"ಜೇಬಿಗೆ ಬೆಂಕಿ ಇಟ್ರು.. ಪ್ರೀತಿಗೂ ಕೊಳ್ಳಿ ಇಟ್ರು..!
ಥತ್ತೇರಿಕೆ... ಈ ಬಜೆಟ್ ಮತ್ತೆ ಬಂತು... ಮೊದಲು ಕೆಮ್ಮು ಹೊಡಿತಾ ಧಮ್ ಹೋಡಿತಿದ್ವಿ.. ಈಗ ಮತ್ತಷ್ಟು ಹೊಟ್ಟೆ ಉರಿದುಕೊಳ್ಳುತ್ತಾ ಧಮ್ ಹೊಡಿಯೋ ಹಾಗೆ ಆಗಿದೆ... ಎಂದು ನಾಗರಾಜ ಬಡಬಡಿಸುತ್ತಲೇ ಮನೆಯಿಂದ ಹೊರಬಂದ.
ಬೆಳಿಗ್ಗೆನೇ ಟಿವಿ ಮುಂದೆ ಕೂತಿದ್ದ ನಾಗರಾಜ ಪೂರ್ಣ ಬಜೆಟ್ ನೋಡಿದ್ದ. "ಏನಪ್ಪಾ ಬಜೆಟ್ ಬಗ್ಗೆ ನಿನ್ನ ಅಭಿಪ್ರಾಯ?" ಎಂದು ಕೇಳಿದ್ದೇ ತಡ ಒಂದು ಕಡೆಯಿಂದ ಮಾತು ಶುರುವಿಟ್ಟುಕೊಂಡ.[ಫನ್ನಿ ಟ್ವೀಟ್ಸ್ : ಬೀಡಿ ಬಾಯಲ್ಲಿಟ್ಟು ದಮ್ ಎಳೆಯೋಣ]
"ಇದು ಜನವಿರೋಧಿ ಬಜೆಟ್, ಪ್ರತಿ ಬಾರಿಯೂ ನಮ್ಮನ್ನೆ ಬಲಿಪಶು ಮಾಡ್ತಾ ಇದ್ದಾರೆ. ಒಂದು ಉದ್ದದ ಸಿಗರೇಟ್ ಗೆ ಈಗಲೇ 11 ರು. ಕೊಡ್ತಾ ಇದ್ದೇವೆ. ಸರ್ಕಾರಕ್ಕೆ ಇದು ಸಾಲದಾ? ಸಿಗರೇಟ್ ಸೇದುವವರ ಜೇಬಿಗೆ ಬೆಂಕಿ ಬೀಳೊದೊಂದೆ ಬಾಕಿ" ಎಂದು ತನ್ನ ಸಮರ್ಥನೆ ಮುಂದಿಟ್ಟ.[ಕೇಂದ್ರ ಬಜೆಟ್ 2016: ಯಾವುದು ಅಗ್ಗ? ಯಾವುದು ತುಟ್ಟಿ?]
ಸಿಗರೇಟು, ಗುಟ್ಕಾ ಬೆಲೆ ಏರಿಕೆ ಮಾಡೋದು ಗ್ಯಾರಂಟಿ,, ಈಗಾಗಲೇ ಅಂಗಡಿಯವರು ಎಂಆರ್ ಪಿಗಿಂತ ಜಾಸ್ತಿ ತಗೋತಾ ಇದಾರೆ. ಬಜೆಟ್ ಮುಗಿದ ಮೇಲೆ ಕತೆ ಕೇಳೋದೆ ಬೇಡ... ನಾವು ಪ್ರೀತಿ ಮಾಡೋರಿಗೆ ಚೂಡಿದಾರ್ ಕೊಡಿಸುವ ಹಾಗೂ ಇಲ್ಲ. ಇಂಥ ಬಜೆಟ್ ಮಾಡಿ ನಮ್ಮ ಜೇಬಿಗೂ, ಪ್ರೀತಿಗೂ ಬೆಂಕಿ ಇಟ್ಟರು ಎಂದು ಕೊಂಚ ಆಕ್ರೋಶಭರಿತನಾಗೇ ಹೇಳ್ದ.
ಇದ್ದಿದ್ದರಲ್ಲಿ ಒಂದೇ ಸಮಾಧಾನ. ಎಣ್ಣೆ ಮೇಲಿನ ತೆರಿಗೆ ಹೆಚ್ಚುಮಾಡಿಲ್ಲಪ್ಪಾ. ತಲೆ ಚಿಟ್ಟು ಹಿಡಿದಾಗ ಕೊಂಚ ಸಮಾಧಾನ ನೀಡೋ ಎಣ್ಣೆ (ಮದ್ಯ) ಹಳೇ ರೇಟಲ್ಲೆ ಸಿಗ್ತದ್ಯಂತೆ. ಸಂಜೆ ಕಡೆ ಒಂದು ರೌಂಡ್ ಹಾಕಿಕೊಂಡು ಬರೋಕೆ ಅಡ್ಡಿ ಇಲ್ಲ..
ಅಲ್ಲಾ ಸ್ವಾಮಿ,,, ಇಂಟರ್ ನ್ಯಾಶನಲ್ ಮಾರ್ಕೆಟ್ ನಲ್ಲಿ ಆ ಪರಿ ತೈಲ ದರ ಇಳಿಕೆಯಾದ್ರೂ ಬಜೆಟ್ ನಲ್ಲಿ ಜೇಟ್ಲಿಯವರೂ ಒಂದು ಸೊಲ್ಲೆತ್ತಿಲ್ಲ. ಇತ್ತ ದೇಶಕ್ಕಾಗಿ ಹೋರಾಡಿ ಮಣಿದ ಸೈನಿಕರಿಗೂ ಹೇಳಿಕೊಳ್ಳುವಂಥ ಕೊಡುಗೆ ನೀಡಿಲ್ಲ. ಸಿಯಾಚಿನ್ ಗೆ ಏನಾದ್ರೂ ಪರ್ಯಾಯ ಮಾರ್ಗ ಹೇಳ್ತಾರೇನೋ ಅಂದ್ಕಂಡಿದ್ದೆ....
ಈ ತೆರಿಗೆ-ಪರಿಗೆ ಕತೆ ಎಲ್ಲಾ ನಂಗೊತ್ತಿಲ್ಲ ಸ್ವಾಮಿ, ನನಗೆ ಬೇಕಾಗಿರುವುದು ಕೈಗೆ ಸಿಗೋ ಬೆಲೆಯಲ್ಲಿ ಸಿಕ್ಕರೆ ಸಾಕು. ಅದೇನೋ ಆಹಾರ ಭದ್ರತೆ ಅಂಥಿದ್ದರಲ್ಲಾ.. ಅದರ ಕತೆ ಎಲ್ಲಿಗೆ ಬಿಟ್ರು? ಮೂರು ಹೊತ್ತು ಊಟ, ಸಾಕಷ್ಟು ನಿದ್ದೆ,,, ಧಮ್ಮು--ಕೆಮ್ಮು,,, ಅಮಲು ಇದೆಲ್ಲಾ ಸರಿಯಾಗಿ ಸಿಕ್ಕರೆ ಸಾಕು ಎನ್ನುತ್ತ ಬಾರ್ ಕಡೆ ಹೆಜ್ಜೆ ಹಾಕಿದ.