ಚಿನ್ನದ ಹುಡುಗಿ ನಿಶಾಗೆ ಗ್ರಾಮೀಣ ವೈದ್ಯೆಯಾಗುವಾಸೆ
ಬೆಂಗಳೂರು, ಏಪ್ರಿಲ್ 16 : ವೈದ್ಯರು ಗ್ರಾಮೀಣ ಪ್ರದೇಶದಲ್ಲಿ ಸೇವೆ ಸಲ್ಲಿಸಲು ಹಿಂಜರಿಯುತ್ತಿರುವ ಈ ದಿನಗಳಲ್ಲಿ ಈ ಚಿನ್ನದ ಹುಡುಗಿ ಗ್ರಾಮೀಣ ಭಾಗದ ಸೇವೆಗೆ ತನ್ನನ್ನು ಮುಡುಪಾಗಿಸುವ ದಿಟ್ಟತನ ಪ್ರದರ್ಶಿಸಿದ್ದಾಳೆ.
ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ 10 ಚಿನ್ನದ ಪದಕ ಪಡೆದ ನಿಶಾ ಬಿ. ಜೈನ್ಗೆ ಗ್ರಾಮೀಣ ಸೇವೆ ಮಾಡುವ ಹೆಬ್ಬಯಕೆ. ಕೆಂಪೇಗೌಡ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್(ಕಿಮ್ಸ್)ನ ವಿದ್ಯಾರ್ಥಿನಿ ನಿಶಾ ಬಿ.ಜೈನ್ ರನ್ನು ಕಾಲೇಜಿನಲ್ಲಿ ಸನ್ಮಾನಿಸಲಾಯಿತು.
ಆಕೆಯನ್ನು ಸನ್ಮಾನಿಸಿದ ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ, "ಸಮಾಜಕ್ಕೆ ಬೆಳಕು ಚೆಲ್ಲಲು ಉತ್ಸಾಹಿಗಳಾಗಿರುವ ನಿಶಾರಂತಹ ವಿದ್ಯಾರ್ಥಿಗಳು ನಮಗೆ ಅಗತ್ಯ. ಈ ವಿದ್ಯಾರ್ಥಿನಿ 10 ಚಿನ್ನದ ಪದಕಗಳನ್ನು ಗೆಲ್ಲುವ ಮೂಲಕ ಕಿಮ್ಸ್ನ ಹೆಮ್ಮೆಯಾಗಿರುವುದಲ್ಲದೆ ಗ್ರಾಮೀಣ ಪ್ರದೇಶಕ್ಕೆ ಸೇವೆ ಸಲ್ಲಿಸುವ ಮಹತ್ವಾಕಾಂಕ್ಷೆ ಹೊಂದಿರುವುದು ನಿಜಕ್ಕೂ ಶ್ಲಾಘನೀಯ" ಎಂದರು.
ನಿಶಾ ಸಾವಿರಾರು ಮಂದಿ ವೈದ್ಯರಿಗೆ ಮಾದರಿಯಾಗಲಿ ಎಂಬ ದೃಷ್ಟಿಯಿಂದ ಸನ್ಮಾನಿಸುತ್ತಿದ್ದೇವೆ. ಅವರು ನಿಶಾ ಹೆಜ್ಜೆಗುರುತನ್ನು ಅನುಸರಿಸಿದರೆ ಗ್ರಾಮೀಣ ಪ್ರದೇಶದಲ್ಲಿ ವೈದ್ಯರ ಕೊರತೆಯೇ ಉಂಟಾಗದು ಮತ್ತು ಬಡ ಹಾಗೂ ದುರ್ಬಲ ವರ್ಗದವರಿಗೆ ಚಿಕಿತ್ಸೆಯನ್ನು ನೀಡಲು ಸಾಧ್ಯ ಎಂದು ಅಪ್ಪಾಜಿಗೌಡ ಆಶಾಭಾವನೆ ವ್ಯಕ್ತಪಡಿಸಿದರು.
ನಿಶಾ ತನ್ನ ಕುಟುಂಬದಲ್ಲಿ ಮೊದಲ ವೈದ್ಯೆ. ನಾಗರಿಕ ಸೇವೆಗೆ ಹೋಗುವ ಮನಸ್ಸಿದ್ದರೂ ವೈದ್ಯೆಯಾಗುವ ಬಯಕೆಯಿಂದ ಅದನ್ನು ಪಕ್ಕಕ್ಕೆ ಸರಿಸಿದರು. ಈ ಕುರಿತು ನಿಶಾ, ಕೋರ್ಸ್ನ ಮೊದಲ ದಿನದಿಂದಲೂ ಕೇಂದ್ರೀಕರಿಸುವ ಮೂಲಕ ಗರಿಷ್ಠ ಪದಕಗಳನ್ನು ಪಡೆಯಲು ಸಾಧ್ಯವಾಯಿತು' ಎಂದರು.
ನಿಶಾ ಕುರಿತು : ನಿಶಾ ಸರ್ಜರಿ, ಪೆಥಾಲಜಿ, ಅನಾಟಮಿ ವಿಷಯಗಳಲ್ಲಿ ಶ್ರೇಷ್ಠತೆ ಸಾಧಿಸಿದ್ದಾರೆ. ದಿನಕ್ಕೆ ಮೂರು ಗಂಟೆಗಿಂತಲೂ ಹೆಚ್ಚು ಅಧ್ಯಯನ ನಡೆಸುತ್ತಿರಲಿಲ್ಲ. ಬಿಡುವಿನ ಸಮಯದಲ್ಲಿ ಆಸ್ಪತ್ರೆಯ ರೋಗಿಗಳೊಂದಿಗೆ ಕಾಲ ಕಳೆಯುತ್ತಾ ವೈದ್ಯರ ಪ್ರಾಯೋಗಿಕ ಸಮಸ್ಯೆಗಳನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದು ಉನ್ನತ ಅಂಕಗಳನ್ನು ಗಳಿಸಲು ಸಾಧ್ಯವಾಯಿತು.
ನಿಶಾ ತನ್ನ ಶಾಲಾ ದಿನಗಳಿಂದಲೂ ಅತ್ಯುತ್ತಮ ವಿದ್ಯಾರ್ಥಿನಿ. ಎಸ್ಎಸ್ಎಲ್ಸಿಯಲ್ಲಿ ತುಮಕೂರು ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಏಳನೇ ಶ್ರೇಯಾಂಕ ಪಡೆದಿದ್ದರು. ಆರೋಗ್ಯ ಕುರಿತಾದ ಪತ್ರಿಕಾ ಬರಹಗಳನ್ನು ಓದುವುದು ಮತ್ತು ಇಂಟರ್ನೆಟ್ ಮೂಲಕ ಆರೋಗ್ಯದ ಲೇಖನಗಳನ್ನು ಓದುವುದು ಆಕೆಯ ನೆಚ್ಚಿನ ಹವ್ಯಾಸವಾಗಿತ್ತು.
"ಮಾನವಕುಲಕ್ಕೆ ಸೇವೆ ಸಲ್ಲಿಸುವುದು ನನ್ನ ಗುರಿ. ಇದು ವೈದ್ಯರಿಂದ ಮಾತ್ರ ಸಾಧ್ಯ. ಆದ್ದರಿಂದ ನಾನು ಈ ಘನ ವೃತ್ತಿಯನ್ನು ಆಯ್ಕೆ ಮಾಡಿಕೊಂಡೆ" ಎಂದು ಸನ್ಮಾನ ಸ್ವೀಕರಿಸಿದ ನಂತರ ನಿಶಾ ತಮ್ಮ ಆಸೆಯನ್ನು ವ್ಯಕ್ತಪಡಿಸಿದರು.
ರಾಜ್ಯ ಒಕ್ಕಲಿಗ ಸಂಘದ ಅಧ್ಯಕ್ಷ ಡಾ.ಅಪ್ಪಾಜಿಗೌಡ, ಕಾರ್ಯಾಧ್ಯಕ್ಷ ಎಂ.ಎ.ಆನಂದ್, ಆಂತರಿಕ ಲೆಕ್ಕ ಪರಿಶೋಧಕ ವೆಂಕಟೇಶ್, ನಿರ್ದೇಶಕರಾದ ಕಾಳೇಗೌಡ, ಜಟ್ಟೇನಹಳ್ಳಿ ರಾಮಚಂದ್ರ, ಡಾ.ಬೊಮ್ಮಯ್ಯ, ಕಿಮ್ಸ್ ಪ್ರಾಂಶುಪಾಲ ಡಾ.ಚಂದ್ರೇಗೌಡ ಮತ್ತು ಬಿಐಟಿ ಅಧ್ಯಕ್ಷ ಡಾ.ನಟರಾಜ್ ಉಪಸ್ಥಿತರಿದ್ದರು.