ಗಂಗಾವತಿಯ ಅಯ್ಯಪ್ಪವ್ರತಧಾರಿಗಳ ಮೇಲೆ ಹಲ್ಲೆ: ಶಾಸಕ ಅನ್ಸಾರಿ ಹೊಣೆ
ಉಡುಪಿ,ಡಿಸೆಂಬರ್. 12 : ಗಂಗಾವತಿಯಲ್ಲಿ ಅಯ್ಯಪ್ಪವ್ರತಧಾರಿಗಳ ಮೇಲೆ ಮತಾಂದರು ಹಲ್ಲೆ ನಡೆಸಿದ್ದಾರೆ. ಇದಕ್ಕೆ ಅಲ್ಲಿನ ಸ್ಥಳೀಯ ಶಾಸಕರು ಕುಮ್ಮಕ್ಕು ನೀಡಿದ್ದಾರೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಆರೋಪಿಸಿದ್ದಾರೆ.
ಈ ಕುರಿತು ಸೋಮವಾರ ಉಡುಪಿ ಶ್ರೀಕೃಷ್ಣ ಮಠದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಅಯ್ಯಪ್ಪವ್ರತಧಾರಿಗಳ ಮೇಲೆ ಮತಾಂದರ ಹಲ್ಲೆಗೆ 10 ಜನರು ಗಾಯಗೊಂಡಿರುವುದು ದುಃಖಕರ ಘಟನೆ. ಇದಕ್ಕೆಲ್ಲ ಸ್ಥಳೀಯ ಶಾಸಕ ಇಕ್ಬಾಲ್ ಅನ್ಸಾರಿಯೇ ನೇರ ಹೊಣೆ ಎಂದರು. [ಮಾಲಾಧಾರಿ ಭಕ್ತರ ಮೇಲೆ ಲಾಠಿ ಚಾರ್ಜ್, ಗಂಗಾವತಿ ಉದ್ವಿಗ್ನ]
ಮುರ್ಡೇಶ್ವರದಲ್ಲಿ ನಡೆಯುತ್ತಿರುವ ಧರ್ಮಸಭೆಯಲ್ಲಿ ಭಾಗವಹಿಸಲು ಅವಕಾಶ ನೀಡದ ಉತ್ತರ ಕನ್ನಡ ಜಿಲ್ಲಾಡಳಿತ ಇದೀಗ ಉತ್ತರ ಕನ್ನಡದಲ್ಲಿ ನನಗೆ ನಿರ್ಬಂಧ ಹೇರಲಾಗಿದೆ.
ಇದು ಹಿಂದೂ ನೇತಾರರನ್ನು ಹತ್ತಿಕ್ಕುವ ಯತ್ನ, ಮಾತನಾಡಲು ಅವಕಾಶ ನೀಡದಂತಹ ಪರಿಸ್ಥಿತಿಯನ್ನು ಕಾಂಗ್ರೆಸ್ ಸರಕಾರ ತಂದೊಡ್ಡಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಮುತಾಲಿಕ್ ಕಿಡಿಕಾರಿದರು.
ಇನ್ನು ಲೈಂಗಿಕರ ಹಗರಣಕ್ಕೆ ಸಂಬಂದಿಸಿದಂತೆ ಅಬಕಾರಿ ಸಚಿವ ಎಚ್.ವೈ.ಮೇಟಿ ಕೂಡಲೇ ರಾಜೀನಾಮೆ ನೀಡಲಿ. ಇಲ್ಲದಿದ್ದರೆ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಪಡೆಯಬೇಕು ಎಂದು ಆಗ್ರಹಿಸಿದರು.
ಇದಲ್ಲದೆ, ಆರ್ಟಿಐ ಕಾರ್ಯಕರ್ತ ರಾಜಶೇಖರ್ರಿಗೆ ಸರಕಾರ ರಕ್ಷಣೆ ನೀಡಬೇಕು. ಕಾರ್ಯಕರ್ತ ರಾಜಶೇಖರ್ ಜೀವಕ್ಕೆ ಅಪಾಯವಾದರೆ ಸರಕಾರವೇ ಅದಕ್ಕೆ ನೇರ ಹೊಣೆಯಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ನೋಟು ಅಮಾನ್ಯಗೊಳಿಸಿರುವುದು ನಿಜಕ್ಕೂ ಅತ್ಯಂತ ಕ್ರಾಂತಿಕಾರಿಯಾದುದು. ಇದರಿಂದ ಸಮಾನ್ಯ ಜನರಿಗೆ ಖುಷಿಯಾಗಿದೆ. ಭ್ರಷ್ಟರು, ಕಾಳಧನಿಕರು, ಭಯೋತ್ಪಾದನೆಯಲ್ಲಿ ತೊಡಗಿಸಿಕೊಂಡವರಿಗೆ ಈ ಮೂಲಕ ತಕ್ಕ ಪಾಠವನ್ನು ಕಲಿಸಿದಂತಾಗುತ್ತದೆ ಎಂದು ಹೇಳಿದರು.