ಕೋಟ ಡಬಲ್ ಮರ್ಡರ್:ಉಡುಪಿ ಜಿ.ಪಂ.ಸದಸ್ಯ ಸೂತ್ರಧಾರಿ, ಬಂಧಿತರ ಸಂಖ್ಯೆ 6ಕ್ಕೆ ಏರಿಕೆ
ಉಡುಪಿ, ಫೆಬ್ರವರಿ 08: ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಉಡುಪಿ ಜಿಲ್ಲಾ ಪಂಚಾಯತ್ ಬಿಜೆಪಿ ಸದಸ್ಯ ರಾಘವೇಂದ್ರ ಕಾಂಚನ್ (38) ಸಹಿತ ನಾಲ್ಕು ಮಂದಿಯನ್ನು ಬಂಧಿಸಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಲಕ್ಷ್ಮಣ್ ನಿಂಬರಗಿ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕೋಟ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತರ ಸಂಖ್ಯೆ 6 ಕ್ಕೆ ಏರಿದೆ.
ಕಳೆದ ಜನವರಿ 26ರಂದು ತಡ ರಾತ್ರಿ ಕೋಟದಲ್ಲಿ ಭರತ್ ಹಾಗು ಯತೀಶ್ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. ಈ ಇಬ್ಬರು ಯುವಕರ ಬರ್ಬರ ಹತ್ಯೆಗೆ ಸಂಬಂಧಿಸಿದಂತೆ ನಿನ್ನೆ ಗುರುವಾರ ಮಡಿಕೇರಿಯಲ್ಲಿ ರಾಜಶೇಖರ್ ರೆಡ್ಡಿ (44), ರವಿ ಯಾನೆ ಮೆಡಿಕಲ್ ರವಿ (42) ಅವರನ್ನು ಕೋಟ ಪೊಲೀಸರು ಬಂಧಿಸಿದ್ದರು.
ಇದೀಗ ಬಂದಿರುವ ಸುದ್ದಿಯೆಂದರೆ ಡಬಲ್ ಮರ್ಡರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಜಾನೆ ರಾಘವೇಂದ್ರನನ್ನು ಕೋಟದಲ್ಲಿ ಬಂಧಿಸಲಾಗಿದೆ. ಜನವರಿ 23ರಂದು ಕೊಲೆ ಆರೋಪಿಗಳು ರಾಘವೇಂದ್ರನೊಂದಿಗೆ ಸಂಪರ್ಕದಲ್ಲಿದ್ದು, ಕೊಲೆ ನಡೆದ ರಾತ್ರಿ ಕೂಡ ರಾಘವೇಂದ್ರ ಕಾಂಚನ್ ನನ್ನು ಸಂಪರ್ಕ ಮಾಡಿದ್ದರು ಎಂದು ಹೇಳಲಾಗಿದೆ.
ಈ ನಿಟ್ಟಿನಲ್ಲಿ ತನಿಖೆ ಆರಂಭಿಸಿದ್ದ ಪೊಲೀಸರು ರಾಘವೇಂದ್ರನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವುದು ದೃಢಪಟ್ಟಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ .

ಈ ಕೊಲೆ ಜಮೀನಿಗೆ ಸಂಬಂಧಿಸಿದ ವಿಚಾರದಲ್ಲಿ ನಡೆದಿದೆ ಎನ್ನಲಾಗಿತ್ತು. ಟಾಯ್ಲೆಟ್ ಪಿಟ್ ಒಂದಕ್ಕೆ ಸಂಬಂಧಿಸಿದ ಜಮೀನಿನ ವಿವಾದದಲ್ಲಿ ಸ್ನೇಹಿತ ಲೋಹಿತ್ ಎಂಬುವವನಿಗೆ ಬೆಂಬಲಿಸಿದ್ದಕ್ಕೆ ಭರತ್ ಮತ್ತು ಯತೀಶ್ ಮೇಲೆ ದಾಳಿ ನಡೆಸಲಾಗಿತ್ತು ಎಂದು ಶಂಕಿಸಲಾಗಿತ್ತು.
ಕೋಟದಲ್ಲಿ ನಡೆದ ಡಬ್ಬಲ್ ಮರ್ಡರ್ ಗೆ ಉಡುಪಿ ಜಿ.ಪಂ. ಸದಸ್ಯ ರಾಘವೇಂದ್ರ ಕಾಂಚನ್ ಪ್ರಮುಖ ಸೂತ್ರಧಾರಿ ಎಂದು ಹೇಳಲಾಗಿದೆ. ಅದಲ್ಲದೇ ರಾಘವೇಂದ್ರ ಕಾಂಚನ್ ನೊಂದಿಗೆ ಕೃತ್ಯ ಎಸಗಿದ ರೌಡಿಶೀಟರ್ ಹರೀಶ್ ರೆಡ್ಡಿ , ರವೀಂದ್ರ ಪೂಜಾರಿ, ಮಹೇಶ್ ಗಾಣಿಗ ಎಂಬುವವರನ್ನು ಪೊಲೀಸರು ಶಿವಮೊಗ್ಗದ ಹೊಸನಗರದಲ್ಲಿ ಬಂಧಿಸಿದ್ದಾರೆ.
ಜನವರಿ 26ರ ರಾತ್ರಿ ಭೂ ವಿವಾದ ಕುರಿತು ರಾಜಿ ಪಂಚಾಯಿತಿಗೆ ಹೋಗಿದ್ದಾಗ ಕೊಲೆ ನಡೆದಿದೆ. ಉಡುಪಿ ಜಿಲ್ಲಾ ಪಂಚಾಯತ್ ಸದಸ್ಯ ರಾಘವೇಂದ್ರ ಕಾಂಚನ್ ಗೂ ಮೃತ ಭರತ್ ಗೂ ಈ ಹಿಂದಿನಿಂದಲೂ ವೈಷಮ್ಯವಿತ್ಯು. ಮೃತ ಭರತ್ ನ ಬೆಳವಣಿಗೆಯನ್ನು ರಾಘವೇಂದ್ರ ಸಹಿಸಿರಲಿಲ್ಲ ಎಂದು ಹೇಳಲಾಗಿದೆ.












Click it and Unblock the Notifications