ಬಿಜೆಪಿ ಬೆಂಗಳೂರನ್ನು ಮತ್ತೆ ಗಾರ್ಬೇಜ್ ಸಿಟಿ ಮಾಡದಿದ್ದರೆ ಸಾಕು
ಬೆಂಗಳೂರು, ಆಗಸ್ಟ್ 27: ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ, ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ, ಜೊತೆಗೆ ಮತ್ತೆ ಬಿಜೆಪಿ ತನ್ನ ದುರಾಡಳಿತವನ್ನು ಮುಂದಿನ ದಿನಗಳಲ್ಲಿ ತೋರದಿರಲಿ ಎಂದು ರಾಜ್ಯ ಗೃಹ ಸಚಿವ ಕೆ ಜೆ ಜಾರ್ಜ್, ಬಿಜೆಪಿಗೆ ವಿನಮ್ರ ಸಲಹೆ ನೀಡಿದ್ದಾರೆ.
ಮಾಧ್ಯಮದವರೊಂದಿಗೆ ಬುಧವಾರ (ಆ26) ಮಾತನಾಡುತ್ತಿದ್ದ ಜಾರ್ಜ್, ನಮ್ಮ ನಿರೀಕ್ಷೆಗೂ ಮೀರಿ ಬಿಜೆಪಿ ಹೆಚ್ಚಿನ ಸ್ಥಾನದಲ್ಲಿ ಜಯಗಳಿಸಿದೆ. ನಾವು ಬೆಂಗಳೂರು ಅಭಿವೃದ್ದಿಗೆ ಎಲ್ಲಾ ಸಹಕಾರವನ್ನು ಅವರಿಗೆ ನೀಡುತ್ತೇವೆ ಎಂದಿದ್ದಾರೆ.
ನಮಗಿರುವ ಒಂದು ಭಯವೆಂದರೆ ಮತ್ತೆ ಬೆಂಗಳೂರು ಗಾರ್ಬೇಜ್ ಸಿಟಿ ಆಗುತ್ತೋ ಎಂದು. ಬಿಜೆಪಿ ಬೆಂಗಳೂರನ್ನು ಮತ್ತೆ ಗಾರ್ಬೇಜ್ ಸಿಟಿ ಮಾಡದಿದ್ದರೆ ಸಾಕಪ್ಪಾ ಎಂದು ಜಾರ್ಜ್ ವ್ಯಂಗ್ಯವಾಡಿದ್ದಾರೆ. (ಅಶೋಕ್ ಕಿಂಗ್ ಮೇಕರ್)
ಜನಾದೇಶ ಬಿಜೆಪಿಯ ಪರವಾಗಿದೆ. ನಮ್ಮ ಸರಕಾರದಿಂದ ಬಿಜೆಪಿಗೆ ಎಲ್ಲಾ ರಿತಿಯ ಸಹಕಾರ ದೊರಕಲಿದೆ, ಬಿಜೆಪಿ ಅವಧಿಯಲ್ಲಿ ಬೆಂಗಳೂರು ಇನ್ನಷ್ಟು ಅಭಿವೃದ್ದಿಗೊಳ್ಳಲಿ ಎಂದು ಜಾರ್ಜ್ ಆಶಿಸಿದ್ದಾರೆ.
ಬಿಬಿಎಂಪಿ ಚುನಾವಣೆಯ ಫಲಿತಾಂಶದ ದಿನ ವಿದ್ಯಾವಂತ ಮತದಾರರ ವಿರುದ್ದ ಕಿಡಿಕಾರಿದ್ದ ಡಿಕೆಶಿ..
ಕೆ ಜೆ ಜಾರ್ಜ್ ಹೇಳಿಕೆ
ಅಭಿವೃದ್ದಿ ವಿಚಾರ ಮತ್ತು ಜನಕಲ್ಯಾಣ ವಿಚಾರದಲ್ಲಿ ನಾವು ರಾಜಕೀಯ ಮಾಡಿದವರಲ್ಲ. ಅಭಿವೃದ್ದಿ ವಿಚಾರಗಳಲ್ಲಿ ನಮ್ಮ ಬೆಂಬಲ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ಬಿಬಿಎಂಪಿಯ ಬಿಜೆಪಿ ಆಡಳಿತಕ್ಕೆ ಇದ್ದೇ ಇರುತ್ತೆ.
ನಾನೂ ಸೋಲಿನ ಹೊಣೆ ಹೊರುತ್ತೇನೆ
ಸಿಎಂ, ನಾನು, ನಗರದ ಮತ್ತೆ ಮೂರು ಸಚಿವರು ಬಿಬಿಎಂಪಿ ಉಸ್ತುವಾರಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದೆವು. ಸೋಲಿನ ಹೊಣೆಯನ್ನು ಸಿಎಂ ಒಬ್ಬರೇ ಅಲ್ಲ ನಾವೆಲ್ಲಾ ವಹಿಸಿಕೊಳ್ಳುತ್ತೇವೆ ಎಂದು ಜಾರ್ಜ್ ಹೇಳಿದ್ದಾರೆ.
ಫಲಿತಾಂಶದ ದಿನ ಡಿಕೆಶಿ ಪ್ರತಿಕ್ರಿಯೆ
ಬಿಬಿಎಂಪಿ ಚುನಾವಣೆಯ ದಿನ ಸೋಲಿನ ಬಗ್ಗೆ ಪ್ರತಿಕ್ರಿಯಿಸುತ್ತಾ ಇಂಧನ ಸಚಿವ ಶಿವಕುಮಾರ್, ನಮ್ಮ ನಿರೀಕ್ಷೆಯಂತೆ ಫಲಿತಾಂಶ ಬರಲಿಲ್ಲ. ನಮ್ಮ ಸೋಲಿಗೆ ಕಾರಣವೇನು ಎನ್ನುವುದನ್ನು ಪರಾಮರ್ಶಿಸಿ ಕೊಳ್ಳುತ್ತೇವೆ ಎಂದು ಡಿಕೆಶಿ ಪ್ರತಿಕ್ರಿಯಿಸಿದ್ದರು.
ವಿದ್ಯಾವಂತ ಮತದಾರರ ವಿರುದ್ದ ಕಿಡಿಕಾರಿದ್ದ ಡಿಕೆಶಿ
ನಮ್ಮ ಸೋಲನ್ನು ನಾವು ಒಪ್ಪಿಕೊಳ್ಳುತ್ತೇವೆ. ಬೆಂಗಳೂರು ಅಭಿವೃದ್ದಿಗೆ ನಾವು ಸಾಕಷ್ಟು ಹಣ ಬಿಡುಗಡೆ ಮಾಡಿದ್ದೇವೆ. ವಿದ್ಯಾವಂತ ಮತದಾರರು ಮತಗಟ್ಟೆಯತ್ತ ಬರಲಿಲ್ಲ. ಇನ್ಮುಂದೆಯಾದರೂ ವಿದ್ಯಾವಂತ ಮತದಾರರು ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳಲಿ. ಅವರು ಯಾವ ಪಕ್ಷಕ್ಕಾದರೂ ವೋಟ್ ಮಾಡಲಿ, ಅವರಿಗೆ ಮತ ಚಲಾಯಿಸುವ ಸದ್ಬುದ್ದಿಯನ್ನು ದೇವರು ಕೊಡಲಿ ಎಂದು ಬೇಸರವಾಗಿ ಡಿಕೆಶಿ ನುಡಿದಿದ್ದರು.
ಕುಮಾರಸ್ವಾಮಿ ಕೂಡಾ ಬೇಸರ
ಇನ್ನಷ್ಟು ಭ್ರಷ್ಟಾಚಾರ ನಡೆಸಲಿ ಎಂದು ಬೆಂಗಳೂರಿನ ಮತದಾರ ಜನಾದೇಶ ನೀಡಿದ್ದಾನೆ. ಬಿಬಿಎಂಪಿ ಚುನಾವಣೆ ನನಗೆ ಹಲವು ಪಾಠವನ್ನು ಕಲಿಸಿದೆ. ನಮ್ಮದು ಏನಿದ್ದರೂ ಗ್ರಾಮೀಣ ಪಕ್ಷ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ್ದರು.