ತೆಲಂಗಾಣ ಕಾರ್ಮಿಕರ ಕಾಲ್ನಡಿಗೆ ಪ್ರಯಾಣಕ್ಕೆ ತಡೆ: ಊರಿಗೆ ಕಳಿಸುವ ಭರವಸೆ ನೀಡಿದ ಅಧಿಕಾರಿಗಳು
ಉಡುಪಿ, ಮೇ 11: ತೆಲಂಗಾಣದ ವಲಸೆ ಕಾರ್ಮಿಕರು ಕಾಲ್ನಡಿಗೆಯಲ್ಲೇ ಊರಿಗೆ ಹೊರಡುವಾಗ ಅಧಿಕಾರಿಗಳು ತಡೆದ ಪ್ರಸಂಗ ಉಡುಪಿಯಲ್ಲಿ ನಡೆದಿದೆ.
ಉಡುಪಿ ರೈಲ್ವೆ ನಿಲ್ದಾಣದಿಂದ ಇವರು ಕಾಲ್ನಡಿಗೆಯಲ್ಲಿ ಹೊರಟಿದ್ದರು. ಗರ್ಭಿಣಿಯರು, ಮಹಿಳೆಯರು, ಮಕ್ಕಳು ಸೇರಿದಂತೆ 40ಕ್ಕೂ ಅಧಿಕ ಕಾರ್ಮಿಕರು ಕಾಲ್ನಡಿಗೆಯಲ್ಲಿ ಹೋಗುತ್ತಿದ್ದಾಗ ಸ್ಥಳೀಯರು ಗಮನಿಸಿದ್ದಾರೆ. ಉಡುಪಿಯಲ್ಲೇ ಉಳಿಯುವಂತೆ ಸ್ಥಳೀಯರು ಒತ್ತಾಯ ಮಾಡಿದ್ದಾರೆ.
ಕರ್ನಾಟಕದ ವಲಸೆ ಕಾರ್ಮಿಕರ ಪಾಲಿಗೆ ಹೀರೋ ಆದ ಖಳನಾಯಕ ಸೋನು ಸೂದ್
ಆದರೆ ಸ್ಥಳೀಯರ ಮನವಿಗೆ ಒಪ್ಪದೇ ಕಾಲ್ನಡಿಗೆಯಲ್ಲೇ ಹೋಗುತ್ತೇವೆಂದು ಇವರು ಪಟ್ಟು ಹಿಡಿದಿದ್ದರು. ವಿಷಯ ತಿಳಿದು ತಕ್ಷಣ ಸ್ಥಳಕ್ಕೆ ಆಗಮಿಸಿದ ತಹಶೀಲ್ದಾರ್ ಪ್ರದೀಪ್, ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಕೂಡ ಕಾರ್ಮಿಕರ ಮನ ಒಲಿಸುವ ಪ್ರಯತ್ನ ನಡೆಸಿದರೂ ಸಫಲವಾಗಲಿಲ್ಲ. ಮಣಿಪಾಲ ವಿಶ್ವವಿದ್ಯಾಲಯದ ಆಂಧ್ರ ವಿದ್ಯಾರ್ಥಿಗಳನ್ನು ಬಳಸಿಕೊಂಡು ಮನವೊಲಿಸುವ ಪ್ರಯತ್ನ ಮಾಡಿದಾಗ ಕಾರ್ಮಿಕರು ಮನವರಿಕೆ ಆದಂತೆ ಕಂಡುಬಂದರು.
ಒಂದು ದಿನ ಉಡುಪಿಯಲ್ಲೇ ಉಳಿದರೆ ಬಸ್ ವ್ಯವಸ್ಥೆ ಮಾಡುವುದಾಗಿ ತಹಶೀಲ್ದಾರ್ ಭರವಸೆ ನೀಡಿದ ಬಳಿಕ ಒಪ್ಪಿಕೊಂಡು ಊರಿಗೆ ತೆರಳುವ ನಿರ್ಧಾರವನ್ನು ಬದಲಿಸಿದರು. ಎರಡು ದಿನಗಳಲ್ಲಿ ತೆಲಂಗಾಣಕ್ಕೆ ಕಳುಹಿಸುವುದಾಗಿ ಮನವೊಲಿಸುವಷ್ಟರಲ್ಲಿ ಅಧಿಕಾರಿಗಳಿಗೆ ಸಾಕುಬೇಕಾಯಿತು.