ಗೋವಾ ಪ್ರವೇಶ ಮಾಡಿಯೇ ತೀರುತ್ತೇನೆ: ಮುತಾಲಿಕ್
ಹುಬ್ಬಳ್ಳಿ,ಜೂನ್, 16: "ಗೋವಾದಲ್ಲಿರುವ ಬಿಜೆಪಿ ಸರಕಾರ ನಿರ್ಲಜ್ಜ ಆಡಳಿತ ಮಾಡುತ್ತಿದೆ. ಹಿಂದುತ್ವದ ಹೆಸರಿನಲ್ಲಿ ಗೋವಾದಲ್ಲಿ ಸರಕಾರ ಆಡಳಿತಕ್ಕೆ ಬಂದು ಹಿಂದೂಪರ ಹೋರಾಟಗಾರರ ಬಗ್ಗೆ ದ್ವಂದ್ವ ನೀತಿ ಅನುಸರಿಸುತ್ತಿದೆ. ಶೀಘ್ರದಲ್ಲಿಯೇ ಸುಪ್ರೀಂ ಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿ ಗೋವಾ ಪ್ರವೇಶ ಮಾಡಿಯೇ ತೀರುತ್ತೇನೆ " ಎಂದು ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಗುಡುಗಿದ್ದಾರೆ.
ಗುರುವಾರ ನಗರದ ಪ್ರೆಸಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಕೊಲೆಗಳು ನಡೆದಿದ್ದು ಕಾಂಗ್ರೆಸ್ ಸರಕಾರ ಆಡಳಿತವಿದ್ದಾಗ. ಕಾಂಗ್ರೆಸ್ ಪಕ್ಷದವರೇ ವ್ಯವಸ್ಥಿತವಾಗಿ ಹಿಂದೂ ಸಂಘಟನೆಗಳ ಮೇಲೆ ಆರೋಪ ಹೊರಿಸುತ್ತಿದ್ದಾರೆ. ಕೇಂದ್ರದ ಮೋದಿ ಸರಕಾರ ಕಾಂಗ್ರೆಸ್ ಪಕ್ಷದ ಈ ಕುತಂತ್ರವನ್ನು ತನಿಖೆ ಮಾಡಿಸಬೇಕು. ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶ ರೊಬ್ಬರಿಂದ ಪ್ರಕರಣದ ತನಿಖೆಗೆ ಆದೇಶಿಸಬೇಕು ಎಂದರು.['ನೀವೇನು ಪೊಲೀಸರಾ?' ಶ್ರೀರಾಮ ಸೇನೆಗೆ ಸುಪ್ರೀಂ ಪ್ರಶ್ನೆ]
ಕರ್ನಾಟಕ ಮತ್ತು ನೆರೆಯ ಮಹಾರಾಷ್ಟ್ರ ರಾಜ್ಯದಲ್ಲಿ ನಡೆದ ಮೂವರು ವಿಚಾರವಾದಿಗಳ ಹತ್ಯೆ ಪ್ರಕರಣಕ್ಕೂ ಸನಾತನ ಸಂಸ್ಥೆಗೂ ಯಾವುದೇ ರೀತಿಯಿಂದಲೂ ಸಂಬಂಧವಿಲ್ಲ ಎಂದು ಹೇಳಿದರು. [ಪ್ರಮೋದ್ ಮುತಾಲಿಕ್ ಬಿಜೆಪಿ ಸೇರ್ಪಡೆ ಪ್ರಹಸನ]
ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರ ಮುಕ್ತ ರಾಜ್ಯ ಮಾಡುವುದಾಗಿ ಹೇಳಿಕೊಂಡು ಅಧಿಕಾರಕ್ಕೆ ಬಂದಿದ್ದಾರೆ. ಆದರೀಗ ಇಡೀ ರಾಜ್ಯವನ್ನೇ ಭ್ರಷ್ಟರ ಸಾಮ್ರಾಜ್ಯವನ್ನಾಗಿ ಮಾಡಿದ್ದಾರೆ. ರಾಜ್ಯದಲ್ಲಿನ ಪ್ರಾಮಾಣಿಕ ಮತ್ತು ದಕ್ಷ ಅಧಿಕಾರಿಗಳಿಗೆ ಬೆಲೆ ಇಲ್ಲದಂತಾಗಿದೆ. ದೇಶದಲ್ಲಿ ಭಯೋತ್ಪಾದಕರನ್ನು ಬೆಳೆಸಿದ್ದು ಕಾಂಗ್ರೆಸ್ ಪಕ್ಷ. ತಮ್ಮ ಮತ ಬ್ಯಾಂಕ್ ಗಾಗಿ ಕಾಂಗ್ರೆಸ್ ಅಲ್ಪಸಂಖ್ಯಾತ ಸಮುದಾಯದವರನ್ನು ಓಲೈಸುತ್ತಾ ಬಂದಿದೆ ಎಂದು ದೂರಿದರು.