Vande Bharat; ಕರ್ನಾಟಕಕ್ಕೆ 10 ವಂದೇ ಭಾರತ್ ರೈಲು, ಮಾರ್ಗಗಳು
ಬೆಂಗಳೂರು, ಸೆಪ್ಟೆಂಬರ್ 04; ಭಾರತೀಯ ರೈಲ್ವೆಯ ಸೆಮಿ-ಹೈ ಸ್ಪೀಡ್ ರೈಲು ವಂದೇ ಭಾರತ್ ಎಕ್ಸ್ಪ್ರೆಸ್ಗೆ ಭಾರೀ ಬೇಡಿಕೆ ಇದೆ. ಕರ್ನಾಟಕದಲ್ಲಿ ಸದ್ಯ ಎರಡು ಮಾರ್ಗದಲ್ಲಿ ರೈಲುಗಳು ಓಡುತ್ತಿವೆ. ಇನ್ನೂ ಹಲವು ಮಾರ್ಗದಲ್ಲಿ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಈ ಕುರಿತು ರೈಲ್ವೆ ಇಲಾಖೆ ಹೊರಡಿಸಿರುವ ಸುತ್ತೋಲೆ ಈಗ ವೈರಲ್ ಆಗಿದೆ.
ನೈಋತ್ಯ ರೈಲ್ವೆ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಓಡಿಸಲು ಬೇಕಾದ ಮೂಲಸೌಕರ್ಯ ಒದಗಿಸಲು ಹೊರಡಿಸಿರುವ ಸುತ್ತೋಲೆ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದರಲ್ಲಿ ಕರ್ನಾಟಕದಲ್ಲಿ 10 ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಲಾಗುತ್ತದೆ ಎಂಬ ಮಾಹಿತಿ ಇದೆ.

2022ರ ನವೆಂಬರ್ನಲ್ಲಿ ರಾಜ್ಯದ ಮೊದಲ ವಂದೇ ಭಾರತ್ ರೈಲು ಮೈಸೂರು- ಬೆಂಗಳೂರು ಮತ್ತು ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ಆರಂಭವಾಯಿತು. 2023ರಲ್ಲಿ ಧಾರವಾಡ-ಬೆಂಗಳೂರು ವಯಾ ಹುಬ್ಬಳ್ಳಿ ನಡುವೆ 2ನೇ ವಂದೇ ಭಾರತ್ ಸಂಚಾರ ಆರಂಭಿಸಿತು. ಎರಡೂ ರೈಲುಗಳಿಗೂ ಉತ್ತಮ ಪ್ರತಿಕ್ರಿಯೆ ಇದೆ.
ಬೆಂಗಳೂರು-ಮಂಗಳೂರು, ಬೆಂಗಳೂರು-ಶಿವಮೊಗ್ಗ, ಬೆಂಗಳೂರು-ಬೆಳಗಾವಿ ಹೀಗೆ ಕರ್ನಾಟಕದಲ್ಲಿ ಹೊಸ ಮಾರ್ಗದಲ್ಲಿ ವಂದೇ ಭಾರತ್ ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ. ಆದರೆ ಈ ಕುರಿತು ರೈಲ್ವೆ ಇಲಾಖೆ ಇದುವರೆಗೂ ಯಾವುದೇ ಮಾಹಿತಿ ಕೊಟ್ಟಿರಲಿಲ್ಲ. ಈಗ ಸೊತ್ತೋಲೆ ವೈರಲ್ ಆಗಿದ್ದು, ಕರ್ನಾಟಕಕ್ಕೆ ಹೊಸ ರೈಲು ಸಿಗುವ ಭರವಸೆ ಮೂಡಿದೆ.
ಯಾವ-ಯಾವ ಮಾರ್ಗ?; 19/7/2023ರಂದು ನಡೆದ ಸಭೆಯಲ್ಲಿ ಕರ್ನಾಟಕದಲ್ಲಿ ಹೊಸ ವಂದೇ ಭಾರತ್ ರೈಲು ಓಡಿಸುವ ಕುರಿತು ಚರ್ಚೆ ನಡೆದಿದೆ. ಆದ್ದರಿಂದ ಈ ಮಾರ್ಗದಲ್ಲಿ ರೈಲು ಓಡಿಸಲು ಮೂಲ ಸೌಕರ್ಯ ಅಭಿವೃದ್ಧಿಗೊಳಿಸಬೇಕು ಎಂದು ನೈಋತ್ಯ ರೈಲ್ವೆ ಸುತ್ತೋಲೆಯಲ್ಲಿ ಹೇಳಿದೆ. 10 ಮಾರ್ಗಗಳು ಹೀಗಿವೆ.
1. ಬೆಂಗಳೂರು-ಬೆಳಗಾವಿ
2. ಬೆಂಗಳೂರು-ಹೊಸಪೇಟೆ
3. ಬೆಂಗಳೂರು-ಕಾಚಿಗುಡ
4. ಬೆಂಗಳೂರು-ಕೊಯಮತ್ತೂರು
5. ಬೆಂಗಳೂರು-ತಿರುಪತಿ
6. ಬೆಂಗಳೂರು-ಮುಧುರೈ
7. ಬೆಂಗಳೂರು-ಪುದುಚೇರಿ
8. ಬೆಂಗಳೂರು-ಕಲಬುರಗಿ
9. ಬೆಂಗಳೂರು-ಶಿವಮೊಗ್ಗ
10. ಬೀದರ್-ಹುಬ್ಬಳ್ಳಿ
ಈ 10 ಮಾರ್ಗಗಳ ಪೈಕಿ ಕೆಲವು ಮಾರ್ಗಗಳಲ್ಲಿ ನೈಋತ್ಯ ರೈಲ್ವೆ ವಂದೇ ಭಾರತ್ ರೈಲು ಓಡಿಸಲಿದೆ. ಉಳಿದ ಮಾರ್ಗದಲ್ಲಿ ದಕ್ಷಿಣ ಮಧ್ಯ ರೈಲ್ವೆ ರೈಲುಗಳನ್ನು ಓಡಿಸಲಿದೆ. ಬೆಂಗಳೂರು-ಕಾಚಿಗುಡ ಮಾರ್ಗದಲ್ಲಿ ರೈಲು ಓಡಿಸಲು ಬೇಕಾದ ಅಗತ್ಯ ಸೌಲಭ್ಯಗಳಿವೆ. ಕೆಲವು ಮಾರ್ಗದಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೊಳಿಸಬೇಕಿದೆ.
ಸದ್ಯ ರೈಲ್ವೆ ಇಲಾಖೆ 16 ಮತ್ತು 8 ಬೋಗಿಯ ವಂದೇ ಭಾರತ್ ರೈಲುಗಳನ್ನು ಓಡಿಸುತ್ತಿದೆ. ವಂದೇ ಭಾರತ್ ರೈಲುಗಳನ್ನು ಚೆನ್ನೈನ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ತಯಾರು ಮಾಡಲಾಗುತ್ತದೆ. ಈಗ ಕೇಸರಿ ಬಣ್ಣದ ರೈಲನ್ನು ತಯಾರು ಮಾಡಿದ್ದು, ಅದು ಪ್ರಾಯೋಗಿಕ ಸಂಚಾರವನ್ನು ನಡೆಸುತ್ತಿದೆ. ಕೆಲವೇ ದಿನಗಳಲ್ಲಿ ಇವು ಸಂಚಾರ ಆರಂಭಿಸಲಿವೆ.
ಕರ್ನಾಟಕದಲ್ಲಿ ಪ್ರಸ್ತಾವಿತ ಮಾರ್ಗಗಳಲ್ಲಿ ಕೆಲವು ಮಾರ್ಗದಲ್ಲಿ ದೀಪಾವಳಿ ವೇಳೆಗೆ ರೈಲು ಓಡಬಹುದು ಎಂಬ ನಿರೀಕ್ಷೆ ಇದೆ. ಕೇರಳದಿಂದ ಸಂಚಾರ ನಡೆಸುವ ರೈಲುಗಳು ರಾಜ್ಯದ ಕರಾವಳಿ ಮಂಗಳೂರು ತನಕ ವಿಸ್ತರಣೆಯಾಗಲಿದೆ. ಮಂಗಳೂರು ಸೆಂಟ್ರಲ್ ರೈಲು ನಿಲ್ದಾಣದಲ್ಲಿ ವಂದೇ ಭಾರತ್ ರೈಲುಗಳ ನಿರ್ವಹಣೆಗೆ ಅಗತ್ಯ ಮೂಲ ಸೌಕರ್ಯಗಳ ವ್ಯವಸ್ಥೆಯನ್ನು ಮಾಡಲಾಗುತ್ತಿದೆ.
ರಾಜ್ಯದಲ್ಲಿ ಸದ್ಯ ಓಡುತ್ತಿರುವ ಮೈಸೂರು-ಬೆಂಗಳೂರು-ಚೆನ್ನೈ ಮತ್ತು ಧಾರವಾಡ-ಬೆಂಗಳೂರು ವಯಾ ಹುಬ್ಬಳ್ಳಿ ವಂದೇ ಭಾರತ್ ರೈಲಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ರೈಲಿನ ಶೇ 80ರಷ್ಟು ಸೀಟುಗಳು ಭರ್ತಿಯಾಗುತ್ತಿವೆ. ಬೆಂಗಳೂರು ನಗರದಿಂದ ರಾಜ್ಯದ ಇತರ ನಗರಗಳಿಗೆ ವಂದೇ ಭಾರತ್ ಓಡಿಸಬೇಕು ಎಂಬ ಬೇಡಿಕೆ ಇದೆ.
ಜುಲೈ ತಿಂಗಳಿನಲ್ಲಿ ರೈಲ್ವೆ ಸಚಿವಾಲಯದ ಸಭೆಯಲ್ಲಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಿಗೆ ಇರುವ ಬೇಡಿಕೆ ಕುರಿತು ಚರ್ಚೆಗಳು ನಡೆದಿದ್ದವು. ಆಗ ಹಲವು ಹೊಸ ಮಾರ್ಗದಲ್ಲಿ ರೈಲು ಓಡಿಸಲು ಚಿಂತನೆ ನಡೆದಿತ್ತು. ಆದ್ದರಿಂದ ಸಚಿವಾಲಯ ಎಲ್ಲಾ ವಲಯಗಳ ಮ್ಯಾನೇಜರ್ಗಳಿಗೆ ಯಾವ-ಯಾವ ಹೊಸ ಮಾರ್ಗದಲ್ಲಿ ರೈಲು ಓಡಿಸಬಹುದು ಎಂದು ವಿವರವಾದ ಸಮೀಕ್ಷೆಯನ್ನು ಮಾಡಿ ವರದಿ ಕೊಡಿ ಎಂದು ಸೂಚನೆ ನೀಡಿತ್ತು.












Click it and Unblock the Notifications