ಆಭರಣವೆಂದರೆ ಶೀರೂರು ಶ್ರೀಗಳಿಗೆ ಬಲು ಅಚ್ಚು ಮೆಚ್ಚು
Recommended Video

ಉಡುಪಿ, ಜುಲೈ.20: ಶೀರೂರು ಶ್ರೀಗಳೆಂದರೆ ಅವರ ಹಾವ ಭಾವ, ನಡೆ ನುಡಿಗೆ ಹೆಚ್ಚು ಹೆಸರಾದವರು. ಅವರ ಕಟ್ಟುಮಸ್ತಾದ ಶರೀರ, ದಿನನಿತ್ಯದ ಯೋಗ, ಪೂಜೆ - ಪುನಸ್ಕಾರಗಳು, ಒಟ್ಟಿನಲ್ಲಿ ಅವರನ್ನು ನೋಡಿದರೆ ಸಾಕು ಕೈ ಮುಗಿಯಬೇಕೆಂಬ ಮನೋಭಾವ ರೂಢಿಸಿಕೊಂಡವರು.
ಶ್ರೀ ಕೃಷ್ಣನ ಸೇವಕರಾದ ಶ್ರೀಗಳು ಓರ್ವ ಕೊಳಲುವಾದಕ, ಡ್ರಮ್ಸ್ , ಸಂಗೀತ , ಈಜು, ಕರಾಟೆ ಹೀಗೆ ಕೈಯಾಡಿಸಿದ ಕ್ಷೇತ್ರವೇ ಇಲ್ಲ. ಅಲೆಗಳ ವಿರುದ್ಧ ಈಜಿ ದಡ ಸೇರುತ್ತಿದ್ದ ಶ್ರೀಗಳು ಅರಬ್ಬೀ ಸಮುದ್ರದಲ್ಲಿ ಧುಮುಕಿ ದಡ ಸೇರಿದವರಾಗಿದ್ದರು.
ವಿದೇಶದಿಂದ ಬಂದಿದ್ದ ಅನೇಕರಿಗೆ ತಮ್ಮ ಜಲಯೋಗದ ಪಟ್ಟನ್ನು ಸಹ ಹೇಳಿಕೊಟ್ಟಿದ್ದರು ಶ್ರೀಗಳು. ಇಂತಹ ಶ್ರೀಗಳಿಗೆ ಇದ್ದದ್ದು ಒಂದೇ ಒಂದು ಆಸೆ..ದಿನಕ್ಕೊಂದು ತೆರನಾದ ಆಭರಣ ಹಾಗೂ ಸರಗಳನ್ನು ಧರಿಸಿಕೊಳ್ಳುವುದು.
ಹೌದು, ಸಾಮಾನ್ಯವಾಗಿ ಶ್ರೀಗಳ ಎಲ್ಲಾ ಚಿತ್ರಪಟ ಗಮನಿಸಿದರೆ ಮೊದಲು ಕಾಣಸಿಗುವುದೇ ಶ್ರೀಗಳ ವೈಭವೋಪೇತ ಆಭರಣಗಳು. ಅವೆಲ್ಲವೂ ಮುಕ್ಕಾಲುಭಾಗ ಚಿನ್ನದ್ದೇ. ದೊಡ್ಡ - ದೊಡ್ಡ ಪೆಂಡೆಂಟ್ ಮಾದರಿಯಲ್ಲಿ ಸರಗಳನ್ನು ಧರಿಸುತ್ತಿದ್ದ ಶ್ರೀಗಳು ಮಿಕ್ಕೆಲ್ಲಾ ಶ್ರೀಗಳಿಗಿಂತ ಭಿನ್ನ.

ಕೈಗೆ ಖಡ್ಗ, ಉಂಗುರ, ಕುತ್ತಿಗೆಗೆ ಹಾಕುತ್ತಿದ್ದ ದಪ್ಪ -ದಪ್ಪ ಮಣಿಯ ತುಳಸಿ ಹಾರ ಎಲ್ಲರನ್ನೂ ಸೆಳೆಯುವಂತೆ ಮಾಡುತ್ತಿತ್ತು. ಒಮ್ಮೆಲೆ 8 ರಿಂದ 10 ಸರಗಳನ್ನು ಧರಿಸುತ್ತಿದ ಶ್ರೀಗಳಿಗೆ ಹೊಸ ಮಾದರಿಯ ಹಾರಗಳನ್ನು ಮಾಡಿಸಿಕೊಳ್ಳುವಲ್ಲಿ ಹೆಚ್ಚು ಆಸಕ್ತಿ ಹೊಂದಿದ್ದವರು.
ಮಠಕ್ಕೆ ಬೇಕಾದ ಚಿನ್ನಾಭರಣ ಮಾಡಿಕೊಡುವವರ ಬಳಿಯೇ ತಮಗೆ ಬೇಕಾದ ಮಾದರಿಯಲ್ಲಿ ಹೊಸ ವಿನ್ಯಾಸವನ್ನು ನೀಡಿ ಹಾರವನ್ನು ಮಾಡಿಸಿ ಧರಿಸಿಕೊಳ್ಳುತ್ತಿದ್ದರು ಶ್ರೀಗಳು.
ಲಕ್ಷ್ಮೀವರ ತೀರ್ಥರಿಗೆ ನೂತನ ಮಾದರಿಯ ಆಭರಣಗಳ ಜೊತೆ - ಜೊತೆಗೆ ಅದಕ್ಕೆ ಧಾರ್ಮಿಕ ಟಚ್ ನೀಡಿ ಉಡುವಲ್ಲಿನ ಆಸಕ್ತಿ ಬೇರೆಲ್ಲದಕ್ಕಿಂತ ಹೆಚ್ಚು ಸಂತಸಕೊಡುತ್ತಿತ್ತು ಎನ್ನುತ್ತದೆ ಮಠದ ಆಪ್ತವಲಯ.












Click it and Unblock the Notifications