Get Updates
Get notified of breaking news, exclusive insights, and must-see stories!

ಕೊಡಗಿನ ನಷ್ಟವನ್ನೆಲ್ಲ ತುಂಬಿಸು ಕೃಷ್ಣಾ : ವಿದ್ಯಾಧೀಶ ತೀರ್ಥ ಸ್ವಾಮೀಜಿ

ಕಷ್ಟ ಬಂದಲ್ಲಿ ಶ್ರೀ ಕೃಷ್ಣ ಇದ್ದೇ ಇರುತ್ತಾನೆ. ಪ್ರಕೃತಿ ವಿಕೋಪ ಆದಾಗಲೂ ಕೃಷ್ಣ ರಕ್ಷಣೆ ನೀಡಿದ್ದಾನೆ. ನಮ್ಮ ಕೊಡಗು ಜಿಲ್ಲೆಗೆ ಹಾನಿಗೊಳಗಾಗಿದೆ, ಅಲ್ಲಿನ ಜನರಿಗೆ ಬಹಳ ಸಮಸ್ಯೆಯಾಗಿದೆ. ಕೊಡಗಿಗಾಗಿ ನಾವು ಭಕ್ತಿಯ ಪ್ರಾರ್ಥನೆ ಮಾಡುತ್ತೇವೆ. ನಷ್ಟವನ್ನೆಲ್ಲ ತುಂಬಿಸು ದೇವಾ ಅಂತ ಪೂಜೆ ಸಲ್ಲಿಸುತ್ತೇವೆ ಎಂದು ಕೃಷ್ಣಮಠದ ವಿದ್ಯಾಧೀಶ ಸ್ವಾಮೀಜಿ ಹೇಳಿದ್ದಾರೆ.

ಭಕ್ತರು ಕಷ್ಟದಲ್ಲಿದ್ದಾಗ ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುವುದು ಸರಿಯಲ್ಲ. ಹೀಗಾಗಿ ಈ ಬಾರಿ ಸರಳವಾಗಿ ಅಷ್ಟಮಿ ಆಚರಿಸುತ್ತೇವೆ. ಧಾರ್ಮಿಕ ವಿಧಿ ವಿಧಾನಗಳು ಸಂಪ್ರದಾಯದಂತೆ ಮುಂದುವರಿಯುತ್ತದೆ. ತೊಂದರೆಗೀಡಾದವರಿಗೆ, ನಿರಾಶ್ರಿತರಿಗೆ ಕೃಷ್ಣ ಪ್ರಸಾದ ಕಳುಹಿಸಿಕೊಡಲಾಗುವುದು ಎಂದು ಉಡುಪಿಯಲ್ಲಿ ಕೃಷ್ಣಮಠದ ಪರ್ಯಾಯ ವಿದ್ಯಾಧೀಶ ಸ್ವಾಮೀಜಿ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ಹೇಳಿದ್ದಾರೆ.

Krishna Janmashtami in Udupi : Vidhyadheesha Teertha Swamiji prays for Kodagu

ಉಡುಪಿಯಲ್ಲಿ ಸಂಭ್ರಮದ ಕೃಷ್ಣ ಜನ್ಮಾಷ್ಟಮಿ

ಉಡುಪಿಯಲ್ಲಿಂದು ಶ್ರೀಕೃಷ್ಣಜನ್ಮಾಷ್ಟಮಿ ಸಡಗರ. ಬೆಳಿಗ್ಗೆಯಿಂದಲೇ ಭಕ್ತರ ದಂಡು ಕೃಷ್ಣಮಠದತ್ತ ಹರಿದು ಬರುತ್ತಿದೆ. ಕಳೆದ ಎರಡು ದಿನಗಳ ಹಿಂದಿನಿಂದಲೇ ಕೃಷ್ಣಮಠ ಮತ್ತು ರಥಬೀದಿಗೆ ಹಬ್ಬದ ಕಳೆ ಬಂದಿದೆ. ಉತ್ಸವ ಪ್ರಯುಕ್ತ ಕೃಷ್ಣಮಠವನ್ನು ಬಗೆಬಗೆಯ ಹೂವಿನಿಂದ ಅಲಂಕಾರಗೊಳಿಸಲಾಗಿದ್ದು, ಹಬ್ಬದ ವಾತಾವರಣ ನೆಲೆಸಿದೆ. ಪರ್ಯಾಯ ಶ್ರೀಗಳು ಬೆಳಿಗ್ಗೆ ಕೃಷ್ಣನಿಗೆ ಮಹಾಪೂಜೆ ನೆರವೇಸಿದರು.

ಅಷ್ಟಮಿ ಹಬ್ಬ ಬಂದಿರುವುದನ್ನು ಸಾರುವಂತೆ ಉಡುಪಿಯಾದ್ಯಂತ ಹುಲಿವೇಷಧಾರಿಗಳು ಸಂಚರಿಸಿ ನೃತ್ಯ ಮಾಡುತ್ತಿದ್ದು ಅದನ್ನು ನೋಡುವುದೇ ಕಣ್ಣಿಗೊಂದು ಹಬ್ಬ. ಮುಖ್ಯವಾಗಿ ಹುಲಿಕುಣಿತಗಳು ಉಡುಪಿಯಲ್ಲಿ ಅಧಿಕೃತವಾಗಿ ಪ್ರಾರಂಭವಾಗುವುದೇ ಅಷ್ಟಮಿ ದಿವಸ. ಹೀಗಾಗಿ ಇಂದು ಬೆಳಿಗ್ಗೆಯೇ ಹುಲಿಕುಣಿತ ತಂಡಗಳು ನಗರ ಸಂಚಾರ ಮಾಡುತ್ತಿವೆ. ನೋಟಿನ ಮಾಲೆಗಳನ್ನು ಹಾಕಿದ ಹುಲಿವೇಷಧಾರಿಗಳು ಮೊದಲ ದಿನವಾದ ಇಂದು ಕೃಷ್ಣನಿಗೆ ಪೂಜೆ ಸಲ್ಲಿಸಿ ಸಂಚಾರ ಪ್ರಾರಂಭಿಸಿದರು.

ಒಂದೊಂದು ತಂಡದಲ್ಲಿ ಹತ್ತಾರು ವೇಷಧಾರಿಗಳು ಕುಣಿದು ಕುಪ್ಪಳಿಸುವುದು ನೋಡುವುದೇ ಚೆಂದ. ನಗರದ ಜನತೆ ಕೂಡ ನಾಮುಂದು ತಾಮುಂದು ಎಂಬಂತೆ ಹುಲಿವೇಷಧಾರಿಗಳನ್ನು ನೋಡಲು ಮುಗಿಬೀಳುತ್ತಿದ್ದಾರೆ. ಹುಲಿವೇಷದ ತಂಡಗಳಿಗೆ ಪ್ರೋತ್ಸಾಹ ನೀಡಲು ಜನರೂ ಕೂಡ ನೂರು, ಐನೂರು ಮತ್ತು ಸಾವಿರದ ನೋಟುಗಳನ್ನು ನೀಡಿ ಹುರಿದುಂಬಿಸುತ್ತಿದ್ದಾರೆ. ಕೆಲವೆಡೆಗಳಲ್ಲಿ ಹುಲಿವೇಷಧಾರಿಗಳಿಗೆ ನೋಟಿನ ಮಾಲೆಯನ್ನೂ ಹಾಕುತ್ತಿದ್ದಾರೆ.

ಅಖಂಡ ಭಜನೆ, ಮೊಸರು ಕಡಿಯುವ ಸ್ಪರ್ಧೆ

ಉಡುಪಿಯ ಶ್ರೀಕೃಷ್ಣಮಠದಲ್ಲಿಂದು ಶ್ರೀಕೃಷ್ಣಜನ್ಮಾಷ್ಠಮಿ ಉತ್ಸವದ ಸಂಬಂಧ ಮಠದಲ್ಲಿ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಸಂಪನ್ನಗೊಂಡವು. ನಾಡಿನ ಮೂಲೆ ಮೂಲೆಯ ಜನರು ಇಂದು ಬೆಳಗ್ಗಿನಿಂದಲೇ ಶ್ರೀ ಕೃಷ್ಣಮಠಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ವಿವಿಧ ಭಜನಾ ಮಂಡಳಿಗಳಿಂದ ಅಖಂಡ ಭಜನಾ ಕಾರ್ಯಕ್ರಮ ನಡೆಯುತ್ತಿದೆ, ಉತ್ಸವದ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಮುದ್ದುಕೃಷ್ಣವೇಷ ಸ್ಪರ್ಧೆ ಎಲ್ಲರ ಗಮನ ಸೆಳೆಯಿತು.

ರಥಬೀದಿ, ರಾಜಾಂಗಣದಲ್ಲಿ ಕಣ್ಣು ಹಾಯಿಸಿದಷ್ಟೂ ಭಕ್ತರ ಸಮೂಹ. ಕೃಷ್ಣಾಷ್ಟಮಿಯ ನಿಮಿತ್ತ ಹತ್ತು ಹಲವು ಕಾರ್ಯಗಳಿಗೆ ಕಳಶವಿಟ್ಟಂತೆ ಅಖಂಡ ಭಜನೆ, ಮೊಸರು ಕಡಿಯುವ ಸ್ಪರ್ಧೆ, ಕೋಲಾಟ, ಹೂ ಕಟ್ಟುವ ಸ್ಪರ್ಧೆ ಭಕ್ತರ ಕಣ್ಮನ ತಣಿಸಿತು. ಪುಟಾಣಿಗಳ ಮುದ್ದುಕೃಷ್ಣವೇಷ ಸ್ಪರ್ಧೆ ಉತ್ಸವಕ್ಕೆ ಕಳೆ ತಂದಿತು. ಜೊತೆಗೆ ಕೃಷ್ಣನ ಲೀಲೆಗಳ ಅನಾವರಣವೂ ರಾಜಾಂಗಣದಲ್ಲಿ ನಡೆಯಿತು. ಬೆಳಗ್ಗೆ ಪರ್ಯಾಯ ಶ್ರೀಗಳು ಕೃಷ್ಣನಿಗೆ ಅಲಂಕಾರ ಮಾಡಿ ಮಹಾಪೂಜೆ ಪೂರೈಸಿದರು. ಅಷ್ಟಮಿಯ ಪ್ರಮುಖ ವಿಧಿಯಾದ ಅರ್ಘ್ಯ ಪ್ರಧಾನ ಮತ್ತು ಮಹಾಪೂಜೆ ಇಂದು ರಾತ್ರಿ ಚಂದ್ರೋದಯದ 11.45ರ ಸುಮಾರಿಗೆ ನಡೆಯಲಿದೆ.

ಮಠಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಭೋಜನದೊಂದಿಗೆ ಉಂಡೆ-ಚಕ್ಕುಲಿ ಪ್ರಸಾದವನ್ನೂ ನೀಡಲಾಗುತ್ತಿದೆ. ಇದಕ್ಕಾಗಿ ಸಾವಿರಾರು ಉಂಡೆಚಕ್ಕುಲಿಗಳು ಸಿದ್ಧಗೊಂಡಿವೆ. ಉತ್ಸವಕ್ಕೆ ಗಣ್ಯರ ದಂಡೇ ಆಗಮಿಸಿದ್ದು ಎಲ್ಲೆಲ್ಲೂ ಜನಸಾಗರವೇ ಇದೆ. ನಾಳೆ ರಥಬೀದಿಯಲ್ಲಿ ಶ್ರೀಕೃಷ್ಣ ಲೀಲೋತ್ಸವ ನಡೆಯಲಿದ್ದು, ಉತ್ಸವ ಪರಾಕಾಷ್ಠೆ ತಲುಪಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+