Heart Attack: ಉಡುಪಿಯಲ್ಲಿ ಹೃದಯಾಘಾತದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿ ಸಾವು
ಉಡುಪಿ, ಡಿಸೆಂಬರ್ 21: ಪ್ರಥಮ ಪಿಯುಸಿ ವಿದ್ಯಾರ್ಥಿ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಉಡುಪಿಯಲ್ಲಿ ನಡೆದಿದೆ. ಅಫ್ಕಾರ್ (17) ಹೃದಯಾಘಾತದಿಂದ ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ.
ಕಲ್ಯಾಣಪುರ ಮಿಲಾಗ್ರಿಸ್ ಪಿಯು ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿಯಾಗಿದ್ದ ಅಫ್ಕಾರ್ ಸ್ಟೂಡೆಂಟ್ ಇಸ್ಲಾಮಿಕ್ ಅರ್ಗನೈಸೇಶನ್ ಆಫ್ ಇಂಡಿಯಾ ಇದರ ಸಕ್ರೀಯ ಸದಸ್ಯನಾಗಿದ್ದ. ಹುಟ್ಟಿನಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ವಿದ್ಯಾರ್ಥಿ ಅಫ್ಕಾರ್ಗೆ ಇತ್ತೀಚಿಗೆ ಆರೋಗ್ಯದಲ್ಲಿ ಏರುಪೇರಾಗಿತ್ತು.
ಡಿಸೆಂಬರ್ 6ರಂದು ನಾರಾಯಣ ಹೃದಯಾಲಯದಲ್ಲಿ ಚಿಕಿತ್ಸೆ ಪಡೆದಿದ್ದ ಅಫ್ಕಾರ್ , ಡಿಸೆಂಬರ್ 18ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಮರಳಿದ್ದ. ಊರಿಗೆ ಹಿಂದಿರುಗಿದ ಸಂದರ್ಭ ಮತ್ತೆ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ರವಾಸಿದ್ದಾರೆ. ಆದರೆ ದುರಾದೃಷ್ಟವಶಾತ್ ಅಫ್ಕಾರ್ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತಪಟ್ಟಿದ್ದಾನೆ.

ಹೃದಯಾಘಾತದಿಂದ ಶಾಲಾ ಬಾಲಕಿ ಸಾವು
ಚಿಕ್ಕಮಗಳೂರು: ಶಾಲೆಗೆ ತೆರಳಲು ಬಸ್ ಕಾಯುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದ ಬಾಲಕಿ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಸರ್ಕಲ್ ಬಳಿ ನಡೆದಿದೆ.
ಮೂಡಿಗೆರೆ ತಾಲೂಕಿನ ಜೊಗಣ್ಣನಕೆರೆ ಗ್ರಾಮದ ಕೆಸವಳಲು ಸಮೀಪದ ಸೃಷ್ಟಿ(13) ಮೃತ ಶಾಲಾ ಬಾಲಕಿ. ದಾರದಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 7ನೇ ತರಗತಿ ವ್ಯಾಸಂಗ ಮಾಡುತಿದ್ದ ಸೃಷ್ಟಿ ಗ್ರಾಮದ ಅರ್ಜುನ ಹಾಗೂ ಸುಮ ದಂಪತಿಗಳ ಮಗಳು. ಬುಧವಾರ ಬೆಳಿಗ್ಗೆ 9.30ರ ಸಮಯದಲ್ಲಿ ಶಾಲೆಗೆ ಹೊಗಲು ದಾರದಹಳ್ಳಿ ಸರ್ಕಲ್ ಬಳಿ ಕುಸಿದು ಬಿದ್ದಿದ್ದಾಳೆ.
ಕೂಡಲೇ ಮೂಡಿಗೆರೆ ಎಂ.ಜಿ.ಎಂ ಆಸ್ಪತ್ರೆಗೆ ಬಾಲಕಿಯನ್ನು ರವಾನಿಸಿದ್ದಾರೆ. ಆದರೆ ಸ್ಥಳದಲ್ಲೇ ತೀವ್ರ ಹೃದಯಾಘಾತದಿಂದ ನಿಧನ ಹೊಂದಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಮೃತ ವಿದ್ಯಾರ್ಥಿನಿಯ ಪಾರ್ಥಿವ ಶರೀರವನ್ನು ಕೆಸವಳಲಿಗೆ ತೆಗೆದುಕೊಂಡು ಹೊಗಲಾಗಿದ್ದು, ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.












Click it and Unblock the Notifications