ಸಂಭ್ರಮದ ಪರ್ಯಾಯ ಉತ್ಸವಕ್ಕೆ ಶ್ರೀಕೃಷ್ಣ ಮಠ ಸಜ್ಜು
ಉಡುಪಿ, ಜನವರಿ 15: ಸಂಭ್ರಮದ ಶ್ರೀಕೃಷ್ಣ ಮಠದ ಪರ್ಯಾಯ ಮಹೋತ್ಸವಕ್ಕೆ ಕ್ಷಣಗಣನೆ ಆರಂವಾಗಿದೆ. ಪರ್ಯಾಯದ ಮಹೋತ್ಸವಕ್ಕೆ ಇನ್ನು ಎರಡೇ ದಿನ ಬಾಕಿ ಉಳಿದಿದೆ. ಈ ನಡುವೆ ಕೃಷ್ಣ ಮಠದಲ್ಲಿ ಇಂದು ಚೂರ್ಣೋತ್ಸವ ಸಂಭ್ರಮದಿಂದ ನಡೆಯಿತು.
ಕೃಷ್ಣನ ನಾಡು ಉಡುಪಿಯಲ್ಲಿ ಸಂಕ್ರಾಂತಿ ಸಂಭ್ರಮ ನಿನ್ನೆಯ ದಿನ 3 ರಥಗಳ ಉತ್ಸವ ನಡೆದು ಇಂದು ಬ್ರಹ್ಮ ರಥೋತ್ಸವ ನಡೆಯಿತು. ಕೃಷ್ಣ ಮತ್ತು ಮುಖ್ಯಪ್ರಾಣ ದೇವರ ಉತ್ಸವ ಮೂರ್ತಿಗಳನ್ನು ರಥದಲ್ಲಿ ಕುಳ್ಳಿರಿಸಿ ಮಂಗಳಾರತಿ ಬೆಳಗಿದ ಬಳಿಕ ವಿವಿಧ ಮಠಾಧೀಶರು ಶ್ರೀ ಕೃಷ್ಣನ ಪ್ರಸಾದವನ್ನು ಜನರತ್ತ ಎಸೆದರು. ಇದನ್ನು ತಪ್ಪಂಗಾಯಿ ಅಂತಲೂ ಕರೆಯುತ್ತಾರೆ.
ದೇವರ ಪ್ರಸಾದ ಅಥವಾ ತಪ್ಪಂಗಾಯಿಯನ್ನು ಹಿಡಿಯಲು ಭಕ್ತರು ಮುಗಿ ಬಿದ್ದರು. ಬಳಿಕ ಸಹಸ್ರಾರು ಜನಗಳು ನೋಡುತ್ತದ್ದಂತೆ ರಥಬೀದಿಯಲ್ಲಿ ಬ್ರಹ್ಮ ರಥೋತ್ಸವ ನಡೆಯಿತು. ರಥೋತ್ಸವ ನಡೆದ ಬಳಿಕ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿರಿಸಿ ವಸಂತ ಮಂಟಪದಲ್ಲಿ ಇಟ್ಟು ಚೂರ್ಣೋತ್ಸವ ನಡೆಸಲಾಯಿತು. ನಂತರ ಮಧ್ವ ಸರೋವರದಲ್ಲಿ ಅವಭೃತ ಸ್ನಾನ ನಡೆಯಿತು.
In Pics: ಉಡುಪಿ: ಪಲಿಮಾರು ಶ್ರೀಗಳಿಂದ ಪರ್ಯಾಯ ಪುರ ಪ್ರವೇಶ

ದಾಖಲೆಯ ಪಂಚಮ ಪರ್ಯಾಯದ ಅಂತಿಮ ಕ್ಷಣದಲ್ಲಿರುವ ಪೇಜಾವರ ಯತಿದ್ವಯರು, ಮಂತ್ರಾಲಯ, ಸೋದೆ ಕಾಣಿಯೂರು ಶಿರೂರು ಕೃಷ್ಣಾಪುರ ಶ್ರೀಗಳು ರಥೋತ್ಸವದಲ್ಲಿ ಪಾಲ್ಗೊಂಡರು. ಸಂಕ್ರಾಂತಿ ಉತ್ಸವದ ಮೂಲಕ ಸಪ್ತೋತ್ಸವಕ್ಕೆ ತೆರೆ ಎಳೆಯಲಾಯಿತು. ಇನ್ನು 2 ದಿನಗಳಲ್ಲಿ ಪರ್ಯಾಯ ಉತ್ಸವ ನಡೆಯಲಿದ್ದು ಉಡುಪಿ ಪರಿಸರ ಎಲ್ಲಾ ವಿಧದಿಂದಲೂ ಸಿದ್ಧಗೊಳ್ಳುತ್ತಿದೆ.












Click it and Unblock the Notifications