರರಾಗಿದ್ದರೆ, ನರಸಿಂಹಲು ಅವರು ಗ್ರಾಪಂ ಸದಸ್ಯರಾಗಿದ್ದಾರೆ. ಈ ಇಬ್ಬರೂ ರಾಯಚೂರು ಜಿಲ್ಲೆಯ ಅತ್ಕೂರು ಗ್ರಾಮದವರು.
ಇದೀಗ ಖಾಸಗಿ ಟಿವಿ ವಾಹಿನಿಯೊಂದಕ್ಕೆ ಹೇಳಿಕೆ ನೀಡಿರುವ ಈ ಇಬ್ಬರೂ, ''ಕುರ್ಮ ರಾವ್ ಅವರು ತಮ್ಮನ್ನು ಚರಂಡಿ ದಾಟಿಸಬೇಕೆಂದು ಯಾರಲ್ಲೂ ಕೇಳಲಿಲ್ಲ. ಅವರಿಗೆ ತೊಂದರೆಯಾಗಬಾರದೆಂದು ಅವರ ಮೇಲಿನ ಅಭಿಮಾನದಿಂದ ಖುದ್ದು ತಾವೇ ಅವರನ್ನು ಹೊತ್ತುಕೊಂಡು ಚರಂಡಿ ದಾಟಿಸಿದ್ದೆವು'' ಎಂದು ಹೇಳಿಕೊಂಡಿದ್ದರು.