ಪ್ರಧಾನಿ ಮೋದಿಗೆ ಕಂಟಕ ಕಳೆಯಲು ಕೊಲ್ಲೂರಿನಲ್ಲಿ ಯಾಗ!
ನೋಟು ನಿಷೇಧದ ನಿರ್ಧಾರ ನಂತರ ಪ್ರಧಾನಿ ನರೇಂದ್ರ ಮೋದಿ ಅವರ ಜಾತಕದಲ್ಲಿ ಕಂಟಕ ಕಾದಿದೆ ಎಂದು ಜ್ಯೋತಿಷಿಯೊಬ್ಬರು ಹೇಳಿದ ಭವಿಷ್ಯವನ್ನು ಗಂಭಿರವಾಗಿ ತೆಗೆದುಕೊಂಡಿರುವ 'ನಮೋ' ಅಭಿಮಾನಿಗಳು ಕೊಲ್ಲೂರಿನಲ್ಲಿ ನವಚಂಡಿಕಾ ಯಾಗ ಮಾಡಿಸಿದ್ದಾರೆ
ಉಡುಪಿ, ಜನವರಿ 2: ಪ್ರಧಾನಿ ಗಾದಿಯೇರುವ ಮುನ್ನ ವಿವಾದ ಪುರುಷರಾಗಿದ್ದ ನರೇಂದ್ರ ಮೋದಿ, ನೋಟು ರದ್ದತಿ ಬಳಿಕ ಸಂಕಷ್ಟದಲ್ಲಿದ್ದಾರೆ. ಪ್ರಧಾನಿ ಮೋದಿಗೆ ಇರುವ ಕಂಟಕ ನಿವಾರಣೆ ಮಾಡಲು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ನವಚಂಡಿಕಾ ಮಹಾಯಾಗ ನಡೆಸಲಾಗಿದೆ.
ಕಾಳಧನಿಕರನ್ನು ಕೆಣಕಿದ್ದರಿಂದ ಪ್ರಧಾನಿ ನರೇಂದ್ರ ಮೋದಿಗೆ ಕಂಟಕವಿದೆ ಎಂಬುದು ಜ್ಯೋತಿಷ್ಯ ಕ್ಷೇತ್ರದಲ್ಲಿ ಬಹಳ ಚರ್ಚೆಯಲ್ಲಿರುವ ವಿಷಯ. ಈ ಕಾರಣಕ್ಕೆ ಪ್ರಧಾನಿ ಮೋದಿಗೆ ಯಾವ ಕೆಟ್ಟ ಕಣ್ಣುಗಳು ಕುಕ್ಕಬಾರದು. ಈಗಿರುವ ವೇಗದಲ್ಲೇ ಮೋದಿ ಅಡಳಿತ ನಡೆಸಬೇಕೆಂದು ಕೊಲ್ಲೂರಿನಲ್ಲಿ ನವಚಂಡಿಕಾ ಮಹಾಯಾಗ ನಡೆಸಲಾಯಿತು.[ನರೇಂದ್ರ ಮೋದಿ ಜನ್ಮ ಜಾತಕ - ಮುಖ್ಯಾಂಶಗಳು]

ಕುಂದಾಪುರ ತಾಲೂಕಿನ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಪ್ರಧಾನಿ ನರೇಂದ್ರ ಮೋದಿಯ ಸಾವಿರಾರು ಅಭಿಮಾನಿಗಳ ಸಮ್ಮುಖದಲ್ಲಿ ಯಾಗ ನಡೆಯಿತು. ನವಚಂಡಿ ಮಹಾಯಾಗಕ್ಕೆ ಮುನ್ನ ಅಭಿಮಾನಿಗಳು 12 ಕಿಲೋಮೀಟರ್ ಪಾದಯಾತ್ರೆ ಮಾಡಿದರು.
ಬಿಜೆಪಿ ನಾಯಕ ಸುಕುಮಾರ ಶೆಟ್ಟಿ ನೇತೃತ್ವದಲ್ಲಿ ಜಡ್ಕಲ್ ನಿಂದ ನಡೆದ ಪಾದಯಾತ್ರೆಯಲ್ಲಿ ಮಹಿಳೆಯರು- ವೃದ್ಧರು, ಅಂಗವಿಕಲರು ಪಾಲ್ಗೊಂಡರು. ರಾಜ್ಯದಲ್ಲಿ ನಡೆಯಲಿರುವ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಈ ಸಂದರ್ಭದಲ್ಲಿ ಪ್ರಾರ್ಥನೆ ಮಾಡಲಾಯಿತು.[ವರ್ಷ ಭವಿಷ್ಯ: ನರೇಂದ್ರ ಮೋದಿಗೆ 2017 ಹೇಗಿರುತ್ತೆ?]

ವೃಶ್ಚಿಕ ರಾಶಿಯವರಾದ ನರೇಂದ್ರ ಮೋದಿ ಅವರಿಗೆ ಸದ್ಯಕ್ಕೆ ಸಾಡೇಸಾತ್ ನಡೆಯುತ್ತಿದೆ. ಜನವರಿ 26ಕ್ಕೆ ಧನು ರಾಶಿ ಪ್ರವೇಶ ಮಾಡುವ ಶನಿ ಗ್ರಹದಿಂದ ಮೋದಿ ಅವರಿಗೆ ತೊಂದರೆಯಾಗುತ್ತದೆ ಎಂಬುದು ಕೆಲವು ಜ್ಯೋತಿಷಿಗಳ ಅಭಿಮತ. ಆದರೆ ಗುರು ಬಲ ಇರುವುದರಿಂದ ಅಂಥ ಸಮಸ್ಯೆಗಳೇನೂ ಆಗುವುದಿಲ್ಲ ಎಂಬುದು ಮತ್ತೆ ಕೆಲವರ ವಾದ.
ಕೆಲ ಖಾಸಗಿ ವಾಹಿನಿಗಳಲ್ಲಿ ಈ ಬಗ್ಗೆ ಜ್ಯೋತಿಷಿಗಳು, ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರಿಗೆ ಕಂಟಕ ಇದೆ ಎಂದು ಭವಿಷ್ಯ ಹೇಳುತ್ತಿರುವುದು ಹಾಗೂ ಇದೇ ವೇಳೆ ಮೋದಿ ಅವರ ಹೆಸರಿನಲ್ಲಿ ಹೋಮ ಮಾಡಿಸುತ್ತಿರುವುದು ಒಂದಕ್ಕೊಂದು ತಾಳೆಯಾಗುತ್ತಿದೆ.












Click it and Unblock the Notifications