Bike Trip From Bengaluru: ಬೈಕ್ನಲ್ಲಿ ಹೋಗಿ ಬರಬಹುದಾದದ ಸುಂದರ ಪ್ರವಾಸಿ ತಾಣಗಳು
ಮುಂಗಾರು ಆರಂಭವಾಗಿದೆ, ಕೆಲವರಿಗೆ ಕಾರಿನಲ್ಲಿ ಕೂತು ಮಳೆಯನ್ನು ಆಸ್ವಾದಿಸುತ್ತಾ ಪ್ರಯಾಣ ಮಾಡುವುದು ಹಿತವಾದರೆ ಇನ್ನೂ ಕೆಲವರಿಗೆ ಜಿಟಿ ಜಿಟಿ ಮಳೆಯಲ್ಲಿ ಬೈಕ್ನಲ್ಲಿ ಪ್ರಯಾಣ ಮಾಡುವುದು ಒಂಥರಾ ಖುಷಿ.
ಬೆಂಗಳೂರಿನ ಮಂದಿಗೆ ವೀಕೆಂಡ್ನಲ್ಲಿ ಎಲ್ಲಾದರೂ ಒಂದು ರೌಂಡ್ ಹಾಕಿ ಬರಬೇಕು ಎಂದರೆ ಎಲ್ಲಿಗೆ ಹೋಗುವುದು ಎನ್ನುವ ಪ್ರಶ್ನೆ ಮೂಡುತ್ತದೆ. ಬೆಂಗಳೂರು ಮಾತ್ರವಲ್ಲದೆ, ಮೈಸೂರು, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮಂಡ್ಯ, ರಾಮನಗರ ಜಿಲ್ಲೆಯವರು ಕೂಡ ತಮ್ಮ ಸಂಗಾತಿಯೊಂದಿಗೋ ಇಲ್ಲವೇ ಸ್ನೇಹಿತರೊಂದಿಗೋ ಈ ಪ್ರವಾಸಿ ತಾಣಗಳಿಗೆ ಬೈಕ್ನಲ್ಲೇ ಹೋಗಿಬರಬಹುದು.

1) ಮೇಕೆದಾಟು
ಬೆಂಗಳೂರಿನಿಂದ ಅಂದಾಜು 101 ಕಿಮೀ ದೂರದಲ್ಲಿರುವ ಒಂದು ಸುಂದರ ಪ್ರವಾಸಿ ತಾಣ. ಬೆಂಗಳೂರಿನಿಂದ ಅಂದಾಜು 2.35 ಗಂಟೆಯ ಪ್ರಯಾಣ ನಿಮಗೆ ಉತ್ತಮ ಅನುಭವ ಕೊಡುತ್ತದೆ. ಕನಕಪುರ ತಾಲೂಕಿನ ಒಂದು ಸಣ್ಣ ಹಳ್ಳಿ ಮೇಕೆದಾಟು, ಕಾವೇರಿ ನದಿಯ ದಂಡೆಯಲ್ಲಿ ಕಾಲ ಕಳೆಯಲು ಹೇಳಿ ಮಾಡಿಸಿದ ಸ್ಥಳ.
ಮುಂಜಾನೆಯೇ ಬೈಕ್ನಲ್ಲಿ ಪ್ರಯಾಣ ಮಾಡುವುದರಿಂದ ಹಾದಿಯಲ್ಲಿ ಹಳ್ಳಿಯ ಬದುಕು, ಸೋರ್ಯೋದಯ, ರಸ್ತೆಯ ಬದಿಯ ಚಹಾವನ್ನು ಆಸ್ವಾದಿಸಬಹುದು. ಸಣ್ಣಗೆ ಜಿಟಿ ಜಿಟಿ ಮಳೆಯಾಗುತ್ತಿದ್ದರೆ, ನೀವೇನಾದ್ರು ಮಳೆಯನ್ನು ಇಷ್ಟಪಡುವವರು ಆದರೆ ಅದು ಇನ್ನಷ್ಟು ಮುದ ನೀಡುತ್ತದೆ.
ಮೇಕೆದಾಟುವಿಗೆ ತೆರಳುವ ಮಾರ್ಗದಲ್ಲಿ ನೀವು ಚುಂಚಿ ಜಲಪಾತ, ಕಾವೇರಿ ವನ್ಯಜೀವಿ ಅಭಯಾರಣ್ಯವನ್ನು ನೋಡಬಹುದಾಗಿದೆ. ನೀವು ಎಲ್ಲಿಯೇ ಹೋದರು ಸ್ಥಳೀಯ ಆಹಾರದ ರುಚಿ ನೋಡುವುದನ್ನು ಮರೆಯಬೇಡಿ.

2) ಚಾರಣಿಗರ ಸ್ವರ್ಗ ಅವಲ ಬೆಟ್ಟ
ನಂದಿ ಬೆಟ್ಟ ಬೆಂಗಳೂರಿಗರ ಅಚ್ಚುಮೆಚ್ಚಿನ ಪ್ರವಾಸಿ ತಾಣ, ವಾರಾಂತ್ಯದಲ್ಲಿ ಪ್ರವಾಸಿಗರಿಂದ ತುಂಬಿ ತುಳುಕುತ್ತದೆ. ಆದರೆ ಕಡಿಮೆ ಪ್ರವಾಸಿಗರನ್ನು ಹೊಂದಿರುವ ಅಂತಹದ್ದೇ ಮತ್ತೊಂದು ಪ್ರವಾಸಿ ತಾಣ ಅವಲಬೆಟ್ಟ. ಬೆಂಗಳೂರಿನಿಂದ 92 ಕಿಮೀ ದೂರವಿದ್ದು, ಪ್ರಯಾಣದ ಅವಧಿ 1.50 ಗಂಟೆಗಳಾಗಿದೆ.
ಚಾರಣಪ್ರಿಯರಿಗೆ ಇದು ಸ್ವರ್ಗ, ಬೆಟ್ಟಗಳ ರಚನೆಯೇ ನಿಮ್ಮನ್ನು ಆಕರ್ಷಿಸುತ್ತದೆ. ಅವಲಬೆಟ್ಟದ ತುದಿಯಲ್ಲಿ ಪ್ರಾಚೀನ ಲಕ್ಷ್ಮಿ ನರಸಿಂಹ ದೇವಾಲಯವಿದೆ. ಸ್ಥಳೀಯರ ಜೊತೆ ಮಾತನಾಡಿದರೆ ಇಲ್ಲಿನ ಸ್ಥಳಪುರಾಣದ ಬಗ್ಗೆ ಆಸಕ್ತಿಕರ ಮಾಹಿತಿಗಳನ್ನು ತಿಳಿಯಬಹುದು.
ಇಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತ ಎರಡನ್ನೂ ಸವಿಯಬಹುದು, ಅದರಲ್ಲೂ ಈ ಬೆಟ್ಟದ ತುದಿಯಲ್ಲಿ ನಿಂತು ಸೂರ್ಯೋದಯ ನೋಡುವುದು ಮನಸ್ಸಿಗೆ ಹೆಚ್ಚಿನ ಖುಷಿ ಕೊಡುತ್ತದೆ. ಪ್ರಯಾಣದ ಹಾದಿಯಲ್ಲಿ ನೀವು ಬೀಕ್ ರಾಕ್, ಬೆಟ್ಟದ ಕೊಳ, ಗುಡಿಬಂಡೆ ಕೋಟೆ, ದಂಡಿಗನಹಳ್ಳಿ ಅಣೆಕಟ್ಟು, ಶ್ರೀನಿವಾಸ ಸಾಗರವನ್ನು ನೋಡಿಕೊಂಡು ಬರಬಹುದು.

3) ಕಾಫಿನಾಡ ಸ್ವರ್ಗ ಸಕಲೇಶಪುರ
ಬೆಂಗಳೂರಿನಿಂದ 222 ಕಿಲೋ ಮೀಟರ್ ದೂರವಿರುವ ಸಕಲೇಶಪುರ ಪ್ರವಾಸಿಗರಿಗೆ ಸ್ವರ್ಗವೇ ಸರಿ, 4 ಗಂಟೆಗಳಲ್ಲಿ ನೀವು ಈ ಸುಂದರ ಊರನ್ನು ತಲುಪಬಹುದು. ಎಲ್ಲಿ ನೋಡಿದರು ಹಸಿರು, ಹಾಲ್ನೊರೆಯಂತೆ ಹರಿಯುವ ಝರಿಗಳು, ಕಾಫಿ, ಏಲಕ್ಕಿ, ಮೆಣಸು ಮತ್ತು ಅಡಿಕೆ ತೋಟಗಳು ಮನಸ್ಸಿಗೆ ಖುಷಿ ಕೊಡುತ್ತವೆ.
ವರ್ಷದ ಎಲ್ಲಾ ಸಮಯದಲ್ಲಿ ಇಲ್ಲಿಗೆ ಪ್ರಯಾಣ ಮಾಡಬಹುದಾದರು ಮಳೆಗಾಲ ಇಲ್ಲಿ ಸ್ವರ್ಗದಂತೆ ಇರುತ್ತದೆ. ಸಕಲೇಶಪುರ ಬೆಟ್ಟದ ತುದಿಗೆ ಟ್ರೆಕ್ಕಿಂಗ್ ಮಾಡಿದರೆ ಮರೆಲಯಾಗದ ನೋಟವನ್ನು ಸೆರೆಹಿಡಿಯಬಹುದು. ಮಂಜರಾಬಾದ್ ಕೋಟೆ, ಸಕಲೇಶ್ವರ ದೇವಸ್ಥಾನ, ಲೇಕ್ ಪಾರ್ಕ್, ಅಗ್ನಿ ಗುಡ್ಡ ಬೆಟ್ಟಗಳಿಗೆ ಭೇಟಿ ನೀಡುವುದನ್ನು ತಪ್ಪಿಸಬೇಡಿ.

4) ಕುಂತಿ ಬೆಟ್ಟ
ಚಾರಣಿಗರಿಗೆ ಹೇಳಿ ಮಾಡಿಸಿದ ಸ್ಥಳ ಮಂಡ್ಯ ಜಿಲ್ಲೆಯ ಕುಂತಿಬೆಟ್ಟ, ಬೆಂಗಳೂರಿನಿಂದ ಸುಮಾರು 123 ಕಿಮೀ ದೂರದಲ್ಲಿದೆ. 3 ಗಂಟೆಗಳಲ್ಲಿ ಬೆಂಗಳೂರಿನಿಂದ ಇಲ್ಲಿಗೆ ತಲುಪಬಹುದಾಗಿದೆ. ಈ ಬೆಟ್ಟ ಸಮುದ್ರ ಮಟ್ಟದಿಂದ ಸುಮಾರು 2882 ಮೀಟರ್ ಎತ್ತರದಲ್ಲಿದೆ.
4 ಕಿಲೋಮೀಟರ್ ಚಾರಣ ಮಾಡಿದ ಬಳಿಕ ಬೆಟ್ಟದ ತುದಿಯನ್ನು ತಲುಪಬಹುದಾಗಿದೆ. ದೇಹಕ್ಕೆ ಉತ್ತಮ ವ್ಯಾಯಾಮದ ಜೊತೆಗೆ ಬೆಟ್ಟದ ತುದಿ ತಲುಪಿದ ಬಳಿಕ ಬೀಸುವ ತಂಗಾಳಿ ನಿಮ್ಮ ಮನಸ್ಸಿಗೂ-ದೇಹಕ್ಕೂ ಮುದ ನೀಡುತ್ತದೆ. ಸೂರ್ಯೋದಯ ಇಲ್ಲಿ ಅದ್ಭುತವಾಗಿರುತ್ತದೆ. ಇಲ್ಲಿನ ಪಾಂಡವಪುರ ಕೆರೆಯನ್ನೂ ನೋಡಿಕೊಂಡು ಬರಬಹುದು.

5) ಭೀಮೇಶ್ವರಿ
ಪಕ್ಷಿಪ್ರಿಯರಿಗೆ ಅತಿ ಇಷ್ಟವಾಗುವ ಸ್ಥಳ ಭೀಮೇಶ್ವರಿ, ಬೆಂಗಳೂರಿನಿಂದ 113 ಕಿಲೋ ಮೀಟರ್ ದೂರದಲ್ಲಿದ್ದು, 3 ಗಂಟೆ ಬೈಕ್ನಲ್ಲಿ ಪ್ರಯಾಣಿಸಿದರೆ ಈ ಸ್ಥಳವನ್ನು ತಲುಪಬಹುದಾಗಿದೆ. ಗ್ರಾಮೀಣ ಪ್ರದೇಶ, ವನ್ಯಜೀವಿಗಳಿಗೆ ಇದು ಹೆಸರಾಗಿದೆ.
ವಾರಾಂತ್ಯದ ವಿಹಾರಕ್ಕೆ ಭೇಟಿ ನೀಡಲು ಉತ್ತಮ ಸ್ಥಳವಾಗಿದೆ. ಅಪರೂಪದ ನೀರಿನ ಪಕ್ಷಿಗಳಾದ ಕಪ್ಪು-ಬೆಲ್ಲಿಡ್ ರಿವರ್ ಟರ್ನ್, ಓಸ್ಪ್ರೇ, ಟೌನಿ ಈಗಲ್, ಪೈಡ್ ಕಿಂಗ್ಫಿಶರ್, ಸ್ಪಾಟ್-ಬಿಲ್ಡ್ ಡಕ್, ಮರಕುಟಿಗಗಳು ಮತ್ತು ಇನ್ನೂ ಅನೇಕ ಪಕ್ಷಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಸಾಂಬಾರ್, ಮಚ್ಚೆಯುಳ್ಳ ಜಿಂಕೆಗಳು, ದೈತ್ಯ ಅಳಿಲುಗಳು, ಚಿರತೆಗಳು ಮತ್ತು ಆನೆಗಳನ್ನು ನೋಡಲು ಸಫಾರಿಗೆ ಸಹ ಹೋಗಬಹುದು. ಕಯಾಕಿಂಗ್, ಮೌಂಟೇನ್ ಬೈಕಿಂಗ್, ಕೊರಾಕಲ್ ರೈಡ್ಗಳು, ಮಹಸೀರ್ ಮೀನು ಶಿಕಾರಿ ಕೂಡ ಮಾಡಬಹುದಾಗಿದೆ. ರಿವರ್ಸೈಡ್ ಬೀಚ್, ಗಾನಾಲು ಜಲಪಾತ ಕೂಡ ಇಲ್ಲಿನ ಮತ್ತೊಂದು ಪ್ರಮುಖ ಆಕರ್ಷಣೆಯಾಗಿದೆ.

6) ಕರಿಘಟ್ಟ
ಬೆಂಗಳೂರಿನಿಂದ ಸುಮಾರು 127 ಕಿಮೀ ದೂರವಿದ್ದು, 2.45 ಗಂಟೆ ಬೈಕ್ ಪ್ರಯಾಣದ ಬಳಿಕ ಈ ಸ್ಥಳವನ್ನು ಸೇರಬಹುದು. ಕರಿಘಟ್ಟ ಬೆಟ್ಟವು ಸಮುದ್ರ ಮಟ್ಟದಿಂದ 2976 ಮೀಟರ್ ಎತ್ತರದಲ್ಲಿದೆ. ಇಲ್ಲಿ ಲೋಕಪಾವನಿ ಮತ್ತು ಕಾವೇರಿ ನದಿಯ ಸಂಗಮವಾಗುತ್ತದೆ.
ಕರಿಘಟ್ಟವನ್ನು ಸ್ಥಳೀಯರು ಮತ್ತು ಪ್ರವಾಸಿಗರು ವಾರಾಂತ್ಯದ ವಿಹಾರಕ್ಕೆ ಸ್ಥಳವೆಂದು ಪರಿಗಣಿಸುತ್ತಾರೆ. ಚಾರಣಿಗರಿಗೂ ಇದು ಹೇಳಿ ಮಾಡಿಸಿದ ತಾಣವಾಗಿದೆ. ಪಕ್ಷಿ ಪ್ರಿಯರು, ಏಕಾಂತದಲ್ಲಿ ಕಾಲ ಕಳೆಯುವವರಿಗೂ ಇದು ಉತ್ತಮ ಸ್ಥಳ. ಕರಿಘಟ್ಟ ಶ್ರೀನಿವಾಸ ದೇವಸ್ಥಾನ, ದರಿಯಾ ದೌಲತ್ ಬಾಗ್ ಇಲ್ಲಿನ ಆಕರ್ಷಣೆ.
ನೀವು ಎರಡು ಮೂರು ದಿನಗಳು ಏನಾದರೂ ಪ್ರವಾಸ ಮಾಡಲು ಯೋಜಿಸುತ್ತಿದ್ದರೆ, ಗೋಕರ್ಣ, ಕೊಡಗು, ಊಟಿ, ವಯನಾಡು, ಹಂಪಿ, ಪುದುಚೆರಿ, ಆಗುಂಬೆ, ಕಾರವಾರ, ಗಂಡಿಕೋಟ, ಕೂನೂರು, ದಾಂಡೇಲಿ, ಚಿಕ್ಕಮಗಳೂರು ಪ್ರವಾಸ ಕೈಗೊಳ್ಳಬಹುದು.
(ವಿಶೇಷ ಮನವಿ: ಯಾವುದೇ ಪ್ರವಾಸಿ ತಾಣಗಳು ನಮಗೆ ಸಂತೋಷ ಕೊಡುತ್ತವೆ, ಆದರೆ ನಾವು ಕೂಡ ಜವಾಬ್ದಾರಿಯುತವಾಗಿ ಇರಬೇಕು. ಪ್ರವಾಸಿ ತಾಣಗಳ ಸೌಂದರ್ಯ ಹಾಳುಮಾಡುವುದು, ಪ್ಲಾಸ್ಟಿಕ್ ಬಳಕೆಯನ್ನು ತಪ್ಪಿಸಿ, ಪ್ರಕೃತಿಯನ್ನು ಗೌರವಿಸಿ. ಮಳೆಗಾಲದಲ್ಲಿ ಬೈಕ್ ಸವಾರಿ ಮಾಡುವಾಗ ಎಚ್ಚರಿಕೆಯಿಂದ ಇರಿ.)












Click it and Unblock the Notifications