ಕಾಶೀ ಮಠಾಧೀಶರ ಚಾತುರ್ಮಾಸ ವ್ರತ ಉಡುಪಿಯಲ್ಲಿ ಆರಂಭ
ಉಡುಪಿ, ಜುಲೈ 23: ಕಾಶೀ ಮಠಾಧೀಶ ಶ್ರೀಮದ್ ಸಂಯಮೀಂದ್ರ ತೀರ್ಥ ಸ್ವಾಮೀಜಿಯವರ ಚಾತುರ್ಮಾಸ ವ್ರತ ಉಡುಪಿ ಜಿಲ್ಲೆ, ಕುಂದಾಪುರ ತಾಲೂಕು ಕೋಟದಲ್ಲಿ ಆರಂಭವಾಗಿದೆ.
ವಿಕಾರಿ ನಾಮ ಸಂವತ್ಸರದ ಚಾತುರ್ಮಾಸ ಸ್ವೀಕಾರಾರ್ಥವಾಗಿ ಕೋಟಾ ಶ್ರೀ ಕಾಶೀಮಠದಲ್ಲಿ ಪ್ರಾತಃಕಾಲದಲ್ಲಿ ದೇವತಾ ಪ್ರಾರ್ಥನೆ, ರಕ್ಷತ್ರಯ ಹವನ, ಸಾನಿಧ್ಯ ಹವನವು ವಿವಿಧ ಗೋತ್ರೆಯ ವೈದಿಕ ವೃಂದದವರ ನೇತೃತ್ವದಲ್ಲಿ ನಡೆಯಿತು.
ಶ್ರೀ ಸಂಸ್ಥಾನದ ಆರಾಧ್ಯ ದೇವರಾದ ಶ್ರೀವ್ಯಾಸ ರಘುಪತಿ ನರಸಿಂಹ ದೇವರಿಗೆ ವಿಶೇಷ ಪಂಚಾಮೃತ ಗಂಗಾಭಿಷೇಕ, ಪವಮಾನ ಅಭಿಷೇಕ, ಶತಕಲಶಾಭಿಷೇಕ, ಕನಕಾಭಿಷೇಕಗಳು ಶ್ರೀಗಳವರ ದಿವ್ಯಹಸ್ತಗಳಿಂದ ನೆರವೇರಿದವು. ಬಳಿಕ ತಪ್ತ ಮುದ್ರಾಧಾರಣೆಯನ್ನು ಸ್ವೀಕರಿಸಿದ ಶ್ರೀಗಳು, ಸಮಾಜದ ಶಿಷ್ಯವೃಂದಕ್ಕೆ ತಪ್ತ ಮುದ್ರಾಧಾರಣೆ ನಡೆಸಿ ಅನುಗ್ರಹಿಸಿದರು,

ಮಧ್ಯಾಹ್ನ ಪೂಜೆ ಮತ್ತು ಮೃತಿಕೆಯನ್ನು ಪೂಜಿಸಿ ಶ್ರೀಗಳು ಚಾತುರ್ಮಾಸ ವ್ರತ ಸ್ವೀಕರಿಸಿದರು. ರಾತ್ರಿ ಪೂಜೆಯ ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಶ್ರೀಗಳು ಆಶಿರ್ವಚನವಿತ್ತು, ಗೌಡ ಸಾರಸ್ವತ ಸಮಾಜದಲ್ಲಿ ಹಿಂದಿನಿಂದಲೂ ನಡೆದು ಬಂದ ಪ್ರತಿಯೊಂದು ಆಚಾರ-ವಿಚಾರ, ಸಂಸ್ಕಾರಗಳು ಅತ್ಯಮೂಲ್ಯವಾಗಿದ್ದು ಅದನ್ನು ಸಮಾಜ ಬಾಂಧವರು ಮುಂದುವರಿಸುವಂತೆ ತಿಳಿಸಿದರು.
ಹಾಗೇಯೆ ಸಮಾಜದಲ್ಲಿ ದೇವಭಕ್ತಿ,ಗುರುಭಕ್ತಿ ಅತ್ಯಂತ ಅನುಕರಣೀಯವಾಗಿದ್ದು ಇದು ಇತರ ಸಮಾಜದವರಿಗೂ ಅನುಕರಣೀಯವಾಗಿದೆ ಎಂದು ಶ್ರೀಗಳು ಹೇಳಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಮಠ, ಮಂದಿರಗಳ ಮೊಕ್ತೇಸರರು, ಆಡಳಿತ ಮಂಡಳಿಯ ಪ್ರತಿನಿಧಿಗಳು ಚಾತುರ್ಮಾಸ ವೃತ ಸ್ವೀಕರಿಸಿದ ದಿನದಂದು ಶ್ರೀಗಳವರಿಗೆ ಹಾರಾರ್ಪಣೆಗೈದು ಪುನೀತರಾದರು.
ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಚಾತುರ್ಮಾಸ ಸಮಿತಿಯ ದಾಮೋದರ ಶೆಣೈ ಕುಂದಾಪುರ, ವೆಂಕಟೇಶ ಹರಿಪ್ರಭು, ರಮೇಶ್ ಪಡಿಯಾರ್, ನರಸಿಂಹ ಪ್ರಭು, ಕೆ.ರಾಧಾಕೃಷ್ಣ, ವಾಸುದೇವ ನಾಯಕ್, ವೇದವ್ಯಾಸ ಪೈ, ಶ್ರೀಕಾಂತ್ ಶೆಣೈ, ಅರವಿಂದ ಭಟ್ ಉಪಸ್ಥಿತರಿದ್ದರು.












Click it and Unblock the Notifications